ಮಗಳ ಜನ್ಮದಿನಕ್ಕೆ ಬೆಂಗಳೂರು ದಂಪತಿಯಿಂದ ಕ್ಯಾನ್ಸರ್ ಆಸ್ಪತ್ರೆ ಗಿಫ್ಟ್!
ಬೆಂಗಳೂರು, ಫೆಬ್ರವರಿ 22: ನೂರಾರು ಕೋಟಿ ಆಸ್ತಿ, ಒಬ್ಬಳು ರಾಜಕುಮಾರಿಯಂಥ ಮಗಳು... ಆಕೆಯ ಹುಟ್ಟುಹಬ್ಬವನ್ನು ಕೇರಿಗೆಲ್ಲ ಊಟ ಹಾಕಿಸಿ ಆಚರಿಸುವುದಕ್ಕೂ ಕೊರತೆಯಿಲ್ಲದ ಸಿರಿವಂತಿಕೆ... ಇಷ್ಟೆಲ್ಲ ಇದ್ದರೂ ಈ ದಂಪತಿ ಮಾತ್ರ ತಮ್ಮ ಮುದ್ದು ಮಗಳ ಹುಟ್ಟುಹಬ್ಬವನ್ನು ಆಚರಿಸಿದ್ದು ಅನುಕರಣೀಯವಾಗಿ!
ಬೆಂಗಳೂರು ಮೂಲದ ಉದ್ಯಮಿ ದಂಪತಿ ವಿಜಯ್ ಟಾಟಾ ಮತ್ತು ಅವರ ಪತ್ನಿ ಅಮೃತಾ ಟಾಟಾ ತಮ್ಮ ಮಗಳ ಹುಟ್ಟು ಹಬ್ಬದ ಸವಿನೆನಪಿಗಾಗಿ ನ್ಯೂ ಇಂಡಿಯಾ(New India) ಎಂಬ ಹೆಸರಿನ ಎನ್ ಜಿಒ ವೊಂದನ್ನು ಆರಂಭಿಸಿ, ಆ ಮೂಲಕ 200 ಕೋಟಿ ರೂ. ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆಯೊಂದನ್ನು ನಿರ್ಮಿಸಲು ಮುಂದಾಗಿದ್ದಾರೆ!
ಈಗಾಗಲೇ ಈ ಆಸ್ಪತ್ರೆಯ ನಿರ್ಮಾಣ ಕಾರ್ಯಕ್ಕೆ ಬಾಲಿವುಡ್ ನಟ ಇಮ್ರಾನ್ ಹಶ್ಮಿ ಚಾಲನೆ ನೀಡಿದ್ದಾರೆ. 'ಕ್ಯಾನ್ಸರ್ ರೋಗಿಗಳನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ ಮತ್ತು ಅವರ ನೋವನ್ನು ಅರಿತಿದ್ದೇನೆ. 'ನ್ಯೂ ಇಂಡಿಯಾ'ವು ಕ್ಯಾನ್ಸರ್ ರೋಗಿಗಳಿಗೆ ಹೊಸ ಆಶಾಕಿರಣವಾಗುವುದು ಖಂಡಿತ. ಇಂಥ ಆದರ್ಶ ಕೆಲಸ ಮಾಡುತ್ತಿರುವ ಟಾಟಾ ದಂಪತಿಯನ್ನು ನಾನು ಅಭಿನಂದಿಸುತ್ತೇನೆ' ಎಂದು ಇಮ್ರಾನ್ ಹಶ್ಮಿ ಶ್ಲಾಘಿಸಿದ್ದಾರೆ.

ಎಲ್ಲಿ ನಿರ್ಮಾಣವಾಗುತ್ತಿದೆ ಆಸ್ಪತ್ರೆ?
ಬೆಂಗಳೂರಿನ ಆನೇಕಲ್ ರಸ್ತೆಯ ಅತ್ತಿಬೆಲೆಯಲ್ಲಿ ಈಗಾಗಲೇ ನೂರು ಕೋಟಿ ರೂ. ವೆಚ್ಚದಲ್ಲಿ 50 ಎಕರೆ ಜಾಗವನ್ನು ಖರೀದಿಸಲಾಗಿದೆ. ಇನ್ನೂ 100 ಕೋಟಿ ರೂ ವೆಚ್ಚದಲ್ಲಿ ಸೂಪರ್ ಸ್ಪೆಶಾಲಿಟಿ ಕ್ಯಾನ್ಸರ್ ಕೇರ್ ಆಸ್ಪತ್ರೆ ನಿರ್ಮಿಸಲಾಗುತ್ತದೆ.

