ಉತ್ತರ ಕರ್ನಾಟಕದ ಧ್ವನಿ ಈಗ ನಿಂತು ಹೋಗಿದೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು ಸೆಪ್ಟೆಂಬರ್ 7 : ಅರಣ್ಯ ಮತ್ತು ಆಹಾರ ಸಚಿವ, ಉಮೇಶ್ ಕತ್ತಿ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು. ರಾಜ್ಯ ಕ್ರಿಯಾಶಿಲ, ಧೀಮಂತ ನಾಯಕ ಹಾಗೂ ಸಹಕಾರಿ ಧುರೀಣರನ್ನು ಕಳೆದುಕೊಂಡಂತಾಗಿದೆ. ಉತ್ತರ ಕರ್ನಾಟಕದ ಧ್ವನಿ ಈಗ ನಿಂತು ಹೋಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದು ತಿಳಿಸಿದರು.
ಏರ್ ಆ್ಯಂಬುಲೆನ್ಸ್ ಮುಖಾಂತರ ಉಮೇಶ್ ಕತ್ತಿಯವರ ಪಾರ್ಥೀವ ಶರೀರವನ್ನು ಒಯ್ಯಲಾಗಿದೆ. ಬೆಳಗಾವಿಯಿಂದ ಸಂಕೇಶ್ವರದ ಹಿರಾ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಮಧ್ಯಾಹ್ನ 2 ಗಂಟೆಯವರೆಗೆ ವ್ಯವಸ್ಥೆ ಮಾಡಲಾಗುವುದು. ಅಲ್ಲಿಂದ ಬಾಗೇವಾಡಿಯ ಅವರ ನಿವಾಸದಲ್ಲಿ ಎಲ್ಲ ವಿಧಿವಿಧಾನಗಳನ್ನು ಪೂರೈಸಿ ಸಂಜೆ 5 ಗಂಟೆಗೆ ಅವರ ಸ್ವಂತ ತೋಟದಲ್ಲಿ ಅಂತಿಮ ಕ್ರಿಯೆಯನ್ನು ಮಾಡಲು ತೀರ್ಮಾನಿಸಲಾಗಿದೆ. ಸಾರ್ವಜನಿಕರ ದರ್ಶನಕ್ಕಾಗಿ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಸಹಕಾರ ನೀಡಬೇಕೆಂದು ಮುಖ್ಯಮಂತ್ರಿಗಳು ಕೋರಿದರು.
Recommended Video
ಉಮೇಶ್ ಕತ್ತಿ ನನ್ನ ಆತ್ಮೀಯ ಸಹೋದರರು. ಸುಮಾರು 4 ದಶಕಗಳಿಗೂ ಹೆಚ್ಚು ನಮ್ಮ ಅವರ ಕುಟುಂಬದ ಒಡನಾಟವಿತ್ತು. ಅವರ ತಂದೆ ವಿಶ್ವನದಾಥ ಕತ್ತಿಯವರು ನಮ್ಮ ತಂದೆಯವರ ಜೊತೆಗೆ ಆತ್ಮೀಯ ಒಡನಾಟವಿತ್ತು. ಅವರು ವಿಧಾನಸಭೆಯ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತ ಆಗಿ ವಿಧಿವಶರಾಗಿದ್ದರು. ಆ ಸಂದರ್ಭದಲ್ಲಿ ಅತ್ಯಂತ ಕಿರಿಯ ವಯಸ್ಸಿನ ಉಮೇಶ್ ಕತ್ತಿ 25 ವರ್ಷದವರಾಗಿದ್ದಾಗ, ಶಾಸಕಾರಾಗಿ ಸಾರ್ವಜನಿಕ ಜೀವನದಲ್ಲಿ ಪಾದಾರ್ಪಣೆ ಮಾಡಿದ ಅವರು ಎಂದೂ ತಿರುಗಿ ನೋಡಲಿಲ್ಲ. ಎಂಟು ಬಾರಿ ಶಾಸಕರಾಗಿ ಆಯ್ಕೆಯಾಗಿ ರಾಜ್ಯದ ಒಬ್ಬ ಪ್ರಮುಖ ನಾಯಕನಾಗಿ ಹೊರಹೊಮ್ಮಿದ್ದರು. ಈ ವಿಧಾನಸಭೆಯಲ್ಲಿ ಅತಿ ಹೆಚ್ಚು ಬಾರಿ ಶಾಸಕರಾದವರಲ್ಲಿ ಅವರೇ ಹಿರಿಯರು. ಅವರ ಜನಪರ ಕಾಳಜಿ, ವಿಶೇಷವಾಗಿ ರೈತರಿಗೆ, ರೈತ ಹಿತಚಿಂತಕರಾಗಿ ಅವರ ಕೆಲಸಗಳು ಮತ್ತು ರಾಜ್ಯದ ಸಚಿವ ಸಂಪುಟದ ಸದಸ್ಯರಾಗಿ ಜೆ.ಹೆಚ್.ಪಟೇಲ್ ರ ಸಚಿವ ಸಂಪುಟದಲ್ಲಿ ಸಕ್ಕರೆ, ಬಂಧಿಖಾನೆ ಹಾಗು ಲೋಕಕೋಪಯೋಗಿ ಸಚಿವಾರಗಿ ಕೆಲಸ ಮಾಡಿದ್ದರು. ಯಡಿಯೂರಪ್ಪ ಸಚಿವಸಂಪುಟದಲ್ಲಿ ತೋಟಗಾರಿಕೆ ಮತ್ತು ಕೃಷಿ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು. ಉತ್ತರ ಕರ್ನಾಟಕದ ಬಗ್ಗೆ ವಿಶೇಷ ಕಾಳಜಿ, ಪ್ರೀತಿ ಇತ್ತು. ಎಂದರು.
ಹಲವು ಯೋಜನೆಗಳಲ್ಲಿ ಪ್ರಮುಖ ಪಾತ್ರ
ಆಹಾರ ಮತ್ತು ಅರಣ್ಯ ಸಚಿವರಾಗಿ ಅತ್ಯುತ್ತಮವಾಗಿ ನಿಭಾಯಿಸುತ್ತಿದ್ದರು. ಯಾವುದೇ ಖಾತೆ ನೀಡಿದರೂ ತಮ್ಮದೇ ಆದ ಛಾಪನ್ನು ಮೂಡಿಸುತ್ತಿದ್ದರು. ಅವರು ಆಹಾರ ಸಚಿವರಾದ ನಂತರ ಉತ್ತರ ಕರ್ನಾಟಕದಲ್ಲಿ ಬೆಳೆಯುವ ಜೋಳ , ದಕ್ಷಿಣ ಕರ್ನಾಟಕದಲ್ಲಿ ಬೆಳೆಯುವ ರಾಗಿ ಇದನ್ನು ಪಿಡಿಎಸ್ ನಲ್ಲಿ ತರಲು , ಗಟ್ಟಿಯಾಗಿ ನಿಂತು ರೈತರ ಬೆಳೆಗೆ ಯೋಗ್ಯ ಬೆಲೆ ದೊರೆಯಲು ಮತ್ತು ರಾಜ್ಯದ ಆಹಾರ ಜನರಿಗೂ ತಲುಪಿಸಿದಂತಾಗುತ್ತದೆ ಎಂದು ಮಾಡಿದ ಕಾರ್ಯ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅದು ಅವರ ಸಾಮಾಜಿಕ ಕಳಕಳಿ ಮತ್ತು ಸ್ಥಿತಪ್ರಜ್ಞೆ ಅವರಲ್ಲಿತ್ತು. ನೀರಾವರಿ ಕ್ಷೇತ್ರದಲ್ಲಿ ದೊಡ್ಡ ಪರಿಣಿತರಿದ್ದರು ಮುಖ್ಯಮಂತ್ರಿ ಸ್ಮರಿಸಿದರು. 3 ದಶಕಗಳ ಕಾಲ ಶಾಸಕರಾಗಿ, ಮಂತ್ರಿಯಾಗಿ ಘಟಪ್ರಭಾ ಯೋಜನೆಯ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಹಿಡಕಲ್ ಜಲಾಶಯದ ತೋಟವನ್ನು ಆಲಮಟ್ಟಿ ಮಾದರಿಯಲ್ಲಿ ಮತ್ತು ಬೃಂದಾವನ ಮಾಡಲು, ಹಿಡಕಲ್ ಜಲಾಶಯದ ಹಿನ್ನೀರಿನ ನಡುಗಡ್ಡೆಗಳನ್ನು ಪ್ರವಾಸೋದ್ಯಮ ಕೇಂದ್ರಗಳಾಗಿ ಮಾಡಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದರು. ಅದನ್ನು ಬಜೆಟ್ ನಲ್ಲಿ ಘೋಷಿಸಿ, ಮೊನ್ನೆ ನಡೆಸ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡಾಗ, ಅವರ ಕನಸನ್ನು ನನಸು ಮಾಡಿದ್ದಕ್ಕಾಗಿ ನನ್ನನ್ನು ಅಭಿನಂದಿಸಿದ್ದನ್ನು ಮುಖ್ಯಮಂತ್ರಿಗಳು ಸ್ಮರಿಸಿದರು.
ರಾಜ್ಯ ಹಿರಿಯ ರಾಜಕಾರಣಿಗಳ ಜೊತೆ ಒಡನಾಟ
ಉಮೇಶ್ ಕತ್ತಿ ವ್ಯಕ್ತಿಗತವಾಗಿ ಅಜಾತಶತ್ರುವಾಗಿದ್ದರು. ಎಲ್ಲರ ಜೊತೆಗೆ ನಗುತ್ತಲೇ ಮಾತನಾಡುತ್ತಿದ್ದರು. ರಾಜಕಾರಣಿಗಳಲ್ಲಿ ಹಾಸ್ಯಪ್ರಜ್ಞೆ ಇರುವುದು ಕಡಿಮೆ. ಆದರೆ ಎಂತಹುದೇ ಕಠಿಣ ಪರಿಸ್ಥಿತಿಯಲ್ಲಿಯೂ ತಮ್ಮ ಹಾಸ್ಯದಿಂದ ತಿಳಿಗೊಳಿಸಿ, ಪರಿಹಾರ ನೀಡುತ್ತಿದ್ದರು. ಅವರ ಸ್ನೇಹವನ್ನು ಅನುಭವಿಸಿದವರು , ಅದರ ಪ್ರೀತಿ ವಿಶ್ವಾಸವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಜೆ.ಹೆಚ್ ಪಟೇಲ್, ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ, ದೇವೇಗೌಡರು, ಯಡಿಯೂರಪ್ಪನವರ ಸೇರಿದಂತೆ ಹಿರಿಯರ ಜೊತೆಗೆ ಅನ್ಯೋನ್ಯ ಸಂಬಂಧವಿರಿಸಿಕೊಂಡಿದ್ದರು. ನನ್ನ ಜೊತೆಗೆ 3 ದಶಕಗಳಿಗೂ ಹೆಚ್ಚು ಕಾಲ ಸಹೋದರರ ಸಂಬಂಧವಿತ್ತು ಎಂದು ತಿಳಿಸುವ ವೇಳೆ ಮುಖ್ಯಮಂತ್ರಿಗಳು ಭಾವುಕರಾಗಿದ್ದರು.
