ಕೋವಿಡ್ ನಮಗೆ ಅತ್ಯುತ್ತಮ ಪಾಠ ಕಲಿಸಿದೆ: ಕಂದಾಯ ಸಚಿವ ಆರ್. ಅಶೋಕ್
ಬೆಂಗಳೂರು, ಸೆ. 02: ಕೊರೊನಾ ವೈರಸ್ ಸೋಂಕು ಇಡೀ ಜಗತ್ತಿಗೆ ಹೊಸ ಸವಾಲು ಹಾಕಿದೆ. ಕಳೆದೆರಡು ವರ್ಷಗಳಿಂದ ಕೊರೊನಾ ವೈರಸ್ ಜನರಿಗೆ ಕೊಡುತ್ತಿರುವ ತೊಂದರೆ ಒಂದೆರಡಲ್ಲ. ಆರ್ಥಿಕ, ಮಾನಸಿಕ, ದೈಹಿಕ, ಸಾಮಾಜಿಕ ಈ ಎಲ್ಲ ರೀತಿಯಿಂದಲೂ ಜನರನ್ನು ಸಂಕಷ್ಟಕ್ಕೆ ದೂಡಿದೆ.
ಇದೇ ಸಂದರ್ಭದಲ್ಲಿ ಕೊರೊನಾ ವೈರಸ್ ತಂದಿಟ್ಟಿರುವ ಸಂಕಷ್ಟಗಳ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿದ್ದಾರೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಸೇವೆ ಸಲ್ಲಿಸಿದ ನೂರಕ್ಕೂ ಹೆಚ್ಚು ವೈದ್ಯರನ್ನು ಸನ್ಮಾನಿಸಿ ಅಶೋಕ್ ಅವರು ಮಾತ ನಾಡಿದ್ದಾರೆ. "ನಾವು ಈ ರೀತಿಯ ಸಂಕಷ್ಟವೊಂದನ್ನು ಎದುರಿಸಬೇಕಾದಂತಹ ಸಂದರ್ಭ ಬರುತ್ತದೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ. ಕೋವಿಡ್ ಎಲ್ಲವನ್ನು ಬದಲಿಸಿ ಹಾಕಿದೆ. ಕೋವಿಡ್ ಸೋಂಕಿನ ಘೋರತೆ ನೆನೆಸಿಕೊಂಡರೆ ಆಂಬ್ಯೂಲೆನ್ಸ್ ಸೈರನ್ ಸದ್ದು ಮತ್ತು ಶವಗಳನ್ನ ಸುಡುವ ಚಿತ್ರಗಳೇ ಕಣ್ಣಿನ ಮುಂದೆ ಸುಳಿಯುತ್ತವೆ. ಕೊರೊನಾವೈರಸ್ನಿಂದಾಗಿ ಬದುಕು ಅಂತಂತ್ರವಾಗಿದೆ ಎಂದೆನಿಸಬಹುದು. ಆದರೆ ಕೆಲ ಪಾಠಗಳನ್ನು ಕೂಡಾ ಅದು ಕಲಿಸಿದೆ" ಎಂದು ಜನರಿಗೆ ತಿಳಿಸಿದ್ದಾರೆ.
"ಉದ್ದನೆಯ ಸಾಲಿನಲ್ಲಿ ನಿಲ್ಲುವುದು ಮತ್ತು ಜೀವನದ ಬಗ್ಗೆ ಶಿಸ್ತು ಬೆಳೆಸಿಕೊಳ್ಳುವುದನ್ನು ಕೊರೊನಾ ನಮಗೆ ಹೇಳಿಕೊಟ್ಟಿದೆ. ಆತಂಕದ ಸ್ಥಿತಿಯಲ್ಲಿ ಜನರು ತಮ್ಮ ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದ ಸಂದರ್ಭಗಳಲ್ಲಿ, ವೈದ್ಯರು ರೋಗಿಗಳ ಚಿಕಿತ್ಸೆಗೆ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟಿದ್ದರು. ಅಂದು, ಇಂದು ನಮಗಿರುವ ಏಕೈಕ ಭರವಸೆಯೆಂದರೆ ಅದು ವೈದ್ಯರು ಮಾತ್ರ. ಹೀಗಾಗಿ ನಾನು ಅವರಿಗೆ ತುಂಬು ಹೃದಯದಿಂದ ಧನ್ಯವಾದಗಳನ್ನು ಎಲ್ಲರೂ ಹೇಳಲೇಬೇಕು. ಹಾಗೆಯೇ ಪೌರಕಾರ್ಮಿಕರಿಗೂ ಧನ್ಯವಾದಗಳನ್ನು ಸಲ್ಲಿಸಲು ಇಚ್ಛಿಸುತ್ತೇನೆ. ಕಾರಣ ಅವರು ನಗರದ ಸ್ವಚ್ಛತೆಗೆ ಎರಡು ಅಲೆಯ ವೇಳೆಯಲ್ಲಿಯೂ ಕಟಿಬದ್ಧರಾಗಿ ನಿಂತರು" ಎಂದು ಸಚಿವ ಅಶೋಕ್ ಅವರು ಕೊಂಡಾಡಿದರು.
Recommended Video
ಈ ವೇಳೆ ಸಚಿವ ಅಶೋಕ್ ಸಾಮಾಜಿಕ ಕಾರ್ಯಗಳನ್ನು ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಳ್ಳಲು ಇಚ್ಛಿಸುವ ವೈದ್ಯರೂ ಸೇರಿದಂತೆ ಹಲವು ವಲಯಗಳ ವ್ಯಕ್ತಿಗಳಿಗೆ ತಮ್ಮ ಜೊತೆ ಕೈ ಜೋಡಿಸುವಂತೆ ಮನವಿ ಮಾಡಿದರು.