ಹಿರಿಯರನ್ನು ಗೌರವಿಸದ ಕಾಂಗ್ರೆಸ್ನಲ್ಲಿ ಏಕಿರಬೇಕು: ಕೈ ಶಾಸಕ ಪ್ರಶ್ನೆ
ಬೆಂಗಳೂರು, ಜುಲೈ 01: ಇಬ್ಬರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ ಬೆನ್ನಲ್ಲೆ ಇನ್ನೂ ಕೆಲವರು ಶಾಸಕರು ಪಕ್ಷಕ್ಕೆ ಗುಡ್ಬೈ ಹೇಳಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಇದೇ ಸಮಯದಲ್ಲಿ ಪಕ್ಷದ ಹಿರಿಯ ಶಾಸಕರೊಬ್ಬರು ಬಹಿರಂಗವಾಗಿ ಪಕ್ಷದ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ.
ಶೀಡ್ಲಘಟ್ಟ ಕ್ಷೇತ್ರ ಶಾಸಕ ವಿ.ಮುನಿಯಪ್ಪ ಅವರು ಕಾಂಗ್ರೆಸ್ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದು, ಪಕ್ಷ ಬಿಟ್ಟು ಏಕೆ ಹೋಗಬಾರದು ಎಂದು ಪ್ರಶ್ನಿಸಿದ್ದಾರೆ. ಆ ಮೂಲಕ ಪಕ್ಷ ಬಿಡುವ ಸೂಚನೆಯನ್ನು ನೀಡಿದ್ದಾರೆ.
'ನಮ್ಮಂಥಹಾ ಹಿರಿಯರನ್ನು ಗುರುತಿಸದ ಕಾಂಗ್ರೆಸ್ ಪಕ್ಷದಲ್ಲಿ ಏಕಿರಬೇಕು?' ಎಂದು ಪ್ರಶ್ನಿಸಿರುವ ಮುನಿಯಪ್ಪ ಅವರು, ಕಾಂಗ್ರೆಸ್ ಪಕ್ಷ ಬಿಡುವ ಸೂಚನೆ ನೀಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುನಿಯಪ್ಪ, ನಾನು ದಶಕಗಳಿಂದಲೂ ಪಕ್ಷಕ್ಕಾಗಿ ದುಡಿದಿದ್ದೇನೆ, ಸಂಪುಟ ವಿಸ್ತರಣೆ ವೇಳೆ ನನಗೂ ಅವಕಾಶ ತಪ್ಪಿದೆ, ದುಡಿದವರನ್ನು ಪಕ್ಷ ಗುರುತಿಸುತ್ತಿಲ್ಲ ಎಂಬ ನೋವಿದೆ ಎಂದು ಅಸಮಾಧಾನ ಹೊರಹಾಕಿದರು.

ಸಂಪುಟ ವಿಸ್ತರಣೆ ವೇಳೆ ಭರವಸೆ ಕೊಟ್ಟಿದ್ದರು: ಮುನಿಯಪ್ಪ
ನಾನು ಹಿರಿಯನಾಗಿದ್ದೆ, ಸಂಪುಟ ವಿಸ್ತರಣೆ ವೇಳೆ ಭರವಸೆ ಕೊಟ್ಟಿದ್ದರು, ಆದರೆ ಬೇರೆಯವರಿಗೆ ಅವಕಾಶ ಕೊಟ್ಟರು, ಹಿರಿಯರನ್ನು ಗುರುತಿಸದ ಮೇಲೆ ನಾವ್ಯಾಕೆ ಪಕ್ಷದಲ್ಲಿ ಇರಬೇಕು ಎಂದು ಮುನಿಯಪ್ಪ ಅಸಮಾಧಾನದಿಂದ ಪ್ರಶ್ನೆ ಮಾಡಿದರು.

ಅತೃಪ್ತ ಶಾಸಕರ ನಿರ್ಧಾರ ಸಮರ್ಥಿಸಿಕೊಂಡ ಮುನಿಯಪ್ಪ
ಕಾಂಗ್ರೆಸ್ ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸಲಾಗಿದೆ, ಹಾಗಾಗಿ ಒಬ್ಬೊಬ್ಬರು ಒಂದೊಂದು ರೀತಿಯ ನಿರ್ಧಾರಗಳನ್ನು ತಗೆದುಕೊಂಡಿದ್ದಾರೆ ಎಂದು ಅವರು ಅತೃಪ್ತರ ನಿರ್ಧಾರವನ್ನು ಸಮರ್ಥಿಸಿಕೊಂಡರು.

ನನಗೂ ಸಾಕಷ್ಟು ನೋವಿದೆ: ವಿ.ಮುನಿಯಪ್ಪ
ನನಗೂ ಸಾಕಷ್ಟು ನೋವಿದೆ, ಆದರೆ ನಾನು ಪಕ್ಷ ಬಿಡುವ ನಿರ್ಧಾರ ಮಾಡಿಲ್ಲ, ನನಗೆ ಆಗಿರುವ ನೋವಿನ ಬಗ್ಗೆ ಎಲ್ಲಿ ಬೇಕಾದರೂ ಮಾತನಾಡುತ್ತೇನೆ ಎಂದು ಅವರು ಹೇಳಿದರು. ವಿ.ಮುನಿಯಪ್ಪ ಅವರು ಸಚಿವ ಸ್ಥಾನ ಆಕಾಂಕ್ಷಿ ಆಗಿದ್ದಾರೆ.

ಹಿರಿಯ ಶಾಸಕರಾಗಿರುವ ವಿ.ಮುನಿಯಪ್ಪ
ಶಿಡ್ಲಘಟ್ಟ ಶಾಸಕರಾಗಿ ವಿ.ಮುನಿಯಪ್ಪ ಅವರು ಮೂರನೇ ಬಾರಿ ಆಯ್ಕೆ ಆಗಿದ್ದಾರೆ. ಹಿರಿಯ ಶಾಸಕರಾಗಿರುವ ಅವರು ಸಚಿವ ಸ್ಥಾನ ಆಕಾಂಕ್ಷಿ ಆಗಿದ್ದರು. ಅವರನ್ನು ಸಿಎಂ ಅವರ ರಾಜಕೀಯ ಕಾರ್ಯದರ್ಶಿ ಆಗಿ ನೇಮಿಸಿ ಕಣ್ಣೊರೆಸಲಾಯಿತು.












Click it and Unblock the Notifications