ಸುಲ್ತಾನ್ ಪಾಳ್ಯದ ಮೊಸಳೆ ಹೊಂಡಕ್ಕೆ ಮುಕ್ತಿ ಕೊಟ್ಟ ಪಾಲಿಕೆ
ಬೆಂಗಳೂರು, ಜೂ. 19 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಿಬ್ಬಂದಿ ಒಂದೇ ದಿನದಲ್ಲಿ ಸುಲ್ತಾನ್ ಪಾಳ್ಯ ರಸ್ತೆಯ ಗುಂಡಿಯನ್ನು ಮುಚ್ಚಿದ್ದಾರೆ. ಗುರುವಾರ ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರು ಈ ಹೊಂಡದಲ್ಲಿ ಮೊಸಳೆಯ ಕಲಾಕೃತಿ ನಿರ್ಮಿಸಿ ಬಿಬಿಎಂಪಿ ಗಮನ ಸೆಳೆದಿದ್ದರು.
ಶುಕ್ರವಾರ ಸುಲ್ತಾನ್ ಪಾಳ್ಯ ಮುಖ್ಯರಸ್ತೆಗೆ ಆಗಮಿಸಿದ ಪಾಲಿಕೆಯ ಸಿಬ್ಬಂದಿಗಳು ಮಣ್ಣು ತುಂಬಿ ಸುಮಾರು 12 ಅಡಿ ಉದ್ದದ ಗುಂಡಿಯನ್ನು ಮುಚ್ಚಿದ್ದಾರೆ. ಬಾದಲ್ ನಂಜುಡಸ್ವಾಮಿ ಅವರು ತಮ್ಮ ಪ್ರಯತ್ನದಲ್ಲಿ ಜಯಸಾಧಿಸಿದ್ದು, ವಾಹನ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ. [ಸುಲ್ತಾನ್ ಪಾಳ್ಯ ರಸ್ತೆಯಲ್ಲಿ ಈಜಾಡಿದ ಮೊಸಳೆ!]

ಮೊಸಳೆ ಈಜಾಡುತ್ತಿತ್ತು : ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರು ಸುಲ್ತಾನ್ ಪಾಳ್ಯ ರಸ್ತೆಯ ಹೊಂಡದಲ್ಲಿ ಮೊಸಳೆಯನ್ನು ಈಜಲು ಬಿಟ್ಟು ಗುರುವಾರ ಬಿಬಿಎಂಪಿ ಗಮನ ಸೆಳೆದಿದ್ದರು. ಸುಲ್ತಾನ್ ಪಾಳ್ಯ ಮುಖ್ಯರಸ್ತೆಯಲ್ಲಿನ ಸುಮಾರು 12 ಅಡಿ ಉದ್ದದ ಗುಂಡಿಯನ್ನು ಹಲವು ದಿನಗಳಿಂದ ಪಾಲಿಕೆ ಮುಚ್ಚಿರಲಿಲ್ಲ. [ನಿಮ್ಮ ಏರಿಯಾದಲ್ಲೂ ರಸ್ತೆ ಗುಂಡಿ ಇದ್ದರೆ ಚಿತ್ರ ತೆಗೆದು ಕಳಿಸಿ]
ನಂಜುಂಡಸ್ವಾಮಿ ಅವರು ಮೊಸಳೆಯನ್ನು ಈಜಲು ಬಿಟ್ಟು ಅದರ ಫೋಟೋವನ್ನು ಫೇಸ್ಬುಕ್ನಲ್ಲಿ ಹಾಕಿದ್ದರು. ಇದು ಎಲ್ಲಾ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಫೇಸ್ಬುಕ್ನಲ್ಲಿ ಬಿಬಿಎಂಪಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ನಂಜುಂಡಸ್ವಾಮಿ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದರು.
ಶುಕ್ರವಾರ ಬೆಳಗ್ಗೆ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಸಿಬ್ಬಂದಿಗಳು ಹೊಂಡವನ್ನು ಮುಚ್ಚಿದ್ದಾರೆ. ಆದರೆ, ಬೆಂಗಳೂರಿನ ರಸ್ತೆಗಳಲ್ಲಿ ಇನ್ನೆಷ್ಟು ಇಂತಹ ಹೊಂಡಗಳಿವೆಯೋ?, ಅಂದಹಾಗೆ ನಿಮ್ಮ ಬಡಾವಣೆಯಲ್ಲಿ ರಸ್ತೆಗಳು ಸುಂದರವಾಗಿವೆಯೇ?












Click it and Unblock the Notifications