ಉತ್ತರ ಕರ್ನಾಟಕದ ಧ್ವನಿ ಈಗ ನಿಂತು ಹೋಗಿದೆ
ಹಲವಾರು ರಾಜಕಾರಣದಲ್ಲಿ ಏರುಪೇರುಗಳನ್ನು ಒಟ್ಟಿಗೆ ನೋಡಿದ್ದು, ಹಲವು ಹೋರಾಟಗಳಲ್ಲಿ, ಪ್ರಮುಖ ರಾಜಕೀಯ ನಿರ್ಧಾರಗಳನ್ನು ಒಟ್ಟಿಗೆ ತೆಗೆದುಕೊಂಡಿದ್ದೇವೆ. ಆಡಳಿತಾತ್ಮಕ ನಿರ್ಧಾರಗಳನ್ನು ಪರಸ್ಪರ ವಿಶ್ವಾಸದೊಂದಿಗೆ ಮಾಡಿದ್ದೇವೆ. ಆ ಪ್ರತಿಯೊಂದು ಕ್ಷಣ ನನಗೆ ನೆನಪಾಗುತ್ತಿದೆ. ಅವರ ಪ್ರಮುಖ ರಾಜಕೀಯ ನಿರ್ಧಾರಗಳಲ್ಲಿ ನನ್ನ ಇದರೇ ನಿರ್ಣಯಗಳನ್ನು ಮಾಡುತ್ತಿದ್ದರು. ಅವರ ಸೋದರ ರಮೇಶ್ ಕತ್ತಿ, ಅವರ ಕುಟುಂಬದ ಎಲ್ಲ ಸದಸ್ಯರು ಅತ್ಯಂತ ಆತ್ಮೀಯರಾಗಿದ್ದರು. ಸಹಕಾರ ರಂಗದಲ್ಲಿ ಅತ್ಯಂತ ಹಿರಿದಾದ ಪಾತ್ರ ವಹಿಸಿದ್ದ ಸಹಕಾರಿ ಧುರೀಣರಾಗಿದ್ದರು. ಸಹಕಾರಿ ಬ್ಯಾಂಕ್, ಸಕ್ಕರೆ ಕಾರ್ಖಾನೆ , ವಿದ್ಯುತ್ ವಿಸ್ತರಣೆ ಸಹಕಾರಿ ಸೊಸೈಟಿಯ ಅಧ್ಯಕ್ಷರಾಗಿ ಸಮರ್ಪಕವಾಗಿ ನಿರ್ವಹಿಸಿದ್ದರು. ರಾಜ್ಯಕ್ಕೆ ವಿದ್ಯುತ್ , ನೀರಾವರಿ ಕ್ಷತ್ರದಲ್ಲಿ ಹಲವು ಬಾರಿ ಮಾರ್ಗದರ್ಶನ ಮಾಡಿದ್ದಾರೆ. ವಿರೋಧಪಕ್ಷದಲ್ಲಿ ಹಾಗೂ ಆಡಳಿತ ಪಕ್ಷದಲ್ಲಿ ಹಲವು ಸ್ನೇಹಿತರನ್ನು ಹೊಂದಿದ್ದರು. ಬೆಳಗಾವಿ ಜಿಲ್ಲೆ ಹಿರಿಯ ಧುರೀಣರನ್ನು ಕಳೆದುಕೊಂಡಿದ್ದು, ಉತ್ತರ ಕರ್ನಾಟಕದ ಧ್ವನಿ ಈಗ ನಿಂತು ಹೋಗಿದೆ ಎಂದು ಸಿಎಂ ಹೇಳಿದರು.
ಕತ್ತಿ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ
ಉಮೇಶ್ ಕತ್ತಿಯವರ ಅಕಾಲಿಕ ನಿಧನ ವೈಯಕ್ತಿಕವಾಗಿ ನನಗೆ ತುಂಬಲಾರದ ನಷ್ಟವಾಗಿದೆ. ಒಬ್ಬ ಸಹೋದರನ್ನು ಕಳೆದುಕೊಂಡಿದ್ದೇನೆ. ಭಗವಂತ ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ, ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಮುಖ್ಯಮಂತ್ರಿಗಳು ಹಾರೈಸಿದರು.