ಏಕವಚನ ಪ್ರಯೋಗ: ಬಿಎಸ್ವೈಗೆ ಸಿದ್ದು ಓಪನ್ ಚಾಲೆಂಜ್
ಬೆಂಗಳೂರು, ಅ 22: ನನ್ನನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸುತ್ತೇನೆ ಎನ್ನುವ ಮಾತನ್ನು ಯಡಿಯೂರಪ್ಪನವರು ಆಡಿದ್ದಾರೆ. ಯಡಿಯೂರಪ್ಪ ಒಬ್ಬ ಅಲ್ಲ, ನೂರು ಜನ ಯಡಿಯೂರಪ್ಪ ಸೇರಿ ನನ್ನನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಸಲು ಆಗುತ್ತಾ ನೋಡಿ ಎಂದು ಸಿದ್ದರಾಮಯ್ಯ ಕೆಜೆಪಿ ಅಧ್ಯಕ್ಷ ಯಡಿಯೂರಪ್ಪನವರಿಗೆ ಬಹಿರಂಗ ಸವಾಲೆಸೆದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ (ಅ 22) ಮಾತನಾಡುತ್ತಿದ್ದ ಸಿದ್ದು, ದೇವರು ಬಾಯಿ ಕೊಟ್ಟಿದ್ದಾನೆಂದು ಅದನ್ನು ಹೇಗೋಗೋ ಬಳಸಿ ಕೊಳ್ಳಬಾರದು. ನನ್ನ ಸಂಸ್ಕೃತಿಯೇ ಬೇರೆ ಯಡಿಯೂರಪ್ಪ ನವರ ಸಂಸ್ಕೃತಿಯೇ ಬೇರೆ ಎಂದು ತಿರುಗೇಟು ನೀಡಿದ್ದಾರೆ.
ಶಿವಮೊಗ್ಗದಲ್ಲಿ ಯಡಿಯೂರಪ್ಪ ನನ್ನ ವಿರುದ್ದ ಏಕವಚನದಲ್ಲಿ ವಾಗ್ದಾಳಿ ನಡಿಸಿದರು ಎನ್ನುವ ಮಾತನ್ನು ಕೇಳಲ್ಪಟ್ಟೆ. ನಾನೂ ಅವರಿಗಿಂತ ಮೀರಿ ಏಕವಚನದಲ್ಲಿ ಮಾತನಾಡಬಲ್ಲೆ. ಆದರೆ ಅದು ನನ್ನ ಅಥವಾ ನನ್ನ ಪಕ್ಷದ ಸಂಸ್ಕೃತಿಯಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ವಿರೋಧ ಪಕ್ಷಗಳೆಲ್ಲಾ ಸೇರಿ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸುತ್ತೇವೆ ಎನ್ನುವ ಮಾತನ್ನು ಯಡಿಯೂರಪ್ಪ ಆಡಿದ್ದಾರೆ. ನಿಮ್ಮ ಮತ್ತು ವಿರೋಧ ಪಕ್ಷಗಳ ಜಾತಕ ಮೊನ್ನೆ ನಡೆದ ಲೋಕಸಭೆಯ ಉಪ ಚುನಾವಣೆಯಲ್ಲಿ ಬಯಲಾಗಲಿಲ್ಲವೇ ಎಂದು ಸಿದ್ದು ವ್ಯಂಗ್ಯವಾಡಿದ್ದಾರೆ.
ಸಿದ್ದು ವಾಗ್ದಾಳಿ ಇನ್ನೂ ಇದೆ.. ಮುಂದೆ ಓದಿ..
ಸಿದ್ದು ವಾಕ್ ಪ್ರಹಾರ
ಬಿಜೆಪಿ, ಕೆಜೆಪಿ, ಜೆಡಿಎಸ್ ಎಲ್ಲಾ ಸೇರಿ ನಮ್ಮ ವಿರುದ್ದ ಹೋರಾಡಿದ್ದೀರಿ. ಜನತೆ ಕಳೆದ ಚುನಾವಣೆಯಲ್ಲಿ ಏನು ತೀರ್ಪು ನೀಡಿದ್ದಾರೆ ಅನ್ನುವುದನ್ನು ಪರಾಮರ್ಶಿಸಿಕೊಳ್ಳಿ. ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯ ಜಯದ ಅಂತರ ಎಷ್ಟು ಗೊತ್ತೇ.
ಸಿದ್ದು ವಾಗ್ದಾಳಿ
ಯಡಿಯೂರಪ್ಪ ತುಂಬಿಸಿಟ್ಟ ಖಜಾನೆಯನ್ನು ನಾವು ಖಾಲಿ ಮಾಡುತ್ತಿದ್ದೇವೆ ಎನ್ನುವ ಮಾತನ್ನು ಯಡಿಯೂರಪ್ಪ ಆಡಿದ್ದಾರೆ. ನೀವು ಖಜಾನೆ ಲೂಟಿ ಹೊಡೆದಿದ್ದೀರೋ ಅಥವಾ ತುಂಬಿಸಿದ್ದೀರೋ ಅನ್ನೋ ವಿಷಯ ಜನತೆಗೆ ತಿಳಿದಿದೆ.
ಶಿವಮೊಗ್ಗ ಅಭಿವೃದ್ದಿ
ರಾಜ್ಯವನ್ನು ಅಭಿವೃದ್ದಿ ಮಾಡಿದ್ದೇನೆಂದು ಹೇಳಿಕೆ ನೀಡಿ ರಾಜ್ಯ ಸುತ್ತುತ್ತಿರುವ ನೀವು, ಅಭಿವೃದ್ದಿ ಮಾಡಿದ್ದು ಶಿವಮೊಗ್ಗವನ್ನು. ಅದಕ್ಕಾಗಿಯೇ ಅವರು ಜೈಲು ಶಿಕ್ಷೆ ಅನುಭವಿಸಿದ್ದು. ಅದನ್ನು ನೆನಪಿನಲ್ಲಿ ಇಟ್ಟುಕೊಂಡು ಮಾತಾಡಿ.
ಹತಾಶಾ ಮನೋಭಾವ
ತಾನೂ ಮುಖ್ಯಮಂತ್ರಿಯಾಗಿದ್ದೆ ಎಂದು ಏನು ಬೇಕಾದರೂ ಹೇಳ ಬಹುದು ಎಂದು ಯಡಿಯೂರಪ್ಪ ಅಂದು ಕೊಂಡಿರಬಹುದು. ಅವರ ಸದ್ಯದ ರಾಜಕೀಯ ಅಸ್ಥಿರತೆ, ಅವರನ್ನು ಹತಾಶರನ್ನಾಗಿ ಮಾಡಿದೆ.
ಮುಂದಿನ ಚುನಾವಣೆ
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮೂರು ಸೀಟೂ ಸಿಗದ ಹಾಗೇ ಮಾಡುತ್ತೇನೆ ಎಂದಿದ್ದಾರೆ. ನೆಟ್ಟಗೆ ಒಂದೆರಡು ಸೀಟು ವಿನ್ ಆಗೋದಕ್ಕೆ ನೋಡಿ ಮೊದಲು. ಆಮೇಲೆ ಸವಾಲೆಸೆಯಿರಿ.