ವಾರಕ್ಕೊಮ್ಮೆ ದೆಹಲಿಗೆ ಓಡುವ ಸಿಎಂಗೆ ಫ್ರೀಡಂ ಪಾರ್ಕ್ಗೆ ಬರುವ ತಾಳ್ಮೆ ಇಲ್ಲವೇ? ಕಾಂಗ್ರೆಸ್ ಪ್ರಶ್ನೆ
ಅಂಗನವಾಡಿ ಕಾರ್ಯಕರ್ತೆಯರತ್ತ ರಾಜ್ಯ ಸರ್ಕಾರದ ಕಡೆಗಣನೆಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಬೆಂಗಳೂರು, ಜನವರಿ, 31: ಕಳೆದ 10 ದಿನಗಳಿಂದ ರಾಜಧಾನಿಯಲ್ಲಿ ಕೊರೆಯುವ ಚಳಿಯಲ್ಲಿ ಪಟ್ಟು ಬಿಡದೇ ಪ್ರತಿಭಟನೆ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರತ್ತ ರಾಜ್ಯ ಸರ್ಕಾರ ತಿರುಗಿಯೂ ನೋಡುತ್ತಿಲ್ಲ ಎಂದು ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.
ಗ್ರಾಜ್ಯುಟಿ ಮತ್ತು ಪಿಂಚಣಿ, ಅಂಗನವಾಡಿಯನ್ನು ಮೇಲ್ದರ್ಜೆಗೆ ಏರಿಸುವುದು, ವೇತನ ಸಹಿತ ರಜೆ ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ರಾಜ್ಯದ ವಿವಿಧ ಭಾಗಗಳಿಂದ 30 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಫ್ರೀಡಂ ಪಾರ್ಕ್ನಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಜ್ಯ ಸರ್ಕಾರ ಹಠಕ್ಕೆ ಅಂಗನವಾಡಿ ಕಾರ್ಯಕರ್ತರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ: ಸಿದ್ದರಾಮಯ್ಯ ಆಕ್ರೋಶ
ಆದರೆ, ರಾಜ್ಯ ಸರ್ಕಾರ ಪ್ರತಿಭಟನೆಯನ್ನು ಕಡೆಗಣಿಸಿದ್ದು, ಅವರ ಬೇಡಿಕೆಗಳನ್ನು ಕೇಳುವ ಸೌಜನ್ಯ ತೋರಿಲ್ಲ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿರುವ ಕಾಂಗ್ರೆಸ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
"10 ದಿನ ಕಳೆದರೂ ಪ್ರತಿಭಟಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರತ್ತ ತಿರುಗಿಯೂ ನೋಡುತ್ತಿಲ್ಲ ಸರ್ಕಾರ. ಅವರ ನೋವುಗಳೇನು, ಬೇಡಿಕೆಗಳೇನು ಎಂಬುದರ ಬಗ್ಗೆ ಕಿವಿಗೊಟ್ಟು ಆಲಿಸುವ ಕನಿಷ್ಠ ಸೌಜನ್ಯವೂ ಇಲ್ಲದಾಯಿತೆ ಬಸವರಾಜ ಬೊಮ್ಮಾಯಿ ಅವರೇ..? ವಾರಕ್ಕೊಮ್ಮೆ ದೆಹಲಿಗೆ ಓಡುವ ಸಿಎಂಗೆ ವಿಧಾನಸೌಧದ ಬಳಿಯೇ ಇರುವ ಫ್ರೀಡಂ ಪಾರ್ಕ್ಗೆ ಬರುವ ತಾಳ್ಮೆ ಇಲ್ಲವೇ..?" ಎಂದು ಬಸವರಾಜ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದೆ.
10 ದಿನ ಕಳೆದರೂ ಪ್ರತಿಭಟಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರತ್ತ ತಿರುಗಿಯೂ ನೋಡುತ್ತಿಲ್ಲ ಸರ್ಕಾರ.
