ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸಿದ್ದರಾಮಯ್ಯ ಗರಂ
ಬೆಂಗಳೂರು, ಅ. 16 : 'ಜನರು ಸಣ್ಣ ತಪ್ಪುಗಳಿಗೆ ಕೋರ್ಟ್ಗೆ ಹೋಗುವುದಿಲ್ಲ, ಆದ್ದರಿಂದ ಅಧಿಕಾರಿಗಳಿಗೆ ಭಯವಿಲ್ಲ. ತಪ್ಪುಗಳನ್ನು ಮಾಡುತ್ತಲೇ ಇದ್ದೀರಿ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಬಿಎಂಪಿ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಬುಧವಾರ ಸಿಎಂ ಸಿದ್ದರಾಮಯ್ಯ ಅವರು ಬಿಬಿಎಂಪಿ ವತಿಯಿಂದ ಶಂಕರಮಠ ವಾರ್ಡ್-75ರ ವ್ಯಾಪ್ತಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ನಂತರ ಮಾತನಾಡಿ ಅವರು, ಅಭಿವೃದ್ಧಿ ಕಾಮಗಾರಿಯ ಅವ್ಯವಸ್ಥೆಯಿಂದಾಗಿ ನಗರದಲ್ಲಿ ಯಾರಾದರೂ ಪ್ರಾಣ ಕಳೆದುಕೊಂಡರೆ ಬಿಬಿಎಂಪಿಯೇ ಜವಾಬ್ದಾರಿ ಎಂದರು.

'ನಮ್ಮ ಜನರು ಸಣ್ಣ ತಪ್ಪುಗಳಿಗೆ ಕೋರ್ಟ್ ಮೊರೆ ಹೋಗಲ್ಲ. ಆದ್ದರಿಂದ ನಿಮಗೆ ಭಯ ಇಲ್ಲ. ತಪ್ಪುಗಳನ್ನು ಎಗ್ಗಿಲ್ಲದೆ ಮಾಡುತ್ತಿದ್ದೀರಿ. ಅಧಿಕಾರಿಗಳು ಸಣ್ಣ ತಪ್ಪು ಮಾಡಿದರೂ ವಿದೇಶದಲ್ಲಿ ಜನರು ನ್ಯಾಯಾಲಯಕ್ಕೆ ಹೋಗುತ್ತಾರೆ. ಆದರೆ, ನಮ್ಮ ದೇಶದಲ್ಲಿ ಶಿಕ್ಷೆ ಆಗುವುದಿಲ್ಲ' ಎಂದು ತಿಳಿಸಿದರು. [ಚರಂಡಿಯಲ್ಲಿ ಕೊಚ್ಚಿ ಹೋದ ಮಗು]
'ಜನರು ಪ್ರಶ್ನಿಸುವುದಿಲ್ಲ ಎಂದು ನಾವು ರಸ್ತೆ ಅರ್ಧ ನಿರ್ಮಿಸಿ ಹಾಗೆಯೇ ಬಿಡುತ್ತೇವೆ. ಚರಂಡಿಗಳು ತೆರೆದೇ ಇರುತ್ತವೆ. ಕನಿಷ್ಠ ಬ್ಯಾರಿಕೇಡ್ ಹಾಕುವ ಕೆಲಸವನ್ನೂ ಮಾಡುವುದಿಲ್ಲ. ಡಾಂಬರೀಕರಣ ಮಾಡಿದ ರಸ್ತೆಗಳು ಒಂದೇ ಮಳೆಗೆ ಹಾಳಾಗಿ ಹೋಗುತ್ತವೆ'ಎಂದು ಸಿಎಂ ಬಿಬಿಎಂಪಿ ಅಧಿಕಾರಿಗಳ ಕಾರ್ಯಗಳ ಕುರಿತು ಪಟ್ಟಿ ನೀಡಿದರು. [ಬಂದಿತು ಭಾರೀ ಮಳೆ, ತಂದಿತು ಸಮಸ್ಯೆಗಳ ಹೊಳೆ]
ಸಂಪನ್ಮೂಲ ಸಂಗ್ರಹಿಸಿ : ಕಳೆದ ವರ್ಷ ಬಿಬಿಎಂಪಿಯಲ್ಲಿ 1,300 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಲಾಯಿತು. ಗುರಿ ನಿಗದಿಪಡಿಸಿದ ಬಳಿಕ ತೆರಿಗೆ ಸಂಗ್ರಹ 2,900 ಕೋಟಿಗೆ ಏರಿದೆ. ಬೆಂಗಳೂರು ನಗರದಲ್ಲಿ ಐದು ಸಾವಿರ ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಣೆ ಮಾಡಲು ಅವಕಾಶವಿದೆ. ಆದರೆ, ನಾವು ಸಂಪನ್ಮೂಲ ಸಂಗ್ರಹಣೆ ಮಾಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಸದ ಸಮಸ್ಯೆಗೆ ಗುತ್ತಿಗೆದಾರರು ಕಾರಣ : ಬೆಂಗಳೂರು ನಗರದಲ್ಲಿ ಕಸ ವಿಲೇವಾರಿಯ ಸಮಸ್ಯೆ ಉಂಟಾಗಲು ಗುತ್ತಿಗೆದಾರರು ಕಾರಣ ಎಂದು ಆರೋಪಿಸಿದ ಸಿಎಂ, ಸ್ವಚ್ಛತಾ ಅಭಿಯಾನ ನಿರಂತರವಾಗಿ ನಡೆಯಬೇಕು. ಒಂದು ದಿನ ಪೊರಕೆ ಹಿಡಿದು ಗುಡಿಸಿದರೆ ನಗರ ಸ್ವಚ್ಛವಾಗುವುದಿಲ್ಲ' ಎಂದು ವ್ಯಂಗ್ಯವಾಡಿದರು.
ವಿವಿಧ ಕಾಮಗಾರಿಗೆ ಶಂಕು ಸ್ಥಾಪನೆ : ಬುಧವಾರ ಜೆ.ಸಿ. ನಗರದಲ್ಲಿರುವ ನೀರುಗಾಲುವೆಯ ಮೇಲೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಶಂಕರಮಠ ವೃತ್ತದಿಂದ ಕುರುಬರಹಳ್ಳಿವರೆಗೆ ರಸ್ತೆ ಡಾಂಬರೀಕರಣ, ಜೆ.ಸಿ.ನಗರ 15ನೇ ಮುಖ್ಯ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಲಾಯಿತು.












Click it and Unblock the Notifications