ಕುಟ್ಟಿ ಅಲಿಯಾಸ್ ತಿರು vs ವಿಜಿ ಅಲಿಯಾಸ್ ಕವಳ
ಡೆಡ್ಲಿ ಸೋಮನ ಎಲ್ಲಾ ಸಹಚರರಿಗೆ ಆದ ಗತಿಯೇ ಆತನ ಒಂದು ಕಾಲದ ಬಲಗೈ ಬಂಟ ಎನಿಸಿದ್ದ ವಿಜಯ್ ಕುಮಾರ್ ಅಲಿಯಾಸ್ ಕವಳನಿಗೂ ಆಗಿದೆ. ಬೆಂಗಳೂರಿನ ಪ್ರಮುಖ ಭೂಗತ ಪಾತಕಿಯಾಗಿದ್ದ ಕವಳ ಎಲ್ಲರಂತೆ ಬಾಳಲು ಅವಕಾಶ ಪಡೆದುಕೊಂಡರೂ ರೌಡಿಸಂನ ಕರಿನೆರಳು ಹೇಗೆ ಅವನನ್ನು ಕತ್ತರಿಸಿತು ಎಂಬುದರ ಕಥೆ ಮುಂದಿದೆ ಓದಿ...
ಹತ್ಯೆ ಮಾಡಿರುವುದು ಕುಟ್ಟಿ ಗ್ಯಾಂಗ್ ನವರೇ ಎಂದು ಪೊಲೀಸರು ಅಧಿಕೃತವಾಗಿ ಪ್ರಕಟಿಸಿಲ್ಲ. ಈ ಬಗ್ಗೆ ಶಂಕೆ ಇದೆ ಎಂದಷ್ಟೇ ಹೇಳಿದ್ದಾರೆ.ಹೀಗಾಗಿ ಇದು ಈ ಹಿಂದಿನ ಘಟನಾವಳಿಗಳ ಸಂಗ್ರಹಿತ ಕಥಾ ರೂಪ ಅಷ್ಟೇ.
ವಿಜಯ್ ಕುಮಾರ್ ಅಲಿಯಾಸ್ ಕವಳ, ಡೆಡ್ಲಿ ಸೋಮನ ಗ್ಯಾಂಗಿನ ಪ್ರಮುಖ ಮುಂದಾಳಾಗಿದ್ದ. ಸಾಮಾನ್ಯವಾಗಿ ಸೋಮ ತನ್ನ ಗ್ಯಾಂಗಿಗೆ ಹುಡುಗರನ್ನು ಆಯ್ಕೆ ಮಾಡುತ್ತಿದ್ದ ರೀತಿ ವಿಶಿಷ್ಟವಾಗಿತ್ತು. ಪ್ರತಿ ಕುಟುಂಬದಲ್ಲಿ ಒಬ್ಬನೇ ಮಗ ಇರುವಂಥವರನ್ನು ಆರಿಸುತ್ತಿದ್ದ ಹಾಗೂ ಆತ ಇರುವ ಏರಿಯಾದಲ್ಲಿ ಬೆದರಿಕೆ ಮಾಡಿ ಹಣ ವಸೂಲಿ ಮಾಡಲು ನಿಯೋಜಿಸುತ್ತಿದ್ದ.[ಡೆಡ್ಲಿ ಸೋಮನ ಬಂಟ ಕವಳ ಭೀಕರ ಕೊಲೆ]
ಬೆಂಗಳೂರಿನ ಪ್ರತಿ ಏರಿಯಾದಲ್ಲೂ ಹೇಗೆ ಪೊಲೀಸ್ ಠಾಣೆಗಳಿದ್ದವೋ ಆದೇ ರೀತಿ ತನ್ನ ಯುವಕರ ನೆಟ್ವರ್ಕ್ ಸ್ಥಾಪಿಸಿದ್ದ. ಈ ರೀತಿ ಮಡಿವಾಳ, ಹೊಸೂರು ರಸ್ತೆ, ಕೋರಮಂಗಲ, ಲಕ್ಕಸಂದ್ರ ಸೇರಿ ದಕ್ಷಿಣ ಭಾಗಕ್ಕೆ ಕವಳ ಸೇನಾಧಿಪತಿಯಾಗಿದ್ದ ಎಂದು ಕೋರಮಂಗಲದ ಕಾಂಪ್ಲೆಕ್ಸ್ ಬಳಿ ನೆಲೆಸಿದ್ದ ಟೈಗರ್ ಅಶೋಕ್ ಕುಮಾರ್ ಅವರು ಕಥೆ ಬಿಚ್ಚಿಡುತ್ತಾರೆ.
ಸಜ್ಜನನಾಗ ಹೊರಟ್ಟಿದ್ದ ಕವಳ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಜತೆ ಗುರುತಿಸಿಕೊಂಡಿದ್ದ ದಕ್ಷಿಣ ಭಾಗದಲ್ಲಿ ರೆಡ್ಡಿಗಳ ಸಾಮ್ರಾಜ್ಯವಾಗಿರುವ ರಿಯಲ್ ಎಸ್ಟೇಟ್ ಹುತ್ತಕ್ಕೆ ಕೈ ಹಾಕಿದ್ದ ಇದೇ ಆತನಿಗೆ ಮುಳುವಾಯಿತು. ಅಂದು ಆಶ್ರಯ ನೀಡಿದ ರಾಜಕೀಯ ಶಕ್ತಿಗಳು ಇಂದು ಕವಳ ಮಾಡಿರುವ ಆಪಾರ ಆಸ್ತಿಯನ್ನು ಹಂಚಿಕೊಳ್ಳುವುದರಲ್ಲಿ ಸಂಶಯವಿಲ್ಲ.

ಅಣ್ಣ ತಮ್ಮರಂತೆ ಇದ್ದ ಕುಟ್ಟಿ-ಕವಳ
ಕವಳನ ಬೆನ್ನ ಹಿಂದೆಯೇ ಡೆಡ್ಲಿ ಸೋಮನ ಗ್ಯಾಂಗ್ ಸೇರಿದವನು ಕುಟ್ಟಿ ಅಲಿಯಾಸ್ ತಿರುಕುಮಾರ್. ಸೋಮ ಇರೋ ತನಕ ಎಲ್ಲವೂ ಚೆನ್ನಾಗಿತ್ತು. ಯಾರು ಇದು ನನ್ನ ಅಡ್ಡಾ ಇದು ನನ್ನ ಅಡ್ಡಾ ಎಂದು ಕಿತ್ತಾಡುತ್ತಿರಲಿಲ್ಲ. ಆದರೆ, ಸೋಮ ಎನ್ ಕೌಂಟರ್ ನಲ್ಲಿ ಹತನಾದ ಮೇಲೆ ಆತನ ಗ್ಯಾಂಗಿನ ಒಬ್ಬರೇ ಫೀಲ್ಡ್ ತೊರೆಯಬೇಕಾಯಿತು.

ಸೋಮನ ಪತ್ನಿ ಜಯಶ್ರೀ ರೋದನ
ರಾಜಶೇಖರ್ ಸೇರಿದಂತೆ ಕೆಲವು ಕಾಪ್ ಅಶೋಕ್ ಅವರ ಕೃಪೆಯಿಂದ ಪರಿವರ್ತನೆಗೊಂಡು ತನ್ನ ಗುರು ಸೋಮನ ಪತ್ನಿ ಜಯಶ್ರೀಇ ಕೈ ಹಿಡಿದು ಸಜ್ಜನರಂತೆ ಸಂಸಾರ ಸಾಗಿಸತೊಡಗಿದರು ಅದರೆ, ರಾಜಶೇಖರ್ ಕೂಡಾ ಗ್ಯಾಂಗ್ ವಾರ್ ಗೆ ಬಲಿಯಾದ ಜಯಶ್ರೀ ಎರಡು ಬಾರಿ ವಿಧವೆಯಾಗಿಬಿಟ್ಟೆ ಸಾರ್ ಎಂದು ಅಶೋಕ್ ಅವರ ಮುಂದೆ ಗೋಳಾಡಿದ ದೃಶ್ಯ ಮನಕಲುಕುವಂತಿತ್ತು.

