ಬಿಜೆಪಿಯ 40 ಪರ್ಸೆಂಟ್ ಕಮಿಷನ್ ವಿರುದ್ಧ ಹಾಡು ರಚನೆ: ಕಾಂಗ್ರೆಸ್ನಿಂದ ವಿಡಿಯೋ ಬಿಡುಗಡೆ
40 ಪರ್ಸೆಂಟ್ ಕಮಿಷನ್ ವಿಚಾರದಲ್ಲಿ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಕರ್ನಾಟಕ ಕಾಂಗ್ರೆಸ್ ಪ್ರಚಾರ ಆರಂಭಿಸಿದ್ದು, ವಿಡಿಯೋ ಬಿಡುಗಡೆ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಅಭಿಯಾನ ಆರಂಭಿಸಿದ ಕಾಂಗ್ರೆಸ್ ವಿಶೇಷ ಹಾಡನ್ನು ಬಿಡುಗಡೆ ಮಾಡಿದೆ. '40 ಪರ್ಸೆಂಟ್ ಸರ್ಕಾರ, ಬಿಜೆಪಿ ಎಂದರೆ ಭ್ರಷ್ಟಾಚಾರ' ಹೆಸರಿನಲ್ಲಿ ಅಭಿಯಾನ ಆರಂಭವಾಗಿದೆ.
ಈ ಹಿಂದೆ ಪ್ರಚಾರಕ್ಕಾಗಿ ಹಾಡುಗಳನ್ನು ರಚನೆ ಮಾಡಲಾಗುತ್ತಿತ್ತು. ಆದರೀಗ ವಿರೋಧ ಪಕ್ಷಗಳ ಭ್ರಷ್ಟಾಚಾರಗಳನ್ನು ಬಯಲಿಗೆಳೆಯುವ ಹಾಡುಗಳನ್ನು ಬಿಡುಗಡೆ ಕಾರ್ಯ ಆರಂಭವಾಗಿದೆ. 40 ಪರ್ಸೆಂಟ್ ಭ್ರಷ್ಟಾಚಾರ ಆರೋಪ, ಪಿಎಸ್ಐ ನೇಮಕಾತಿ ಅಕ್ರಮ, ಶಿಕ್ಷಣ ಇಲಾಖೆಯಲ್ಲಿನ ಅಕ್ರಮ ಸೇರಿದಂತೆ ಬಿಜೆಪಿ ಮೇಲಿನ ಸಾಲು-ಸಾಲು ಭ್ರಷ್ಟಾಚಾರದ ಆರೋಪಗಳನ್ನು ಇಟ್ಟುಕೊಂಡೇ ಸಾಹಿತ್ಯ ರಚನೆ ಹಾಡು ಸಿದ್ಧಪಡಿಸಲಾಗಿದೆ.
ಈ ಹಾಡನ್ನು ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ರಾಜ್ಯ ಸರ್ಕಾರಕ್ಕೆ ಭ್ರಷ್ಟಾಚಾರದ ಬಗ್ಗೆ ಪ್ರಶ್ನೆಗಳನ್ನು ಕೇಳುವ ಮೂಲಕ ವಿಶೇಷ ಅಭಿಯಾನ ಇದಾಗಿದೆ. ಪಿಎಸ್ಐ ಅಕ್ರಮ, 40 ಪರ್ಸೆಂಟೇಜ್ ಕಮಿಷನ್ ಸೇರಿದಂತೆ ತಮ್ಮ ಮೇಲಿನ ಭ್ರಷ್ಟಾಚಾರಗಳ ಬಗ್ಗೆ ಏಕೆ ತನಿಖೆಗೆ ವಹಿಸುತ್ತಿಲ್ಲ ಎಂದು ಪ್ರಶ್ನಿಸಲಿದೆ ಎಂದು ಮೂಲಗಳು ತಿಳಿಸಿವೆ.
40 % ಕಮಿಷನ್ ಸೇರಿದಂತೆ ರಾಜ್ಯ ಬಿಜೆಪಿ ಸರಕಾರದ ಭ್ರಷ್ಟಾಚಾರದ ನಾನಾ ಸ್ವರೂಪಗಳ ವಿಡಿಯೋ ಮತ್ತು ಲಂಚದ ರೇಟ್ ಕಾರ್ಡ್ ಅನ್ನು ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಬಿಡುಗಡೆ ಮಾಡಿ, ಜಂಟಿ ಮಾಧ್ಯಮಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿದರು. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಮ್ ಅಹ್ಮದ್, ರಾಮಲಿಂಗಾರೆಡ್ಡಿ, ಕೆಪಿಸಿಸಿ ಸಂವಹನ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ, ಉಪಾಧ್ಯಕ್ಷ ಮನ್ಸೂರ್ ಅಲಿಖಾನ್, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ ಉಪಸ್ಥಿತರಿದ್ದರು.
