Breaking: ಕಾಂಗ್ರೆಸ್ ಮತ ಬೇಟೆ: ಧರ್ಮ ವಿಭಜಕ ಕಾಂಗ್ರೆಸ್' ಎಂದ ಬಿಜೆಪಿ
ಬೆಂಗಳೂರು, ಆಗಸ್ಟ್ 18: ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ್ ಆ.19 ರಂದು ಪ್ರಥಮ ಹಂತದ ರಾಜ್ಯ ಪ್ರವಾಸ ಹಮ್ಮಿಕೊಂಡಿದ್ದಾರೆ. ಇದಕ್ಕೆ ವ್ಯಂಗ್ಯವಾಡಿರುವ ಬಿಜೆಪಿ , ಕಾಂಗ್ರೆಸ್ ಲಿಂಗಾಯತ ಮತ ಬೇಟೆ ಎಂಬ ಪ್ರಹಸನ ಮಾಡುತ್ತಿರುವುದು ನಾಚಿಗೆಗೇಡಿನ ಸಂಗತಿ ಎಂದಿದೆ.
ಚುನಾವಣಾ ಸಂದರ್ಭದಲ್ಲಿ ಮತ್ತೆ ವೀರಶೈವ - ಲಿಂಗಾಯಿತ ಸಮುದಾಯದಲ್ಲಿ ಗೊಂದಲ ಮೂಡಿಸುವುದು ನಿಮ್ಮ ಉದ್ದೇಶವೇ? ಎಂದು ಪ್ರಶ್ಮಿಸಿರುವ ಬಿಜೆಪಿ, "ಧರ್ಮ ವಿಭಜಕ ಕಾಂಗ್ರೆಸ್" ಎಂದು ಹ್ಯಾಶ್ಟ್ಯಾಗ್ ಬಳಸಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, "ಧರ್ಮ ಎಂಬ ಜೇನು ಗೂಡಿಗೆ ಕಾಂಗ್ರೆಸ್ ಈ ಹಿಂದೆ ಕೈ ಹಾಕಿ ಸುಟ್ಟುಹೋಗಿತ್ತು. ವೀರಶೈವ, ಲಿಂಗಾಯತ, ಧರ್ಮ, ಜಾತಿ ಎಂಬ ಕಂದಕ ಸೃಷ್ಟಿಸಲು ವಿಫಲ ಯತ್ನ ನಡೆಸಿ ಅಧಿಕಾರ ಕಳೆದುಕೊಂಡಿತು. ಅದೇ ಕಾಂಗ್ರೆಸ್ ಈಗ ಲಿಂಗಾಯತ ಮತ ಬೇಟೆ ಎಂಬ ಪ್ರಹಸನ ಮಾಡುತ್ತಿರುವುದು ನಾಚಿಗೆಗೇಡಿನ ಸಂಗತಿ" ಎಂದು ಟೀಕಿಸಿದೆ.
ಎಂ. ಬಿ. ಪಾಟೀಲ್ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿರುವ ಬಿಜೆಪಿ, "ಮಾನ್ಯ ಎಂ. ಬಿ. ಪಾಟೀಲ್ ಅವರೇ, ನಿಮ್ಮ ಶಿಷ್ಯವೃಂದ ವೀರಶೈವ ಪದ ಬಳಕೆಯೇ ಬೇಡ ಎಂದಿದ್ದು ಮರೆತು ಹೋಯಿತೇ? ನೀವು ಪ್ರತ್ಯೇಕ ಧರ್ಮ ಸ್ಥಾಪಿಸಲು ಕುತಂತ್ರ ಮಾಡಿದ್ದು ಮರೆತು ಹೋಯಿತೇ? ಚುನಾವಣಾ ಸಂದರ್ಭದಲ್ಲಿ ಮತ್ತೆ ವೀರಶೈವ - ಲಿಂಗಾಯಿತ ಸಮುದಾಯದಲ್ಲಿ ಗೊಂದಲ ಮೂಡಿಸುವುದು ನಿಮ್ಮ ಉದ್ದೇಶವೇ?" ಎಂದು ಪ್ರಶ್ನಿಸಿದೆ.
"ಪ್ರತ್ಯೇಕ ಲಿಂಗಾಯಿತ ಧರ್ಮದ ವಿಚಾರದಲ್ಲಿ ಚುನಾವಣೆಯ ನಂತರ ಮಠಾಧೀಶರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಎಂ. ಬಿ. ಪಾಟೀಲ್ ಹೇಳಿದ್ದರು. ಚುನಾವಣೆಗೆ ಮೊದಲೊಂದು ಧರ್ಮ, ಚುನಾವಣೆಯ ನಂತರ ಇನ್ನೊಂದು ಧರ್ಮವೇ!!? ಈಗ ಅದೇ ಮಠಗಳಿಗೆ ಯಾವ ಮುಖ ಇಟ್ಟುಕೊಂಡು ಭೇಟಿ ನೀಡುತ್ತಿದ್ದೀರಿ..?" ಎಂದು ಕಿಡಿಕಾರಿದೆ.
"ಅಧಿಕಾರದಲ್ಲಿದ್ದಾಗ ವಿಭಜನೆ ಮಂತ್ರ! ವಿಪಕ್ಷದಲ್ಲಿದ್ದಾಗ ವೀರಶೈವರ ಭಜನೆ!! ಚುನಾವಣೆ ಸಮೀಪಿಸುತ್ತಿದ್ದಂತೆ ಕೈ ನಾಯಕರ ಬಣ್ಣ ಬಯಲಾಗುತ್ತಿದೆ!" ಎಂದು ಆರೋಪಿಸಿದೆ.
ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ್ ಆ.19 ರಂದು ಪ್ರಥಮ ಹಂತದ ರಾಜ್ಯ ಪ್ರವಾಸ ಹಮ್ಮಿಕೊಂಡಿದ್ದಾರೆ. 19ರಂದು ಕಲಬುರ್ಗಿಯಿಂದ ಆರಂಭವಾಗಿ, 20ರಂದು ಹುಬ್ಬಳ್ಳಿ, ಅಂದು ಸಂಜೆ ಧಾರವಾಡ, 23ರಂದು ಚಿತ್ರದುರ್ಗ, 24ರಂದು ಶಿವಮೊಗ್ಗ, 26ರಂದು ಮೈಸೂರು, 27ರಂದು ಚಾಮರಾಜನಗರ, ಸೆ.1ರಂದು ಮಂಗಳೂರು, 2ರಂದು ಉಡುಪಿ, 3ರಂದು ತುಮಕೂರು, 5ರಂದು ಕೊಪ್ಪಳ, 6 ಬಳ್ಳಾರಿ, ವಿಜಯನಗರ, 7ರಂದು ರಾಯಚೂರು, 8ರಂದು ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳ ಪ್ರವಾಸ ಕೈಗೊಳ್ಳಲಿದ್ದಾರೆ.
Recommended Video
ಈ ಪ್ರವಾಸದಲ್ಲಿ ಶಾಸಕರು, ಮಾಜಿ ಸಚಿವರು, ವಿಧಾನ ಪರಿಷತ್ ಸದಸ್ಯರು, ಸಂಸದರು, ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು, ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರ ಜತೆ ಸಭೆ ಮಾಡಿ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತದೆ.