ಆನರ್ಹ ಶಾಸಕರ ಕ್ಷೇತ್ರಗಳಿಗೆ ರಾಜ್ಯ ಸರಕಾರದಿಂದ ಕೋಟಿ ಕೋಟಿ ಅನುದಾನ
ಬೆಂಗಳೂರು, ಸೆಪ್ಟೆಂಬರ್ 15: ಉಪಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು, 17 ಅನರ್ಹ ಶಾಸಕರನ್ನು ಸಮಾಧಾನ ಮಾಡುವ ಉದ್ದೇಶದಿಂದ ರಾಜ್ಯ ಸರಕಾರದಿಂದ ಉದಾರವಾಗಿ ಅನುದಾನ ನೀಡಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶನಿವಾರ ಬಿ. ಸಿ. ಪಾಟೀಲ್ ಪ್ರತಿನಿಧಿಸುವ ಹಿರೇಕೆರೂರು ಕ್ಷೇತ್ರದ ಅಭಿವೃದ್ಧಿಗೆ 26.5 ಕೋಟಿ ಬಿಡುಗಡೆ ಮಾಡಿದ್ದಾರೆ.
ಹಲವು ಅನರ್ಹ ಶಾಸಕರು ಯಡಿಯೂರಪ್ಪ ಅವರನ್ನು ಶುಕ್ರವಾರದಂದು ಭೇಟಿ ಆಗಿ, ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಬಿಜೆಪಿ ನಾಯಕರು ತಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಆ ನಂತರ ರಾಜ್ಯ ಸರಕಾರದಿಂದ ಈ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
ಸುಪ್ರೀಂ ಕೋರ್ಟ್ ನಲ್ಲಿನ ತಮ್ಮ ಕಾನೂನು ಸಮರದಲ್ಲೂ ಬಿಜೆಪಿಯಿಂದ ಯಾವುದೇ ಬೆಂಬಲ- ಸಹಕಾರ ನೀಡುತ್ತಿಲ್ಲ ಎಂಬ ಬಗ್ಗೆ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ಯಡಿಯೂರಪ್ಪ ಅವರು ಮಸ್ಕಿ (ಪ್ರತಾಪ್ ಗೌಡ ಪಾಟೀಲ) ಹಾಗೂ ಕರ್ನಾಟಕ ಅಭಿವೃದ್ಧಿ ಮಂಡಳಿ ನಿಧಿಯಿಂದ ಆನಂದ್ ಸಿಂಗ್ ಅವರಿಗೆ ತಲಾ 11 ಕೋಟಿ ರುಪಾಯಿ ಹಂಚಿದ್ದಾರೆ.

ಮೂಲಗಳ ಪ್ರಕಾರ, ಎಲ್ಲ 17 ವಿಧಾನಸಭಾ ಕ್ಷೇತ್ರಕ್ಕೂ 10ರಿಂದ 25 ಕೋಟಿ ತನಕ ಅನುದಾನ ಬಿಡುಗಡೆ ಮಾಡಲಾಗಿದೆ. ಎಚ್. ಡಿ. ಕುಮಾರಸ್ವಾಮಿ ಸರಕಾರ ಮಾಡಿದ್ದ ಅನುದಾನ ಹಂಚಿಕೆಯನ್ನು ರದ್ದು ಮಾಡಿ, ಮಸ್ಕಿ ಹಾಗು ಹೊಸಪೇಟೆಗೆ ಅನುದಾನ ನೀಡಲಾಗಿದೆ. ನವಬೆಂಗಳೂರು ಯೋಜನೆಯಿಂದ ಬೆಂಗಳೂರಿಗೆ ಅನುದಾನ ಬಿಡುಗಡೆ ಮಾಡಲಾಗಿದೆ.
ಎಂಟಿಬಿ ನಾಗರಾಜ್ ಪ್ರತಿನಿಧಿಸುವ ಹೊಸಕೋಟೆ ಕ್ಷೇತ್ರಕ್ಕೆ ಅತಿ ಹೆಚ್ಚು ಅನುದಾನವನ್ನು ಸರಕಾರ ಬಿಡುಗಡೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications