ಹೆತ್ತವರಿಗೇ ಹೊಡೆದ ಮಗನಿಗೆ ಹೈಕೋರ್ಟ್ ಹೇಳಿದ್ದೇನು?
ಬೆಂಗಳೂರು, ಫೆಬ್ರವರಿ 20: ದಿನದಿಂದ ದಿನಕ್ಕೆ ಮಕ್ಕಳು ಹೆತ್ತವರ ಬಗ್ಗೆ ಇರುವ ಪ್ರೀತಿಯನ್ನು ಕಳೆದುಕೊಳ್ಳುತ್ತಿದ್ದಾರೆ ಎನಿಸುತ್ತಿದೆ. ತಾಯಿಗೆ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚುವುದು, ಪೊರಕೆಯಲ್ಲಿ ಹೊಡೆಯುವುದು ಹೀಗೆ ಚಿತ್ರ ಹಿಂಸೆ ನೀಡುತ್ತಿದ್ದಾರೆ.
ಮನೆ ಖಾಲಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಹೆತ್ತ ತಂದೆ-ತಾಯಿ ಮೇಲೆ ಹಲ್ಲೆ ನಡೆಸಿ ಅವರ ಜೊತೆ ಅನುಚಿತವಾಗಿ ವರ್ತಿಸಿದ ಮಗನ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸುವ ಮೂಲಕ ಹೈಕೋರ್ಟ್ ಕಪಾಳಮೋಕ್ಷ ಮಾಡಿದೆ.
ಬೆಂಗಳೂರಿನ ವೈಯಾಲಿಕಾವಲ್ ಪ್ರದೇಶದ 36 ವರ್ಷದ ಸ್ಕಂದ ಶರತ್ ಅರ್ಜಿ ಸಲ್ಲಿಸಿದ್ದ ಅದನ್ನು ಆಲಿಸಿದ ನ್ಯಾ. ಅಲೋಕ್ ಅರಾಧೆ ಅವರಿದ್ದ ಏಕ ಸದಸ್ಯ ಪೀಠ ಹಿರಿಯ ನಾಗರಿಕರಿಗೆ ರಕ್ಷಣೆ ನೀಡುವ ಕಾಯಿದೆ ಅಡಿಯಲ್ಲಿ ಉಪವಿಭಾಗಾಧಿಕಾರಿ ಹೊರಡಿಸಿರುವ ಆದೇಶದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿದೆ.
ಮಗ ಸ್ಕಂದ ತಮಗೆ ಜೀವನ ನಿರ್ವಹಣಾ ವೆಚ್ಚ ನೀಡುತ್ತಿಲ್ಲ, ಆದ್ದರಿಂದ ಮೊದಲ ಅಂತಸ್ತಿನಲ್ಲಿ ವಾಸಿಸುತ್ತಿರುವ ಮಗನ ಕುಟುಂಬ ಮನೆ ಖಾಲಿ ಮಾಡಿದರೆ ಅದನ್ನು ಬಾಡಿಗೆಗೆ ನೀಡಿ ಜೀವನ ನಿರ್ವಹಣಾ ವೆಚ್ಚ ಸರಿದೂಗಿಸಲು ಬಳಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.