ಬಡವರಿಗೆ ಸಂಪೂರ್ಣ ಉಚಿತ ಚಿಕಿತ್ಸೆ
ಬಡ ಮತ್ತು ಅಶಕ್ತರಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡುವ ಉದ್ದೇಶ ಈ ಆಸ್ಪತ್ರೆಯದು. ಇದು ಭಾರತದ ಮೊಟ್ಟಮೊದಲ ಕ್ಯಾಶ್ ಲೆಸ್ ಆಸ್ಪತ್ರೆ ಎಂಬ ಹೆಗ್ಗಳಿಕೆ ಪಡೆಯಲಿದೆ. ಈ ಆಸ್ಪತ್ರೆಗೆ ಟಾಟಾ ದಂಪತಿಯೇ ಸ್ವ ಇಚ್ಛೆಯಿಂದ ಹಣ ಹಾಕುತ್ತಿದ್ದು, ಬೇರೆ ಯಾರಿಂದಲೂ ದೇಣಿಗೆ ಪಡೆದಿಲ್ಲ. ಕಿಮೋಥೆರಪಿಯ ಒಂದು ಸಿಟ್ಟಿಂಗ್ ಗೆ ಸುಮಾರು 90,000 ರೂ. ವೆಚ್ಚವಾಗುತ್ತದೆ. ಇದನ್ನು ಭರಿಸುವುದಕ್ಕೆ ಯಾವ ಬಡವರಿಗೆ ಸಾಧ್ಯ? ಅದಕ್ಕೆಂದೇ ಉಚಿತ ಚಿಕಿತ್ಸೆ ನೀಡುವ ಮಹೋನ್ನತ ಕಾರ್ಯಕ್ಕೆ ಈ ದಂಪತಿ ಕೈಹಾಕಿದ್ದಾರೆ.

ಆಸ್ಪತ್ರೆ ಸಿದ್ಧವಾಗುವುದು ಯಾವಾಗ?
ಈ ಆಸ್ಪತ್ರೆಯು 150 ಬೆಡ್ ಗಳನ್ನು ಹೊಂದಿರಲಿದ್ದು, ಬೇರೆ ಬೇರೆ ಹಂತಗಳಲ್ಲಿ ಸಿದ್ಧಗೊಳ್ಳಲಿದೆ. ಮೊದಲ ಹಂತವನ್ನು 2018 ರ ಡಿಸೆಂಬರ್ ಒಳಗೆ ಮುಗಿಸುವ ಗುರಿ ಹೊಂದಲಾಗಿದೆ. ಈ ಆಸ್ಪತ್ರೆಯ ವಿನ್ಯಾಸವನ್ನು ಇಂಗ್ಲೆಂಡ್ ಮೂಲದ ಕಂಪನಿಯೊಂದು ಮಾಡುತ್ತಿದೆ. ಕೇವಲ ಕ್ಯಾನ್ಸರ್ ಆಸ್ಪತ್ರೆ ಮಾತ್ರವಲ್ಲದೆ ನ್ಯೂ ಇಂಡಿಯಾ ಎನ್ ಜಿಒ ಮೂಲಕ ಹಲವು ಅಶಕ್ತ ಮಹಿಳೆಯರಿಗೆ, ಮಕ್ಕಳಿಗೆ ಹಣಕಾಸಿನ ನೆರವು ನೀಡುವ ಬಗ್ಗೆಯೂ ಚಿಂತಿಸಲಾಗುತ್ತಿದೆ. ಜೊತೆಗೆ ಅತ್ಯಾಚಾರ ಸಂತ್ರಸ್ಥೆಯರಿಗೆ ನ್ಯಾಯ ಒದಗಿಸುವ ಮತ್ತು ಅವರಿಗೆ ಹೊಸ ಬದುಕು ನೀಡುವ ಕೆಲಸವನ್ನೂ ಮಾಡಲು ಎನ್ ಜಿಒ ಮುಂದಾಗಿದೆ.

ಮೋದಿಯೇ ನಮಗೆ ಸ್ಫೂರ್ತಿ!
'ಇಂಥ ಒಂದು ಸಣ್ಣ ಹೆಜ್ಜೆಯಿಂದ ಹೊಸ ಮೈಲಿಗಲ್ಲನ್ನೇ ನಿರ್ಮಿಸಬಹುದು ಎಂಬುದು ನಮ್ಮ ನಂಬಿಕೆ. ಆರೋಗ್ಯದ ಕುರಿತು ನಮ್ಮ ಗೌರವಾನ್ವಿತ ಪ್ರಧಾನಿ ನರೇಮದ್ರ ಮೋದಿಯವರಿಗಿರುವ ಕಾಳಜಿಯೇ ನಮಗೆ ಸ್ಫೂರ್ತಿ. ಬಡತನರೇಖೆಗಿಂತ ಕೆಳಗಿರುವ ಜನರ ಜೀವನಮಟ್ಟ ಸುಧಾರಿಸುವುದೇ ನಮ್ಮ ಮುಖ್ಯ ಗುರಿ. ಅವರಿಗೆ ಸದ್ಯಕ್ಕೆ ಅಗತ್ಯವಿರುವುದು ನಮ್ಮ ಸಹಾಯ ಮತ್ತು ಸರಿಯಾದ ಸಮಯಕ್ಕೆ, ಅತ್ಯಗತ್ಯ ಚಿಕಿತ್ಸೆ. ನ್ಯೂ ಇಂಡಿಯಾ ಎಂಬುದು ಒಂದು ರಾಷ್ಟ್ರೀಯ ಚಳವಳಿ, ಇದು ಭಾರತದಾದ್ಯಂತ ಕ್ಯಾನ್ಸರ್ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವ ಉದ್ದೇಶ ಹೊಂದಿದೆ. ಆರೋಗ್ಯಕರ ಭಾರತವೇ ನಮ್ಮ ಗುರಿ" ಎಂಬುದು ದಂಪತಿಯ ನುಡಿ.












Click it and Unblock the Notifications