ಕೊರೊನಾ ಕರಿನೆರಳು: ಎಚ್ಚರ ತಪ್ಪಿದ್ರೆ ಬೆಂಗಳೂರಿಗೆ ಅಪಾಯ ಕಟ್ಟಿಟ್ಟಬುತ್ತಿ!
ಇಡೀ ವಿಶ್ವದಲ್ಲಿ ತಲ್ಲಣ ಹುಟ್ಟಿಸಿರುವ ಮಾರಣಾಂತಿಕ ಕೊರೊನಾ ವೈರಸ್ ಸೋಂಕು ಭಾರತದಲ್ಲೂ ಹರಡಿದೆ. ಭಾರತದಲ್ಲಿ ಇಲ್ಲಿಯವರೆಗೂ ಒಟ್ಟು 73 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ನಾಲ್ಕು ಪ್ರಕರಣಗಳು ಬೆಂಗಳೂರಿನಲ್ಲಿ ದೃಢಪಟ್ಟಿವೆ.
ಅಮೇರಿಕಾ ಮತ್ತು ದುಬೈನಿಂದ ಬೆಂಗಳೂರಿಗೆ ಬಂದ ಟೆಕ್ಕಿ, ಆತನ ಪತ್ನಿ, ಮಗಳು ಮತ್ತು ಸಹೋದ್ಯೋಗಿಗೆ ಕೊರೊನಾ ಸೋಂಕು ತಗುಲಿದೆ. ಈ ನಾಲ್ವರನ್ನು ಹೊರತು ಪಡಿಸಿದರೆ, ಬೆಂಗಳೂರಿನಲ್ಲಿ ಇನ್ಯಾರಿಗೂ ಕೊರೊನಾ ವೈರಸ್ ಸೋಂಕು ಇಲ್ಲಿಯವರೆಗೂ ಪತ್ತೆ ಆಗಿಲ್ಲ.
ಜನಸಾಂದ್ರತೆ ಹೆಚ್ಚಿರುವ ಬೆಂಗಳೂರಿನಲ್ಲಿ ಯಾವುದೇ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಿದೆ. ಅಂಥದ್ರಲ್ಲಿ ಅಪ್ಪಿ-ತಪ್ಪಿ ಕೊರೊನಾ ವೈರಸ್ ಹರಡಿದರೆ, ಅಪಾಯ ಕಟ್ಟಿಟ್ಟಬುತ್ತಿ!

ಸಾಧ್ಯತೆ ಹೆಚ್ಚು
ಸರ್ವೆಯೊಂದರ ಪ್ರಕಾರ, ಬೆಂಗಳೂರಿನಲ್ಲಿ 'ಸಾಂಕ್ರಾಮಿಕ ರೋಗ' ಹರಡುವ ಸಾಧ್ಯತೆ ಅಧಿಕ. ಯಾಕಂದ್ರೆ ಬೆಂಗಳೂರಿನಲ್ಲಿ ಜನಸಾಂದ್ರತೆ ಹೆಚ್ಚು. ವರದಿಯೊಂದರ ಪ್ರಕಾರ, ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ದಿನವೊಂದಕ್ಕೆ ಕಮ್ಮಿ ಅಂದರೂ 2000 ಮಂದಿಯ ಸಂಪರ್ಕಕ್ಕೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬರುತ್ತಾನೆ (ಮನೆಯಿಂದ ಹೊರಟು ವಾಪಸ್ ಮನೆ ಸೇರುವವರೆಗೆ). ಹೀಗಿರುವಾಗ, ಒಬ್ಬ ವ್ಯಕ್ತಿಗೆ ಕೊರೊನಾ ವೈರಸ್ ಸೋಂಕು ತಗುಲಿದರೂ, 2000 ಮಂದಿಗೆ ಡೇಂಜರ್.!

