ಹೊಸ ಪ್ರಕರಣ ಕಮ್ಮಿ, ಸಾವಿನ ಸಂಖ್ಯೆ ಜಾಸ್ತಿ: ಅಸಲಿ ಕಾರಣ ಬಿಚ್ಚಿಟ್ಟ ಬಿಬಿಎಂಪಿ ಆಯುಕ್ತರು
ಬೆಂಗಳೂರು, ಜೂನ್ 8: ರಾಜಧಾನಿ ಬೆಂಗಳೂರಿನಲ್ಲಿ ಹೊಸ ಸೋಂಕಿನ ಪ್ರಕರಣ ಮತ್ತು ಆಸ್ಪತ್ರೆಯಿಂದ ಬಿಡುಗಡೆ ಹೊಂದುತ್ತಿರುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದರೂ, ಸಾವಿನ ಸಂಖ್ಯೆ ಕಮ್ಮಿಯಾಗದೇ ಇರುವುದು ಚಿಂತೆಯ ವಿಷಯವಾಗಿತ್ತು.
ಕಳೆದ ಒಂದು ತಿಂಗಳ ಹಿಂದಿನ ಪರಿಸ್ಥಿತಿ ಅವಲೋಕಿಸಿದರೆ ಸ್ಮಶಾನದಲ್ಲಿ ಕ್ಯೂ ಕೂಡಾ ಹಿಂದಿನ ರೀತಿಯಲ್ಲಿ ಇರಲಿಲ್ಲ. ಆದರೂ, ಬೆಂಗಳೂರಿನಲ್ಲಿ ಸಾವಿನ ಸಂಖ್ಯೆಯ ಅಂಕಿಅಂಶ ಕಮ್ಮಿಯಾಗಿರಲಿಲ್ಲ.
ಈ ಬಗ್ಗೆ ಬಿಬಿಎಂಪಿ ಆಯುಕ್ತರಾದ ಗೌರವ್ ಗುಪ್ತ ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದು, ಸಾರ್ವಜನಿಕರು ಗಾಬರಿ ಪಡಬೇಕಾಗಿಲ್ಲ ಎಂದು ಹೇಳಿ, ಸಾವಿನ ಸಂಖ್ಯೆ ಯಾಕೆ ಹೆಚ್ಚಾಗುತ್ತಿದೆ ಎನ್ನುವುದರ ಬಗ್ಗೆ ವಿವರಣೆಯನ್ನು ನೀಡಿದ್ದಾರೆ.
ಕಳೆದ ಒಂದು ವಾರದಿಂದ ಗಣನೀಯ ಪ್ರಮಾಣದಲ್ಲಿ ಹೊಸ ಸೋಂಕಿತರ ಸಂಖ್ಯೆ ಬೆಂಗಳೂರಿನಲ್ಲಿ ಕಮ್ಮಿಯಾಗುತ್ತಾ ಸಾಗುತ್ತಿದೆ. ಇನ್ನು, ಸಾವಿನ ಪ್ರಮಾಣ ದಿನವೊಂದಕ್ಕೆ ಇನ್ನೂರರ ಆಸುಪಾಸಿನಲ್ಲಿದೆ.

ಬಿಬಿಎಂಪಿ ಆಯುಕ್ತರಾದ ಗೌರವ್ ಗುಪ್ತ ಅಸಲಿ ಕಾರಣ
ಹಳೆಯ ಪ್ರಕರಣಗಳ ಲೆಕ್ಕವನ್ನು ಈಗ ಕೊಡಲಾಗುತ್ತಿದೆ ಎನ್ನುವ ಗುಮಾನಿ ಸಾರ್ವಜನಿಕ ವಲಯದಲ್ಲಿ ಇತ್ತು. ಬಿಬಿಎಂಪಿ ಆಯುಕ್ತರು ನೀಡಿರುವ ಹೇಳಿಕೆ ಅದೇ ದಾಟಿಯಲ್ಲಿದ್ದು, ನಗರದಲ್ಲಿ ಮೃತ ಪಡುತ್ತಿರುವವರ ಸಂಖ್ಯೆ 120ರ ಆಸುಪಾಸಿನಲ್ಲಿದೆ ಎಂದು ಗೌರವ್ ಗುಪ್ತ ಹೇಳಿದ್ದಾರೆ.

ಈಗ ವರದಿಯಾಗುತ್ತಿರುವ ಸಾವಿನ ಸಂಖ್ಯೆಯಲ್ಲಿ ಶೇ. ನಲವತ್ತರಷ್ಟು ಹಳೆಯದ್ದು
"ನಗರದಲ್ಲಿ ಈಗ ವರದಿಯಾಗುತ್ತಿರುವ ಸಾವಿನ ಸಂಖ್ಯೆಯಲ್ಲಿ ಶೇ. ನಲವತ್ತರಷ್ಟು ಹಳೆಯದ್ದು. ಆಸ್ಪತ್ರೆಗಳು ಮಾಹಿತಿಯನ್ನು ನೀಡಲು ವಿಳಂಬ ಮಾಡುತ್ತಿರುವುದರಿಂದ ಈ ಅಂಕಿಅಂಶಗಳು ಅಂದಿನಂದೇ ಸಿಗುತ್ತಿಲ್ಲ"ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಹೇಳಿದ್ದಾರೆ.

ನಗರದ ವಿವಿಧ ಚಿತಾಗಾರಗಳಿಗೆ ಬರುತ್ತಿರುವ ಶವಗಳ ಸಂಖ್ಯೆ
ನಗರದ ವಿವಿಧ ಚಿತಾಗಾರಗಳಿಗೆ ಬರುತ್ತಿರುವ ಶವಗಳ ಸಂಖ್ಯೆಯೂ ಕಮ್ಮಿಯಾಗಿದೆ ಎನ್ನುವುದು ವಾಸ್ತವತೆ ಎಂದಿರುವ ಗುಪ್ತ, ಪ್ರತಿನಿತ್ಯ ಸುಮಾರು 120 ಶವಗಳು ಬರುತ್ತಿವೆ.ಹಾಗಾಗಿ, ಸಾರ್ವಜನಿಕರು ಈ ವಿಚಾರದಲ್ಲಿ ಭಯ ಪಡುವುದು ಬೇಕಾಗಿಲ್ಲ ಎಂದು ಗುಪ್ತ ಹೇಳಿದ್ದಾರೆ.
Recommended Video

ಕೆಲವು ತಿಂಗಳ ನಂತರ ಹೊಸ ಪ್ರಕರಣ ಎರಡು ಸಾವಿರಕ್ಕೂ ಕಮ್ಮಿ
ಸೋಮವಾರದಂದು (ಜೂನ್ 7) ಕೆಲವು ತಿಂಗಳ ನಂತರ ಹೊಸ ಪ್ರಕರಣ ಎರಡು ಸಾವಿರಕ್ಕೂ ಕಮ್ಮಿಯಿತ್ತು. ಇನ್ನು, ಬಿಡುಗಡೆ ಹೊಂದಿದವವರ ಸಂಖ್ಯೆಯೂ ಇದರ ಆರು ಪಟ್ಟು ಹೆಚ್ಚಿತ್ತು. ಆದರೆ, ಸಾವಿನ ಸಂಖ್ಯೆ ಇನ್ನೂರು ಇದ್ದವು. ಇದು, ಜನರಿಗೆ ಆತಂಕವನ್ನು ಉಂಟು ಮಾಡಿತ್ತು.












Click it and Unblock the Notifications