— Karnataka Congress (@INCKarnataka) January 31, 2023
ಅವರ ನೋವುಗಳೇನು, ಬೇಡಿಕೆಗಳೇನು ಎಂಬುದರ ಬಗ್ಗೆ ಕಿವಿಗೊಟ್ಟು ಆಲಿಸುವ ಕನಿಷ್ಠ ಸೌಜನ್ಯವೂ ಇಲ್ಲದಾಯಿತೆ @BSBommai ಅವರೇ?
ವಾರಕ್ಕೊಮ್ಮೆ ದೆಹಲಿಗೆ ಓಡುವ ಸಿಎಂಗೆ ವಿಧಾನಸೌಧದ ಬಳಿಯೇ ಇರುವ ಫ್ರಿಡಂ ಪಾರ್ಕ್ಗೆ ಬರುವ ತಾಳ್ಮೆ ಇಲ್ಲವೇ? pic.twitter.com/V35BqCLJk2
ಈ ಹಿಂದೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, "ಮುಷ್ಕರ ನಿರತ ರಾಜ್ಯ ಅಂಗನವಾಡಿ ಕಾರ್ಯಕರ್ತರನ್ನು ರಾಜ್ಯದ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು. ಅತ್ಯಂತ ಖಂಡನೀಯ. ಮುಖ್ಯಮಂತ್ರಿಗಳು ತಕ್ಷಣ ಅಂಗನವಾಡಿ ಕಾರ್ಯಕರ್ತರನ್ನು ಕರೆದು ಅವರ ಬೇಡಿಕೆಗಳ ಈಡೇರಿಕೆ ಬಗ್ಗೆ ಚರ್ಚಿಸಬೇಕು" ಎಂದು ಒತ್ತಾಯಿಸಿದ್ದರು.
ಸೇವೆ ಕಾಯಂ, ವೇತನ ಹೆಚ್ಚಳ ಮತ್ತು ಮತ್ತು ನಿವೃತ್ತಿ ಸೌಲಭ್ಯವೂ ಸೇರಿದಂತೆ ಹಲವು ಬೇಡಿಕೆಗಳನ್ನು ಅಂಗನವಾಡಿ ಕಾರ್ಯಕರ್ತರು ಸರ್ಕಾರದ ಮುಂದಿಟ್ಟಿದ್ದಾರೆ. ರಾಜ್ಯ ಸರ್ಕಾರ ಮನಸ್ಸು ಮಾಡಿದರೆ ಮಾತುಕತೆಯ ಮೂಲಕ ಮುಷ್ಕರ ನಿರತರ ಬೇಡಿಕೆ ಈಡೇರಿಸಲು ಸಾಧ್ಯವಿತ್ತು. ಸರ್ಕಾರ ಉದ್ಧಟತನದಿಂದ ಸಂಘರ್ಷದ ಹಾದಿ ಆಯ್ದುಕೊಂಡಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಜಾರಿಯಾದರೆ 31 ಸಾವಿರ ವೇತನ ನೀಡುವುದು, ಸುಪ್ರೀಂಕೋರ್ಟ್ ಆದೇಶದಂತೆ ನಿವೃತ್ತಿಯಾದ ಕಾರ್ಯಕರ್ತರಿಗೆ ಮತ್ತು ಸಹಾಯಕಿಯರಿಗೆ ಗ್ರಾಜ್ಯುಟಿ ಮತ್ತು ಪಿಂಚಣಿ ನೀಡುವುದು, ಸೇವೆ ಖಾಯಂ ಮಾಡುವುದು, ಮಿನಿ ಅಂಗನವಾಡಿಯನ್ನು ಮೇಲ್ದರ್ಜೆಗೆ ಏರಿಸುವುದು, ಇಎಸ್ಐ ಜಾರಿ ಮಾಡುವುದು ಮತ್ತು ತೀವ್ರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸಂಬಳ ಸಹಿತ ರಜೆ ನೀಡಬೇಕು ಎಂಬ ಐದು ಮುಖ್ಯ ಬೇಡಿಕೆಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರದ ಮುಂದೆ ಇಟ್ಟಿದ್ದಾರೆ.