ಹಾಡು ಹೀಗಿದೆ-
ಬಿಜೆಪಿ ಭ್ರಷ್ಟ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿ ಹಾಡು ತಯಾರಿಸಿದೆ. 'ಭ್ರಷ್ಟಾಚಾರದಿಂದ ರಾಜ್ಯ ಒಳಗಾಗೈತೋ. ಬಿಜೆಪಿ ಅಂದ್ರೆ ಹೇಳ್ತಿನ್ ಕೇಳ್ರೋ.. ಕಮಿಷನ್ ಕಾಸೇ ಇವರ ಮನೆ ದೇವ್ರು. ಭ್ರಷ್ಟಾಚಾರ... ಭ್ರಷ್ಟಾಚಾರ... ಇದು 40 ಪರ್ಸೆಂಟೇಜ್ ಸರ್ಕಾರ... ಬಿಜೆಪಿಗೆ ಲಂಚಾನೆ ಆಧಾರ...'
.@INCKarnataka has started a campaign targtetting @BJP4Karnataka on 40 percent commission issue. They have released video, and a contact number, if anyone has been demanded commission. @siddaramaiah @DKShivakumar @SaleemAhmadINC @PriyankKharge adressing PC now. pic.twitter.com/iYIkxgcyBl
— Imran Khan (@KeypadGuerilla) September 13, 2022
ಇನ್ನೂ ಬಿಜೆಪಿ ವಿರುದ್ಧ ಸತೀಶ ಜಾರಕಿಹೊಳಿ ಕಿಡಿ ಕಾರಿದ್ದಾರೆ. "ಬಿಜೆಪಿ ಅವರಿಗೆ ಸುಳ್ಳನ್ನು ನಿಜ ಮಾಡುವುದು, ನಿಜವನ್ನು ಸುಳ್ಳು ಮಾಡುವುದು ಬಿಟ್ಟರೆ ಬೇರೆ ಏನು ಗೊತ್ತಿಲ್ಲ. ಬಿಜೆಪಿ ಪಕ್ಷಕ್ಕೆ ಚುನಾವಣೆ ಹೇಗೆ ಮಾಡುವುದು, ಸೋತರೆ ಹೇಗೆ ಗೆದ್ದವರನ್ನು ಖರೀದಿ ಮಾಡುವುದು ಎನ್ನುವುದೇ ಚಿಂತೆ ಹೊರತು ದೇಶದ ಅಭಿವೃದ್ಧಿಯ ಚಿಂತೆ ಇಲ್ಲ. ದೇಶದಲ್ಲಿ ಬಿಜೆಪಿ ಆಡಳಿತ ಕಿತ್ತೊಗೆಯುವ ಕೆಲಸವಾಗಲಿ," ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ನವನಗರದ ಕಲಾ ಭವನದಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ದಲಿತ ಚಿಂತಕ ಪರಶುರಾಮ ಮಹಾರಾಜನವರ ಹಾಗೂ ಬೆಂಬಲಿಗರು ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಮೋದಿ ಸರ್ಕಾರ ಆಡಳಿತಕ್ಕೆ ಬಂದಾಗ ಶೋಷಣೆಗೊಳಪಟ್ಟವರನ್ನು, ಬಡ ಜನರನ್ನು ಹಾಗೂ ಅವರ ಮಕ್ಕಳನ್ನು ಮುಂದೆ ತರುವ ಕೆಲಸ ಮಾಡುತ್ತದೆ ಎಂದು ನಂಬಿದ್ದೇವು. ಆದರೆ, ಅವರು ತಮಗೆ ಬೇಕಾದವರನ್ನು ಶ್ರೀಮಂತರನ್ನಾಗಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ದೇಶದಲ್ಲಿ ದಲಿತರು ಬಡವರಾಗಿಯೇ ಉಳಿಯುವಂತಾಗಿದೆ. ದೇಶದಲ್ಲಿ ಬದಲಾವಣೆ ಅವಶ್ಯಕತೆ ಇದೆ," ಎಂದು ತಿಳಿಸಿದರು.