ಸೋಂಕು ಬಹುಬೇಗ ಹರಡುತ್ತದೆ
ಬೆಂಗಳೂರಿನಲ್ಲಿ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗಬೇಕು ಅಂದ್ರೆ ಬಹುಪಾಲು ಮಂದಿ ಮೆಟ್ರೋ, ಬಸ್, ಟ್ಯಾಕ್ಸಿ, ಆಟೋ ಸೇವೆ ಅವಲಂಬಿಸುತ್ತಾರೆ. ಎಲ್ಲೆಲ್ಲೂ ಜನಜಂಗುಳಿ ಜಾಸ್ತಿ ಇರುವ ಕಾರಣ, ಯಾವುದೇ ಸೋಂಕು ಆದರೂ ಬಹುಬೇಗ ಹರಡುತ್ತದೆ.

ಶುಚಿತ್ವ ಇಲ್ಲ
ಇನ್ನೂ ಬೆಂಗಳೂರು 'ಸ್ವಚ್ಛ' ನಗರವಂತೂ ಅಲ್ಲ. ಎಷ್ಟೋ ಗಲ್ಲಿಗಳಲ್ಲಿ ಕಸದ ರಾಶಿ ಅಂತೂ ಇದ್ದೇ ಇರುತ್ತೆ. ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಶುಚಿತ್ವದ ಬಗ್ಗೆ ಪ್ರಶ್ನೆ ಮಾಡುವ ಹಾಗಿಲ್ಲ. ಹೋಟೆಲ್ ನಲ್ಲಿ ತಿನ್ನುವ ತಟ್ಟೆ, ಲೋಟಗಳನ್ನು ಸರಿಯಾಗಿ ತೊಳೆದಿರುವುದಿಲ್ಲ. ಇಂತಹ ಕಡೆ ಸೋಂಕು ಹರಡುವುದು ಖಚಿತ. ಹೋಟೆಲ್ ತಿಂಡಿ-ಊಟದ ಮೇಲೆ ಅವಲಂಬಿತವಾಗಿರುವ ಹಲವು ಮಂದಿ ಬೆಂಗಳೂರಿನಲ್ಲಿ ಇದ್ದಾರೆ. ಅಂಥದ್ರಲ್ಲಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹಬ್ಬಿದ್ರೆ, ಏನಾಗಬಹುದು ಊಹಿಸಿ...

ಕಾಲರಾ ಭೀತಿ ಬೇರೆ!
ಈಗ ಬೇಸಿಗೆ ಬೇರೆ. ಬೇಸಿಗೆ ವೇಳೆ ಸಾಮಾನ್ಯವಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚು. ಈಗಾಗಲೇ ಬೆಂಗಳೂರಿಗರಿಗೆ ಕಾಲರಾ ಭೀತಿ ಕಾಡುತ್ತಿದೆ. ರಸ್ತೆಬದಿ ಅಹಾರ ಪದಾರ್ಥಗಳ ಮಾರಾಟಕ್ಕೆ ಬ್ರೇಕ್ ಬಿದ್ದಿದೆ. ಈ ನಡುವೆ ಕೊರೊನಾ ಆತಂಕ ಕೂಡ ಇರುವುದರಿಂದ ಬೆಂಗಳೂರಿಗರು ಶುಚಿತ್ವ ಮತ್ತು ಸ್ವಚ್ಛತೆ ಕಾಪಾಡಿಕೊಳ್ಳಲೇಬೇಕು.

ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಿ
ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುವ ಎಷ್ಟೋ ಐಟಿ ಕಂಪನಿಗಳು ಈಗಾಗಲೇ ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಅವಕಾಶ ಮಾಡಿಕೊಟ್ಟಿದೆ. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹೆಚ್ಚು ಜನರ ಸಂಪರ್ಕಕ್ಕೆ ಬಾರದೆ, ಸ್ವಚ್ಛತೆ ಕಾಪಾಡಿಕೊಂಡು, ರೋಗ ನಿರೋಧಕ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ಸೋಂಕನ್ನು ತಡೆಗಟ್ಟಬಹುದು. ಕೊರೊನಾ ಮಾತ್ರವಲ್ಲ ಯಾವುದೇ ಸೋಂಕಾಗಲಿ, ಅದನ್ನ ಗುಣಪಡಿಸುವುದಕ್ಕಿಂತ ತಡೆಗಟ್ಟುವುದೇ ವಾಸಿ ಅಲ್ಲವೇ.!












Click it and Unblock the Notifications