ಮೈಸೂರು ದಸರಾದಲ್ಲಿ ಭಾಗವಹಿಸಲು ಯಡಿಯೂರಪ್ಪಗೆ ಆಹ್ವಾನ
ಬೆಂಗಳೂರು, ಅ. 12: ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿಯಾಗಿ ಆಹ್ವಾನಿಸಿದರು.
ಕೊರೊನಾ ವೈರಸ್ ಸಾಂಕ್ರಮಿಕ ಸಂಕಷ್ಟದಲ್ಲಿ ಸರಳವಾಗಿ ದಸರಾ ಆಚರಣೆಗೆ ಸರ್ಕಾರ ಮುನದಾಗಿದ್ದು, ದಸರಾ ಉದ್ಘಾಟನೆ ಸಂದರ್ಭ 300 ಜನರಿಗೆ ಮಾತ್ರ ಭಾಗವಹಿಸಲು ಅನುಮತಿ ನೀಡಲಾಗಿದೆ. ಈ ಬಗ್ಗೆ ನಿರಂತರ ಸಭೆಗಳು ನಡೆದಿದ್ದು, ಸಾಮಾಜಿಕ ಅಂತರ ಕಾಪಾಡಿಕೊಂಡು ಕಡ್ಡಾಯವಾಗಿ ಮಾಸ್ಕ್ ದರಿಸಿ ದಸರಾ ಆಚರಣೆಯಲ್ಲಿ ಭಾಗವಹಿಸಲು ಮಾರ್ಗಸೂಚಿ ರೂಪಿಸಲಾಗಿದೆ.
ಇದೇ ಅಕ್ಟೋಬರ್ 17 ರಂದು ಉದ್ಘಾಟನೆ ಆಗಲಿರುವ ನಾಡಹಬ್ಬ ದಸರಾ, ಒಂಭತ್ತು ದಿನಗಳ ಕಾಲ ನಡೆದು ಅಕ್ಟೋಬರ್ 25 ರಂದು ಜಂಬೂ ಸವಾರಿ ಮೂಲಕ ಮುಕ್ತಾಯವಾಗಲಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ಪಿಡಿಗುನ ಹಿನ್ನೆಲೆಯಲ್ಲಿ ಕೊರೊನಾ ವಾರಿಯರ್ಸ್ಗೆ ಈ ದಸರಾದಲ್ಲಿ ಮಹಯ್ವ ಕೊಡಲಾಗಿದೆ. ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎಸ್. ಮಂಜುನಾಥ್ ಅವರು ದಸರಾ ಉದ್ಘಾಟನೆ ಮಾಡಲಿದ್ದಾರೆ.

ಕೊರೊನಾ ವಾರಿಯರ್ಸ್ಗಳಾದ ಮೈಸೂರಿನ ಪೌರ ಕಾರ್ಮಿಕ ಮರಗಮ್ಮ, ವೈದ್ಯಾಧಿಕಾರಿ ಡಾ. ನವೀನ್ ಕುಮಾರ್, ಸ್ಟಾಫ್ ನರ್ಸ್ ರುಕ್ಮಿಣಿ, ಆಶಾ ಕಾರ್ಯಕರ್ತೆ ನೂರ್ ಜಾನ್, ಪೊಲೀಸ್ ಕಾನ್ಸ್ಟೆಬಲ್ ಕುಮಾರ್ ಪಿ., ಸಾಮಾಜಿಕ ಕಾರ್ಯಕರ್ತ ಆಯೂಬ್ ಅಹಮದ್ ಅವರನ್ನು ದಸರಾ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನಿಸಲು ಸರ್ಕಾರ ತೀರ್ಮಾನ ಮಾಡಿದೆ.
ಮುಖ್ಯಮಂತ್ರಿಗಳನ್ನು ಆಹ್ವಾನಿಸುವ ಸಂದರ್ಭದಲ್ಲಿ ಡಿಸಿಎಂ ಗೋವಿಂದ ಕಾರಜೋಳ, ಶಾಸಕ ರಾಮದಾಸ್ ಉಪಸ್ಥಿತರಿದ್ದರು.












Click it and Unblock the Notifications