ಮುಂಗಾರು ಅಧಿವೇಶನ ಮುಂದೂಡಲು ರಾಜ್ಯಪಾಲರಿಗೆ ಮನವಿ ಸಾಧ್ಯತೆ
ಬೆಂಗಳೂರು, ಜುಲೈ 8: ಹನ್ನೆರಡು ಶಾಸಕರು ಶನಿವಾರ ರಾಜೀನಾಮೆ ಸಲ್ಲಿಸಿದ ನಂತರ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿ ಇರುವ ಕಾಂಗ್ರೆಸ್- ಜೆಡಿಎಸ್ ಸರಕಾರ ಪತನವಾಗುವ ಭೀತಿ ಇದ್ದು, ಸೋಮವಾರದಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತುರ್ತು ಸಂಪುಟ ಸಭೆ ಕರೆಯುವ ಸಾಧ್ಯತೆ ಇದೆ.
ಜುಲೈ ಹನ್ನೆರಡರಿಂದ ಆರಂಭ ಆಗಬೇಕಿರುವ ವಿಧಾನಸಭೆಯ ಮುಂಗಾರು ಅಧಿವೇಶನವನ್ನು ಮುಂದಕ್ಕೆ ಹಾಕುವಂತೆ ಮನವಿ ಮಾಡಿ, ಸಂಪುಟದಿಂದ ರಾಜ್ಯಪಾಲರಿಗೆ ನಿರ್ಣಯ ಕಳುಹಿಸುವ ಸಾಧ್ಯತೆ ಇದೆ. ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಗೆ ಸರಕಾರವನ್ನು ಉಳಿಸಿಕೊಳ್ಳುವ ರಣತಂತ್ರ ರೂಪಿಸಲು ಸ್ವಲ್ಪ ಕಾಲಾವಕಾಶ ಬೇಕಿದೆ.
ಅದರ ಭಾಗವಾಗಿ ವಿಧಾನಸಭಾ ಅಧಿವೇಶನವನ್ನು ಮುಂದೂಡುವುದು ಕೂಡ ಒಂದು ಆಯ್ಕೆಯಾಗಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಅಧಿವೇಶನ ಮುಂದೂಡಿದರೆ ರಾಜೀನಾಮೆ ವಿಚಾರವನ್ನು ಸಭಾಧ್ಯಕ್ಷರಾದ ಕೆ.ಆರ್.ರಮೇಶ್ ಕುಮಾರ್ ಮುಂದಕ್ಕೆ ಹಾಕಬಹುದು ಎಂಬುದು ನಿರೀಕ್ಷೆ ಆಗಿದೆ.

ತಮ್ಮ ಕಚೇರಿಗೆ ಮಂಗಳವಾರದಂದು ಹಿಂತಿರುಗಲಿದ್ದು, ಅಂದು ರಾಜೀನಾಮೆ ವಿಚಾರದ ಬಗ್ಗೆ ತೀರ್ಮಾನ ಮಾಡುವುದಾಗಿ ರಮೇಶ್ ಕುಮಾರ್ ಈಗಾಗಲೇ ತಿಳಿಸಿದ್ದಾರೆ. ಇನ್ನು ಅಮೆರಿಕದಿಂದ ಹಿಂತಿರುಗಿದ ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರ ಜತೆಗೆ ಚರ್ಚೆ ನಡೆಸಿದ್ದು, ಅಸಮಾಧಾನವನ್ನು ತಣಿಸುವ ನಿಟ್ಟಿನಲ್ಲಿ ಸಂಪುಟಕ್ಕೆ ದೊಡ್ಡ ಪ್ರಮಾಣದ ಸರ್ಜರಿ ಮಾಡುವ ಸಾಧ್ಯತೆ ಇದೆ.
ಆದರೆ, ಈ ಮಧ್ಯೆ ಅಸಮಾಧಾನಿತ ಶಾಸಕರ ಪರವಾಗಿ ಸುದ್ದಿಗೋಷ್ಠಿ ನಡೆಸಿದ್ದ ಯಶವಂತಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್, ಮುಖ್ಯಮಂತ್ರಿಯ ಬದಲಾವಣೆ ನಮ್ಮ ಬೇಡಿಕೆ ಅಲ್ಲ. ಯಾವ ಕಾರಣಕ್ಕೂ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications