ಬೆಂಗಳೂರಿನಲ್ಲಿ ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ
ಬೆಂಗಳೂರು,ಅ.02: ಐವರ ಸಾಮೂಹಿಕ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ಬೆಂಗಳೂರಿನ ಹೊರ ವಲಯದಲ್ಲಿ ಇಬ್ಬರು ಮಕ್ಕಳೊಂದಿಗೆ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆ ತನ್ನ ಆರು ವರ್ಷದ ಕಂದಮ್ಮನನ್ನು ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ನೆಲಮಂಗಲ ಸಮೀಪದ ಮಾದನಾಯಕನಹಳ್ಳಿಯ ಪ್ರಕೃತಿ ಬಡಾವಣೆ ನಿವಾಸಿ ವಸಂತಾ, (40), ಯಶವಂತ್ (13), ನಿಶ್ಚಿತಾ ( 6) ಮೃತಪಟ್ಟವರು. ಕಳೆದ ವರ್ಷದ ಹಿಂದೆ ಪತಿ ಸಾವನ್ನಪ್ಪಿದ್ದರು. ಅದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವಸಂತಾ ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಮಾನಸಿಕವಾಗಿ ನೊಂದಿದ್ದ ವಸಂತಾ ತನ್ನ ಆರು ವರ್ಷದ ಮಗು ನಿಶ್ಚಿತಾಗೆ ನೇಣು ಬಿಗಿದು ಹತ್ಯೆ ಮಾಡಿ, ಅದೇ ಹಗ್ಗಕ್ಕೆ ಕೊರಳು ಒಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನು ನೋಡಿದ ಹದಿಮೂರು ವರ್ಷದ ಬಾಲಕ ತಾಯಿ ಹಾಗೂ ಸಹೋದರಿ ನೇಣು ಬಿಗಿದುಕೊಂಡಿದ್ದನ್ನು ನೋಡಿ ಆತನೂ ನೇಣು ಹಾಕಿಕೊಂಡು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಮಾದನಾಯಕನಹಳ್ಳಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಮೃತ ದೇಹ ಒಪ್ಪಿಸಿದ್ದಾರೆ. ಮೂವರ ಆತ್ಮಹತ್ಯೆ ಸುದ್ದಿ ಕೇಳಿ ಸ್ಥಳೀಯರೇ ಬೆಚ್ಚಿ ಬಿದ್ದಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಬ್ಯಾಡರಹಳ್ಳಿಯ ತಿಗಳರ ಪಾಳ್ಯದಲ್ಲಿ ಐವರು ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿದ್ದರು. ಮೃತಪಟ್ಟು ಕೆಲ ದಿನಗಳ ನಂತರ ಪ್ರಕರಣ ಬೆಳಕಿಗೆ ಬಂದಿತ್ತು. ಪತ್ರಕರ್ತ ಹಲ್ಲೆಗೆರೆ ಶಂಕರ್ ಅವರ ಪತ್ನಿ ಭಾರತಿ, ಮಗ ಮಧು ಸಾಗರ್, ಮಕ್ಕಳಾದ ಸಿಂಚನಾ, ಸಿಂಧೂರಾಣಿ ಹಾಗೂ 9 ತಿಂಗಳ ಮಗು ಸೇರಿ ಐವರು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಹಲ್ಲೆಗೆರೆ ಶಂಕರ್ ಶುಕ್ರವಾರ ಸಂಜೆಯಷ್ಟೇ ಬಂಧನಕ್ಕೆ ಒಳಗಾಗಿದ್ದ. ಇದೀಗ ಮಾನಸಿಕ ಖಿನ್ನತೆಗೆ ಒಗಾಗಿದ್ದ ಮಹಿಳೆ ತನ್ನಿಬ್ಬರು ಮಕ್ಕಳನ್ನು ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪೊಲೀಸ್ ಕ್ವಾಟ್ರಸ್ ನಲ್ಲೇ ಕಳ್ಳತನ:
