ಅರ್ಕಾವತಿ ಡಿನೋಟಿಫಿಕೇಷನ್ ಕೇಸ್: ರಾಜ್ಯ ಸರ್ಕಾರದ ಮೇಲೆ ಹೆಚ್ಚಾಯ್ತು ಒತ್ತಡ, ಕಾರಣವೇನು?
ಬೆಂಗಳೂರು, ಅಕ್ಟೋಬರ್ 03: ಮೂಡಾ ಪ್ರಕರಣ ಬೆನ್ನಲ್ಲೆ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಮೂಡಾ ತನಿಖೆ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರು, ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣ ಸಂಬಂಧ ವರದಿಯನ್ನು ಬಹಿರಂಗಪಡಿಸಬೇಕು. ಇಷ್ಟು ವರ್ಷಗಳಾದರೂ ರಾಜ್ಯ ಸರ್ಕಾರ ಪ್ರಕರಣ ವರದಿ ಬಹಿರಂಗ ಮಾಡದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸಬೇಕು. ಈ ವರದಿ ಮಾಹಿತಿಯು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.

ರೂ.8,000 ಕೋಟಿ ಬೃಹತ್ ಭ್ರಷ್ಟಾಚಾರದ ಆರೋಪ?
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಎಎಪಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಸದಂ ಅವರು, ಆರ್ಕಾವತಿಯಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ. ಒಟ್ಟು 880 ಎಕರೆ ರಿಡೂ ಮಾಡಲಾಗಿದೆ. ಇದರ ಮೌಲ್ಯ ಏನಿಲ್ಲವೆಂದರೂ ಸುಮಾರು 8,000 ಕೋಟಿ ರೂಪಾಯಿ ಎನ್ನಲಾಗಿದೆ. 2014ರಲ್ಲಿ ಸಿದ್ದರಾಮಯ್ಯ ಅವರು 1952ರ ವಿಚಾರಣಾ ಆಯೋಗದ ಕಾಯ್ದೆಯ ಪ್ರಕಾರ ನ್ಯಾಯಮೂರ್ತಿ ಕೆಂಪಣ್ಣ ಅವರನ್ನು ವಿಚಾರಣಾ ಆಯೋಗದ ನೇತೃತ್ವ ವಹಿಸಲು ನೇಮಕ ಮಾಡಲಾಗಿತ್ತು ಎಂದು ಅವರು ವಿವರಿಸಿದರು.
ಪಾದರ್ಶಕತೆ ಬಗ್ಗೆ ಅನುಮಾನ
ಅಂದು ವರದಿ ತಯಾರಿಸಿ ನ್ಯಾ. ಕೆಂಪಣ್ಣ ಅವರು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಸಲ್ಲಿಸಿತ್ತು. ಇದೆಲ್ಲ ಆಗಿ ವರ್ಷಗಳು ಕಳೆದರೂ ಸಹಿತ ಮುಖ್ಯಮಂತ್ರಿಗಳ ಕಾರ್ಯಾಲಯವು ಈ ವರದಿಯನ್ನು ಸಾರ್ವಜನಿಕ ಪರಿಶೀಲನೆಗೆ ಲಭ್ಯವಾಗುವಂತೆ ಮಾಡಿಲ್ಲ. ಸರ್ಕಾರದ ಇಂತಹ ನಡೆಗಳು ಹಲವು ಅನುಮಾನ ಹುಟ್ಟಿಸುತ್ತವೆ. ಪಾರದರ್ಶಕತೆ ಕುರಿತು ಪ್ರಶ್ನೆ ಮೂಡುವಂತಾಗಿದೆ ಎಂದು ಹೇಳಿದರು.

ನ್ಯಾಯಾಂಗ ತನಿಖಾ ವರದಿ ಸಾರ್ವಜನಿಕ ದಾಖಲೆಗಳೆಂದು ಪರಿಗಣಿಸಲಾಗುತ್ತದೆ ಮತ್ತು ಅವು ಸಾರ್ವಜನಿಕರಿಗೆ ಲಭ್ಯವಾಗುವಂತೆ ನೋಡಿಕೊಳ್ಳುವುದು ಸರ್ಕಾರ ಕರ್ತವ್ಯವೇ ಆಗಿದೆ. ಆದ್ದರಿಂದ ಇದೆಲ್ಲ ಗಮನಿಸಿ ಸರ್ಕಾರ ವಿಳಂಬ ಮಾಡದೆ ಕೆಂಪಣ್ಣ ಆಯೋಗದ ವರದಿ ಕೂಡಲೇ ಬಿಡುಗಡೆ ಮಾಡಬೇಕು.
ವರದಿಯನ್ನು ಸದನದಲ್ಲಿ ಮಂಡಿಸಿ
ಇನ್ನೂ ಅರ್ಕಾವತಿ ಡಿನೋಟಿಫಿಕೇಷನ್ಗೆ ಸಂಬಂಧಿಸಿದಂತೆ ನ್ಯಾ.ಕೆಂಪಣ್ಣ ನೇತೃತ್ವದ ಆಯೋಗದ ವರದಿಯನ್ನು ವಿಧಾನಮಂಡಲದ ಎರಡು ಸದನಗಳಲ್ಲಿಟ್ಟು ಮಂಡಿಸಬೇಕು. ಅದರ ಮೇಲೆ ಯಾರು ತಪ್ಪಿ ಮಾಡಿದ್ದಾರೆ. ಪ್ರಕರಣದ ರೂವಾರಿ ಪತ್ತೆ ಮಾಡಿ ಕಾನೂನಿನಡಿ ತಕ್ಕ ಶಿಕ್ಷೆ ಆಗಬೇಕು ಎಂದು ಸರ್ಕಾರಕ್ಕೆ ಅವರು ಆಗ್ರಹಿಸಿದರು.
ಕಳೆದ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿ ಇತ್ತು. ಆದರೆ ಅಂದು ವರದಿ ಜಾರಿಗೆ ಮಾಡದ ಬಿಜೆಪಿ ನಾಯಕರು, ಇಂದು ವರದಿ ಜಾರಿ ಮಾಡುವಂತೆ ಕಾಂಗ್ರೆಸ್ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಬಿಜೆಪಿಯವರೇ ಈ ಕೆಲಸ ಏಕೆ ಮಾಡಲಿಲ್ಲ. ಸದನದಲ್ಲಿ ಮಂಡಿಸಲಿಲ್ಲ? ಎಂದು ಕಟುವಾಗಿ ಪ್ರಶ್ನಿಸಿದರು.
ತಾವು ಅಧಿಕಾರದಲ್ಲಿದ್ದಗ ಮೌನ ವಹಿಸಿ ಈಗ ವರದಿಗೆ ಒತ್ತಡ ತರುವ ನಡೆ ಸಹಿಸುವುದಿಲ್ಲ. ಈ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಾಯಕರು ಪರಸ್ಪರ ಆರೋಪ ಮಾಡುತ್ತ ಪ್ರಕರಣದ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಅವರು ದೂರಿದರು.












Click it and Unblock the Notifications