ನಾಲ್ಕು ವರ್ಷ ಸಚಿವನಾಗಿ ಕೆಲಸ ಮಾಡುತ್ತೇನೆ
ಬೆಂಗಳೂರು, ಮೇ 23 : "ಮುಂದಿನ ನಾಲ್ಕು ವರ್ಷ ನಾನು ಸಚಿವನಾಗಿ ಮುಂದುರೆಯುತ್ತೇನೆ. ಸರಿಯಾಗಿ ಕೆಲಸ ಮಾಡಿಲ್ಲ ಎಂದು ಯಾರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲು ಸಾಧ್ಯವಿಲ್ಲ, ಹಾಗೆ ತೆಗೆದರೆ ಎಲ್ಲಾ ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ" ಎಂದು ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಶುಕ್ರವಾರ ಮಾವು ಮತ್ತು ಹಲಸಿನ ಮೇಳಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಸಚಿವ ಶಾಮನೂರು ಶಿವಶಂಕರಪ್ಪ, ನನ್ನನ್ನು ಸಚಿವ ಸಂಪುಟದಿಂದ ಕೈ ಬಿಡುತ್ತಾರೆ ಎಂಬುದು ಕೇವಲ ವದಂತಿ. ಮುಂದಿನ ನಾಲ್ಕು ವರ್ಷ ನಾನು ಸಚಿವನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಸರಿಯಾಗಿ ಕೆಲಸ ಮಾಡಿಲ್ಲ ಎಂದು ಸಚಿವರ ರಾಜೀನಾಮೆ ಪಡೆಯುವುದಾದದರೆ ಎಲ್ಲಾ ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು. ಒಂದು ವೇಳೆ ಸಚಿವ ಸ್ಥಾನದಿಂದ ತಮ್ಮನ್ನು ವಜಾಗೊಳಿಸಿದರು ತಲೆ ಕೆಡಿಸಿಕೊಳ್ಳದೆ ಸೀದಾ ದಾವಣಗೆರೆಗೆ ಮರಳುತ್ತೇನೆ ಎಂದು ಅವರು ತಿಳಿಸಿದರು.
ಲೋಕಸಭೆ ಚುನಾವಣೆಯ ಫಲಿತಾಂಶವನ್ನು ಹೊಣೆ ಮಾಡಿ ಸಚಿವರ ರಾಜೀನಾಮೆ ನೀಡುವ ಯಾವ ನಿರ್ಧಾರವನ್ನು ಪಕ್ಷದ ಮುಂದಿಲ್ಲ. ಮಾಧ್ಯಮಗಳು ಇಂತಹ ಸುದ್ದಿಯನ್ನು ಹುಟ್ಟು ಹಾಕಿವೆ. ನಾಲ್ಕು ವರ್ಷಗಳ ಕಾಲ ನಾನು ಸಚಿವನಾಗಿಯೇ ಮುಂದುರೆಯುತ್ತೇನೆ ಎಂದರು. [ಚುನಾವಣೆ ನಂತರವೂ ನಾನೇ ಸಿಎಂ : ಸಿದ್ದರಾಮಯ್ಯ]
ದಾವಣಗೆರೆ ಕ್ಷೇತ್ರದಲ್ಲಿ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ ಸೋಲಿಗೆ ನರೇಂದ್ರ ಮೋದಿ ಅವರ ಅಲೆ ಕಾರಣವಾಗಿದೆ. ಹರಪನಹಳ್ಳಿ, ಹೊನ್ನಾಳಿ, ಚನ್ನಗಿರಿಯಲ್ಲಿ ಮತಗಳಿಕೆ ಕಡಿಮೆ ಆಗಿದೆ. ಆದ್ದರಿಂದ ಚುನಾವಣೆಯಲ್ಲಿ ಸೋಲಾಯಿತು ಎಂದು ಶಾಮನೂರು ಶಿವಶಂಕರಪ್ಪ ವಿಶ್ಲೇಷಿಸಿದರು. [ಮಲ್ಲಿಕಾರ್ಜುನ ಕೈತಪ್ಪಿದ ಗೆಲುವು]
ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸರಿಯಾಗಿ ಕೆಲಸ ಮಾಡದ ಸಚಿವರಿಗೆ ಕೋಕ್ ನೀಡಿ ಹೊಸಬರಿಗೆ ಮಂತ್ರಿಸ್ಥಾನ ನೀಡಲಾಗುತ್ತದೆ ಎಂಬ ಮಾತುಗಳಿವೆ. ಸಚಿವರಾದ ಶಾಮನೂರು ಶಿವಶಂಕರಪ್ಪ, ಅಂಬರೀಶ್, ಕಿಮ್ಮನೆ ರತ್ನಾಕರ್ ಮುಂತಾದವರು ಸಚಿಸ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂಬ ಮಾತುಗಳಿವೆ.












Click it and Unblock the Notifications