ಕೊರೊನಾ ಭಯ: ಹುಟ್ಟುಹಬ್ಬದಂದು ಮನೆ ಬಳಿ ಯಾರೂ ಬರಬೇಡಿ ಎಂದ ಪುನೀತ್
ಬೆಂಗಳೂರು, ಮಾರ್ಚ್ 14: ಮಾರಣಾಂತಿಕ ಕೊರೊನಾ ವೈರಸ್ ನಿಂದಾಗಿ ಕನ್ನಡಿಗರಲ್ಲೂ ತಲ್ಲಣ ಸೃಷ್ಟಿಯಾಗಿದೆ. ಡೆಡ್ಲಿ ಕೊರೊನಾ ವೈರಸ್ ಸೋಂಕಿನಿಂದಾಗಿ ರಾಜ್ಯದಲ್ಲಿ ಒಂದು ಸಾವು ಸಂಭವಿಸಿದ ನಂತರ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.
ಇಂದಿನಿಂದ ಒಂದು ವಾರ ಸಿನಿಮಾ ಥಿಯೇಟರ್ ಗಳು, ಪಬ್, ಕ್ಲಬ್ ಗಳನ್ನು ಬಂದ್ ಮಾಡುವಂತೆ ಸೂಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇನ್ನೊಂದು ವಾರ ಹೆಚ್ಚು ಜನ ಒಂದೆಡೆ ಸೇರುವ ಮದುವೆ ಸಮಾರಂಭಗಳಾಗಲಿ, ಮೇಳಗಳಾಗಲಿ, ಜಾತ್ರೆಗಳಾಗಲಿ ನಡೆಯುವಂತಿಲ್ಲ.
ಕೊರೊನಾ ಕಟ್ಟಿಹಾಕುವಲ್ಲಿ ಸಫಲವಾಯಿತೇ ಇಸ್ರೇಲ್: ಲಸಿಕೆ ತಯಾರು?
ಹೀಗಾಗಿ, ಕನ್ನಡ ಚಿತ್ರ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆಗೆ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ತಮ್ಮ ಹುಟ್ಟುಹಬ್ಬದಂದು ಯಾರೂ ತಮ್ಮ ಮನೆ ತನಕ ಬರಬೇಡಿ ಎಂದು ಅಭಿಮಾನಿಗಳಲ್ಲಿ ಪುನೀತ್ ರಾಜ್ ಕುಮಾರ್ ಮನವಿ ಮಾಡಿದ್ದಾರೆ.
''ಎಲ್ಲಾ ಸಮಸ್ತ ಅಭಿಮಾನಿ ದೇವರುಗಳೇ ನಮಸ್ಕಾರ, ಈ ವರ್ಷ ನಾನು ಹುಟ್ಟಿದ ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಹೀಗಾಗಿ ಯಾರೂ 17 ನೇ ತಾರೀಖಿನಂದು ತಮ್ಮ ತಮ್ಮ ಊರುಗಳಿಂದ ನಮ್ಮ ಮನೆ ತನಕ ಬರಬೇಡಿ. ನಾನು ಮನೆಯಲ್ಲೂ ಇರುವುದಿಲ್ಲ. ಯಾಕಂದ್ರೆ, ಇಡೀ ವಿಶ್ವದಲ್ಲಿ ಕೊರೊನಾದಿಂದ ತೊಂದರೆ ಆಗುತ್ತಿರುವ ಕುರಿತು ನಮ್ಮ ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ನಾವೆಲ್ಲ ಸೇರಿ ಕೈಜೋಡಿಸಬೇಕು. ಎಲ್ಲರಿಗೂ ಒಳ್ಳೆಯದ್ದಾಗಲಿ, ಹುಷಾರಾಗಿರಿ'' ಎಂದು ವಿಡಿಯೋ ಮೂಲಕ ಅಭಿಮಾನಿಗಳಲ್ಲಿ ಪುನೀತ್ ರಾಜ್ ಕುಮಾರ್ ಕೋರಿದ್ದಾರೆ.
ನೀವು ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತವಾಗಿರುವುದೇ ನನಗೆ ಕೊಡುವ ಒಂದು ದೊಡ್ಡ ಉಡುಗೊರೆ 🙏 pic.twitter.com/lUDT2pokfV
— Puneeth Rajkumar (@PuneethRajkumar) March 14, 2020
ಅಂದ್ಹಾಗೆ, ಮಾರ್ಚ್ 17 ರಂದು ಪುನೀತ್ ರಾಜ್ ಕುಮಾರ್ ಜನ್ಮದಿನ. ಈ ಬಾರಿ 45ನೇ ವಸಂತಕ್ಕೆ ಪುನೀತ್ ರಾಜ್ ಕುಮಾರ್ ಕಾಲಿಡಲಿದ್ದಾರೆ. ಪ್ರತಿ ವರ್ಷ ಅಭಿಮಾನಿಗಳ ಜೊತೆಗೆ ಅಪ್ಪು ತಮ್ಮ ಬರ್ತಡೇಯನ್ನ ಸೆಲೆಬ್ರೇಟ್ ಮಾಡುತ್ತಿದ್ದರು. ಅಪ್ಪು ಬರ್ತಡೇ ಬಂತೂಂದ್ರೆ ಸಾಕು, ಅವರ ಮನೆ ಮುಂದೆ ಅಭಿಮಾನಿಗಳ ಸಾಗರವೇ ಹರಿದು ಬರುತ್ತಿತ್ತು.
ಸಮಾಧಾನ ತಂದ ಹೊಸ ಸಂಶೋಧನೆ: ಸಕಲ ಜ್ವರಗಳಿಗೂ ಒಂದೇ ಲಸಿಕೆ!
ಆದ್ರೆ, ಈ ಬಾರಿ ಕೊರೊನಾ ವೈರಸ್ ಸೋಂಕಿನ ಕಂಟಕ ಎದುರಾಗಿರುವುದರಿಂದ ಬರ್ತಡೇ ಸೆಲೆಬ್ರೇಷನ್ ಗೆ ಪುನೀತ್ ರಾಜ್ ಕುಮಾರ್ ಬ್ರೇಕ್ ಹಾಕಿದ್ದಾರೆ.