ರೌಡಿ ಕವಳ ಹಾಗೂ ಕುಟ್ಟಿ ಬದ್ಧ ವೈರಿಗಳಾದ್ರು
ಈ ಹಿಂದೆ ಚಿತ್ರದುರ್ಗ ಸಮೀಪ ಕವಳನ ಗ್ಯಾಂಗ್ ಕುಟ್ಟಿ ಮೇಲೆ ಎರಗಿತ್ತು. ಆಗ ಆತ ತೀವ್ರವಾಗಿ ಗಾಯಗೊಂಡಿದ್ದ. ಅಂದಿನಿಂದ ಕವಳನನ್ನು ಮುಗಿಸಲು ಸಂಚು ರೂಪಿಸುತ್ತಲೇ ಇದ್ದ. ಆದರೆ, ಕವಳ ಚುನಾವಣೆ ಸಂದರ್ಭ ಬಂದರೆ ಜೈಲು ಸೇರಿಕೊಳ್ಳುತ್ತಿದ್ದ. ಹೀಗಾಗಿ, ಕುಟ್ಟಿಯ ಯೋಜನೆ ವಿಫಲವಾಗಿತ್ತು. ಜೈಲಿನಿಂದ ಕವಳ ಬಿಡುಗಡೆಯಾದ ಸುದ್ದಿ ತಿಳಿದ ತಿರುಕುಮಾರನ್, ಆತನ ಹತ್ಯೆಗೆ ಸಂಚು ರೂಪಿಸಿದ್ದ.

ರಿಯಲ್ ಎಸ್ಟೇಟ್ ವ್ಯವಹಾರ ಮುಳುವಾಯಿತೇ?
ಈ ಮಧ್ಯೆ ನಿವೇಶನವೊಂದರ ವಿಚಾರದಲ್ಲಿ ಗಲಾಟೆ ನಡೆದು ಶೇಖರ್ ಎಂಬುವರನ್ನು ಅಪಹರಿಸಿ ಕುಟ್ಟಿ ಹಾಗೂ ಆತನ ಸಹಚರರು ಪಿಸ್ತೂಲ್ನಿಂದ ಕೊಲೆಗೆ ಯತ್ನಿಸಿದ್ದರು. ಈ ಪ್ರಕರಣ ಪುಲಕೇಶಿನಗರ ಠಾಣೆಯಲ್ಲಿ ದಾಖಲಾಗಿತ್ತು. ಅಂದಿನಿಂದ ಅಲ್ಲಿನ ಪೊಲೀಸರು ಕುಟ್ಟಿ ಮತ್ತಿತರರಿಗೆ ಹುಡುಕಾಟ ನಡೆಸುತ್ತಿದ್ದರು. ಆಗ ಕವಳನನ್ನು ಕೊಲೆ ಮಾಡಲು ಹೊಂಚು ಹಾಕುತ್ತಿರುವ ಮಾಹಿತಿ ಸಿಸಿಬಿ ಪೊಲೀಸರಿಗೆ ಸಿಕ್ಕಿತ್ತು. ಪುಷ್ಪ, ಜೆಸಿಬಿ ನಾರಾಯಣ ಮುಂತಾದವರ ಗ್ಯಾಂಗಿನ ಸಹಾಯ ಕುಟ್ಟಿಗೆ ಸಿಕ್ಕಿದೆ ಎಂಬ ಮಾಹಿತಿ ಇತ್ತು. ತಮಿಳುನಾಡಿನ ಗಡಿ ಭಾಗವನ್ನೆ ಆಯ್ಕೆ ಮಾಡಿಕೊಂಡಿದ್ದ.

