ತೈವಾನ್ ದೇಶ ತೋರಿರುವ ಬದ್ಧತೆಯನ್ನು ಸ್ವಾಗತಿಸಿದ ಕುಮಾರಸ್ವಾಮಿ
ಬೆಂಗಳೂರು, ಜುಲೈ 11: ತೈವಾನ್ ದೇಶದ ಅತಿ ದೊಡ್ಡ ಡೆವೆಲಪರ್ಸ್ ಸೆಂಚುರಿ ಡೆವಲಪ್ಮೆಂಟ್ ಕಾರ್ಪೋರೇಷನ್ (ಸಿಡಿಸಿ) ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಆಧುನಿಕ ಕೈಗಾರಿಕಾ ಪಾರ್ಕ್ ಸ್ಥಾಪಿಸಲು ಮುಂದಾಗಿದೆ.
ಈ ಸಂಬಂಧ ಭಾರತದಲ್ಲಿನ ತೈಪೆ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರದ ಚುಂಗ್ ವಾಂಗ್ ಟಿಯೇನ್ ಹಾಗೂ ತೈವಾನಿನ ಸೆಂಚುರಿ ಡೆವಲಪ್ಮೆಂಟ್ ಕಾರ್ಪೋರೇಷನ್ನ ಮುಖ್ಯಸ್ಥ ತಿಯೋದೋರ್ ಹ್ಯುಯಾಂಗ್ ನೇತೃತ್ವದಲ್ಲಿ ಉನ್ನತ ಮಟ್ಟದ ನಿಯೋಗವು ಮುಖ್ಯಮಂತ್ರಿಗಳನ್ನು ಇಂದು (ಜುಲೈ 11) ಭೇಟಿ ಮಾಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಸಿಡಿಸಿ ಯೋಜನೆಯು ರಾಜ್ಯದಲ್ಲಿ ತೈವಾನ್ ಕೈಗಾರಿಕೆಗಳ ಹೂಡಿಕೆಯನ್ನು ಹೆಚ್ಚಿಸಲಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಹೂಡಿಕೆ ಮಾಡಲು ತೈವಾನ್ ದೇಶ ತೋರಿರುವ ಬದ್ಧತೆಯನ್ನು ಸ್ವಾಗತಿಸಿದ ಅವರು, ಆಧುನಿಕ ಕೈಗಾರಿಕಾ ಪಾರ್ಕ್ನಲ್ಲಿ ಜಪಾನ್, ಚೈನಾ ಮತ್ತಿತರ ದೇಶಗಳಿಂದ ಹಾಗೂ ರೋಬೋಟಿಕ್ಸ್, ಏರೋಬಿಕ್ಸ್, ಹಾರ್ಡ್ವೇರ್, ವಿಜ್ಞಾನ ಮತ್ತು ತಂತ್ರಜ್ಞಾನ, ಇ-ಕಾಮರ್ಸ್ ಸೇರಿದಂತೆ ವಿವಿಧ ಆಧುನಿಕ ಕ್ಷೇತ್ರಗಳ ಕೈಗಾರಿಕೆಗಳಿಂದ ಹೂಡಿಕೆಗಳನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಕರ್ನಾಟಕ ರಾಜ್ಯ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದು, ಇಲಾಖೆ ವತಿಯಿಂದ ಎಲ್ಲಾ ನೆರವನ್ನು ಒದಗಿಸುವುದಾಗಿ ಭರವಸೆಯಿತ್ತರು.
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಡಾ. ಸುಬ್ರಮಣ್ಯಂ, ಪ್ರಧಾನ ಕಾರ್ಯದರ್ಶಿ ರಮಣ ರೆಡ್ಡಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಆಯುಕ್ತ ದರ್ಪಣ್ ಜೈನ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.












Click it and Unblock the Notifications