'ಕೆಟ್ಟ ಧೈರ್ಯ ಬಿಡಿ' - ರಾಜ್ಯದ ಜನರಲ್ಲಿ ಡಿಸಿಎಂ ಅಶ್ವಥ್ ನಾರಾಯಣ್ ಮನವಿ
ಬೆಂಗಳೂರು, ಮಾರ್ಚ್ 20: ಇಡೀ ವಿಶ್ವವನ್ನು ಬೆಚ್ಚಿಬೀಳಿಸಿರುವ ಮಾರಣಾಂತಿಕ ಕೊರೊನಾ ವೈರಸ್ ಕನ್ನಡಿಗರ ನೆಮ್ಮದಿಯನ್ನೂ ಹಾಳು ಮಾಡಿದೆ. ಕರ್ನಾಟಕದಲ್ಲಿ ಈವರೆಗೆ ಒಟ್ಟು 15 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.
ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಜಾಸ್ತಿ ಆಗುತ್ತಿದ್ದರೂ, ಕೆಲವರು ಮಾತ್ರ ಜಾಗರೂಕತೆ ವಹಿಸುತ್ತಿಲ್ಲ. ''ನಿಮ್ಮಿಂದಾಗಿ ನಿಮ್ಮ ಮನೆಯವರಿಗೆ ತೊಂದರೆ ಆಗಬಾರದು. ದಯವಿಟ್ಟು ಈ ಬಗ್ಗೆ ಗಮನ ಹರಿಸಿ'' ಎಂದು ಡಿಸಿಎಂ ಅಶ್ವಥ್ ನಾರಾಯಣ್ ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ.
ಇಟಲಿಯಲ್ಲಿರುವ ಕನ್ನಡಿಗರ ರಕ್ಷಣೆ ಪ್ರಕ್ರಿಯೆ ನಡೆಯುತ್ತಿದೆ: ಅಶ್ವತ್ಥ ನಾರಾಯಣ
''ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಮ್ಮಿ ಎಂದು ಜನ ಅಂದುಕೊಂಡಿದ್ದಾರೆ. ಜೊತೆಗೆ ನಮಗೆ ಏನ್ ಆಗಲ್ಲ, ನಾನು ವಿಷೇಶವಾದ ವ್ಯಕ್ತಿ ಎಂದು ಅಂದುಕೊಂಡಿರುತ್ತಾರೆ. ಸಾಮಾನ್ಯವಾಗಿ ಎಲ್ಲರಲ್ಲೂ ಈ ಯೋಚನೆ ಇದ್ದೇ ಇರುತ್ತೆ. ಈ ಕೆಟ್ಟ ಧೈರ್ಯ ಒಳ್ಳೆಯದಲ್ಲ, ನಿಮ್ಮ ಮನೆಯಲ್ಲಿ ವಯಸ್ಸಾದವರು, ಮಕ್ಕಳು ಇರುತ್ತಾರೆ. ನಿಮ್ಮಿಂದ ನಿಮ್ಮ ಮನೆಯವರಿಗೆ ತೊಂದರೆ ಆಗಬಾರದು ಅದರ ಕಡೆ ಗಮನ ಕೊಡಿ'' ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಜೊತೆಗೆ ಪ್ರಧಾನಿ ಜನತಾ ಕರ್ಫ್ಯೂ ಬಗ್ಗೆಯೂ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, ''ಜನತಾ ಕರ್ಫ್ಯೂವನ್ನು ಎಲ್ಲಾ ಜನರು ಅಳವಡಿಸಿಕೊಳ್ಳಬೇಕು. ಪ್ರಧಾನಿ ಅವರು ಹೇಳಿರುವುದು ತುಂಬಾ ಅವಶ್ಯಕವಾಗಿದೆ. ಯಡಿಯೂರಪ್ಪ ಅವರು ಕೂಡ ಇದಕ್ಕೆ ಹೆಚ್ಚು ಗಮನ ಕೊಟ್ಟಿದ್ದಾರೆ. ಸವಾಲು ತುಂಬಾ ದೊಡ್ಡದಿದೆ. ಇದನ್ನು ನಿರ್ವಹಣೆ ಮಾಡಲು ಎಲ್ಲರ ಅವಶ್ಯಕತೆ ಇದೆ. ಎಲ್ಲರೂ ಇದಕ್ಕೆ ಕೈ ಜೋಡಿಸಬೇಕು'' ಎಂದರು.