ತಿರುಕುಮಾರನ್ ಹಿನ್ನೆಲೆ ಏನು?
ತಿರುಕುಮಾರನ್ ಬಾಣಸವಾಡಿ, ಪುಲಿಕೇಶಿನಗರ ಠಾಣೆಗಳಲ್ಲಿ ರೌಡಿ ಶೀಟರ್. ಈತನ ವಿರುದ್ಧ ನಾಲ್ಕು ಕೊಲೆ ಪ್ರಕರಣ ಸೇರಿದಂತೆ 25 ಪ್ರಕರಣಗಳು ನಗರದ ನಾನಾ ಠಾಣೆಗಳಲ್ಲಿ ದಾಖಲಾಗಿವೆ. ಅಲ್ಲದೆ ಕುಟ್ಟಿಯನ್ನು ಗೂಂಡಾ ಕಾಯಿದೆ ಅಡಿಯಲ್ಲಿ ಬಂಧಿಸಲಾಗಿತ್ತು.
ಭೂ ಮಾಫಿಯಾದಲ್ಲಿ ಸಕ್ರಿಯನಾಗಿರುವ ಕುಟ್ಟಿ, ತನ್ನ ರಕ್ಷಣೆ ಕುಮರೇಶ್ ಹಾಗೂ ಕಾರ್ತಿಕ್ ಎಂಬಿಬ್ಬರು ಬಾಡಿಗಾರ್ಡ್ಗಳನ್ನಾಗಿ ನೇಮಿಸಿಕೊಂಡಿದ್ದ. ವಿವಾದದಲ್ಲಿರುವ ನಿವೇಶನ ಹಾಗೂ ಭೂಮಿಯನ್ನು ಇತ್ಯರ್ಥಗೊಳಿಸುವುದಾಗಿ ಹೇಳಿ ಹಣ ಸಂಪಾದನೆಯಲ್ಲಿ ತೊಡಗಿದ್ದ.
ಕುಟ್ಟಿಯ ಮತ್ತೊಬ್ಬ ಸಹಚರ ಶ್ರೀನಿವಾಸ್ ಅಲಿಯಾಸ್ ಬಾಲ 2000ರಲ್ಲಿ ನಡೆದ ಸ್ಕಿನ್ ಬಾಬು ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು, ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ.

ಕುಟ್ಟಿ ಸಿಕ್ಕಿಬಿದ್ದ, ಆದರೆ, ಕವಳನ ಕಥೆ ಮುಗಿಯಿತು
ಫ್ಲಾಶ್ ಬ್ಯಾಕ್ : ಸಿಸಿಬಿ ಇನ್ಸ್ಪೆಕ್ಟರ್ಗಳಾದ ಟಿ.ರಂಗಪ್ಪ, ಶ್ರೀನಿವಾಸ್, ಪೂರ್ಣಚಂದ್ರ ತೇಜಸ್ವಿ, ಲಕ್ಷ್ಮೀನಾರಾಯಣ ಪ್ರಸಾದ್, ಕೆ.ಪ್ರಕಾಶ್, ಪಿಎಸ್ಐ ಬಾಲರಾಜು ಹಾಗೂ ಸಿಬ್ಬಂದಿ, ಕುಟ್ಟಿ ತೆರಳುತ್ತಿದ್ದ ಕಾರನ್ನು ಬೆನ್ನಟ್ಟಿದ್ದರು. ಆತ ತಪ್ಪಿಸಿಕೊಳ್ಳಲು ಯತ್ನಿಸಿದರಾದರೂ ಪಟ್ಟು ಬಿಡದ ಪೊಲೀಸರು ಜೀಪ್ ಅನ್ನು ಶಿವಾಜಿನಗರ ಬಳಿ ಕುಟ್ಟಿ ಕಾರಿಗೆ ಅಡ್ಡಗಟ್ಟಿ ಹಿಡಿದಿದ್ದರು. ಆದರೆ, ಮತ್ತೊಂದು ಕಾರಿನಲ್ಲಿದ್ದ ಮೂವರು ಆರೋಪಿಗಳು ತಪ್ಪಿಸಿಕೊಂಡಿದ್ದರು. ಈ ಮೂವರೇ ಈಗ ಮತ್ತೆ ಕೆಲವರ ಜತೆ ಸೇರಿ ಕವಳನ ಕಥೆ ಮುಗಿಸಿದ್ದಾರೆ.
ಚಿತ್ರದಲ್ಲಿ ನೋಡುತ್ತಿರುವುದು ಎನ್ ಕೌಂಟರ್ ಗೆ ಬಲಿಯಾದ ಡೆಡ್ಲಿ ಸೋಮ












Click it and Unblock the Notifications