ಶೇಷಾದ್ರಿಪುರಂ ಸಮೀಪದ ಆನಂದರಾವ್ ವೃತ್ತದ ಪೊಲೀಸ್ ಕ್ವಾಟ್ರಸ್ ನಲ್ಲಿ ನೆಲೆಸಿರುವ ಪೊಲೀಸ್ ಕಾನ್ ಸ್ಟೇಬಲ್ ಮನೆಯಲ್ಲಿ ಕಳ್ಳತನ ನಡೆದಿದೆ. ಭಾರತ್ ಬಂದ್ ದಿನ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿರುವ ಕಳ್ಳರು ಸುಮಾರು 85 ಸಾವಿರ ರೂ. ಮೌಲ್ಯದ ಚಿನ್ನದ ಒಡವೆ, ಮೊಬೈಲ್ , ವಾಚ್ ಮತ್ತಿತರ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ. ಮನೆಯಲ್ಲಿ ಕಳ್ಳತನ ಆಗಿರುವ ಬಗ್ಗೆ ಮುಖ್ಯ ಪೇದೆ ಮಾರುತಿ ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆನಂದ್ ರಾವ್ ವೃತ್ತದಲ್ಲಿರುವ ಪೊಲೀಸ್ ಕ್ವಾಟ್ರಸ್ ನಲ್ಲಿ ಯಾವುದೇ ಒಂದು ಸಿಸಿಟಿವಿ ಕ್ಯಾಮರಾ ಕೂಡ ಇಲ್ಲ. ಹೀಗಾಗಿ ಪದೇ ಪದೇ ಕಳ್ಳತನವಾಗುತ್ತಿದೆ. ಇನ್ನು ಸಿಸಿಟಿವಿ ಕ್ಯಾಮರಾ ಅಳವಡಿಸದ ಕಾರಣ ಕಳ್ಳರ ಬಗ್ಗೆ ಸಣ್ಣ ಸುಳಿವು ಪತ್ತೆ ಮಾಡುವುದು ಕಷ್ಟವಾಗಿ ಪರಿಣಮಿಸಿದೆ. ಭಾರತ್ ಬಂದ್ ಬಂದೋಬಸ್ತ್ ಗೆ ನಿಯೋಜನೆಗೊಂಡಿದ್ದ ಮುಖ್ಯಪೇದೆಯ ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ.
ದಕ್ಷಿಣ ವಿಭಾಗದ ಗೋಡನ್ ತಲಾಷೆ:
Recommended Video
ಚಾಮರಾಜಪೇಟೆಯಲ್ಲಿ ಮೂವರನ್ನು ಬಲಿ ಪಡೆದ ಸ್ಫೋಟ ಪ್ರಕರಣದ ಬೆನ್ನಲ್ಲೇ, ದಕ್ಷಿಣ ವಿಭಾಗದಲ್ಲಿರುವ ಎಲ್ಲಾ ಗೋಡನ್ ಗಳ ತಲಾಷೆ ಮಾಡುವಂತೆ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಸೂಚನೆ ನೀಡಿದ್ದಾರೆ. ಹೊಸ ತರಗು ಪೇಟೆಯಲ್ಲಿ ಸಂಭವಿಸಿದ ಸ್ಫೋಟಕ್ಕೆ ಮೂವರು ಬಲಿಯಾಗಿದ್ದರು. ಹತ್ತಕ್ಕೂ ಹೆಚ್ಚು ವಾಹನ ಜಖಂ ಆಗಿದ್ದವು. ಗೋಡನ್ ನಲ್ಲಿ ಅಕ್ರಮವಾಗಿ ಪಟಾಕಿ ಸಂಗ್ರಹ ಮಾಡಿದ್ದ ಸಂಗತಿ ಬೆಳಕಿಗೆ ಬಂದಿತ್ತು. ಇದೀಗ ದಸರಾ ಹಾಗೂ ದೀಪಾವಳಿ ಹಬ್ಬ ಸಮೀಪಿಸುತ್ತಿರುವ ಸಂದರ್ಭದಲ್ಲಿ ಅಕ್ರಮವಾಗಿ ಸ್ಫೋಟಕ ಸಂಗ್ರಹ ಮಾಡಿರುವ ಸಾಧ್ಯತೆ ಹಿನ್ನೆಲೆಯಲ್ಲಿ ದಕ್ಷಿಣ ವಿಭಾಗದ ಗೋಡನ್ ಗಳಲ್ಲಿ ಶೋಧ ನಡೆಸಲು ಸೂಚಿಸಲಾಗಿದೆ.












Click it and Unblock the Notifications