ಬೆಂಗಳೂರಿಗರಿಗೆ ಗುಡ್ ಮಾರ್ನಿಂಗ್ ಹೇಳಿದ ತುಂತುರು ಮಳೆ!
ಬೆಂಗಳೂರು, ಜೂನ್ 29 : ಛತ್ರಿ ಎಲ್ಲಿದೆ?, ಜರ್ಕಿನ್ ಎಲ್ಲಿದೆ? ಎಂದು ಹುಡುಕಾಡುವಂತಿದೆ ಬೆಂಗಳೂರಿನ ಹವಾಮಾನ. ಬುಧವಾರ ಮುಂಜಾನೆಯಿಂದಲೇ ನಗರದಲ್ಲಿ ತುಂತುರು ಮಳೆ ಆರಂಭವಾಗಿದೆ. ತಾಪಮಾನ 22 ಡಿಗ್ರಿಗೆ ಕುಸಿದಿದ್ದು, ಚಳಿ ಆವರಿಸಿದೆ.
ಮಂಗಳವಾರ ಬೆಂಗಳೂರಿನಲ್ಲಿ ಮಳೆ ಸ್ವಲ್ಪ ಬಿಡುವು ಕೊಟ್ಟಿತ್ತು. ಆದರೆ, ಬುಧವಾರ ಮುಂಜಾನೆ ಆರಂಭವಾದ ಮಳೆ ಜನರ ಚಿಂತೆಗೆ ಕಾರಣವಾಗಿದೆ. ಆಫೀಸಿಗೆ ಹೋಗುವುದು ಹೇಗೆ?, ಮಕ್ಕಳನ್ನು ಶಾಲೆಗೆ ಕಳಿಸುವುದು ಹೇಗೆ?., ಎಲ್ಲಿ ಟ್ರಾಫಿಕ್ ಜಾಮ್ ಆಗಿದೆಯೋ? ಎಂದು ಜನರು ಚಿಂತಿಸುವಂತೆ ಮಾಡಿದೆ. [ಮಡಿಕೇರಿಯಲ್ಲಿ ಇದೇನ್ ಮಹಾ ಮಳೆ ? ಈ ಬಾರಿ ತಡವಾಯ್ತು']

ತುಂತುರು ಮಳೆಗೆ ಓದುಗರ ಕವನ
ಜಿಟಿಜಿಟಿ ಎಂದು ಸುರಿಯುತ್ತಿದ್ದ ಆ ಮಳೆಯಲ್ಲಿ
ಓಲಾಡುವ ನನ್ನ ಹೊಚ್ಚ ಹೊಸಾ ಬೈಕಿನಲ್ಲಿ
ಮೈ ನಡುಗಿಸುವ ಚುಮುಚುಮು ಚಳಿಯಲ್ಲಿ
ರಸ್ತೆಬದಿಯ ಗೂಡಂಗಡಿಯ ಬಿಸಿ ಕಾಫಿಯಲ್ಲಿ
ನಾಲಿಗೆ ಚುರ್ರೆನ್ನಿಸುವ ಬಿಸಿ ಬಿಸಿ ಬಜ್ಜಿಯಲ್ಲಿ
ಕಳೆದ ದಿನಗಳವು ನಮ್ಮ ಬೆಂಗಳೂರಿನಲ್ಲಿ
ನೆನಪಾದವಿಂದು ಸುಡುಧಗೆಯ ದುಬೈನಲ್ಲಿ...!
ಕವನ ಬರೆದವರು : ಹೊಳೆನರಸಿಪುರ Thimmayya
ನಗರದಲ್ಲಿ ದಟ್ಟ ಮೋಡ ಕವಿದಿದ್ದು ಸಮಯ 9.30 ಆದರೂ ಸರಿಯಾಗಿ ಸೂರ್ಯನ ದರ್ಶನವಾಗಿಲ್ಲ. ತುಂತುರು ಮಳೆ ಸುರಿಯುತ್ತಲೇ ಇದ್ದು, ಕಚೇರಿಗೆ ಹೋಗುವ ಜನರು ಮತ್ತು ಶಾಲೆಗೆ ಹೋಗುವ ಮಕ್ಕಳು ಪರದಾಡುವಂತಾಗಿದೆ. ಮಳೆಯಿಂದಾಗಿ ನಗರದ ಹಲವು ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಕೆಲವು ಕಡೆ ನಿಧಾನಗತಿಯ ವಾಹನ ಸಂಚಾರವಿದೆ. [ಬಲಗಾಲಿಟ್ಟು ಪ್ರವೇಶಿಸಿದ ಮುಂಗಾರು ಮಳೆ]
ಬೆಂಗಳೂರು ಹವಾಮಾನ : ತಾಪಮಾನ 22ºC , ಗಾಳಿ 7.1 , ತೇವಾಂಶ 0.83 , ಒತ್ತಡ 1008.21 pa, ಸಣ್ಣ ಮಳೆ ಸಾಧ್ಯತೆ #bengaluru #weather
— ಹವಾಮಾನ ವರದಿ ಬೆಂಗಳೂರು (@blr_weather) June 29, 2016
ಚಳಿ..ಚಳಿ : ತುಂತುರು ಮಳೆಯ ಜೊತೆ ಚಳಿ ಆವರಿಸಿದೆ. ಆದ್ದರಿಂದ, ನಗರದ ಬಹುತೇಕ ಪಾರ್ಕ್ಗಳಲ್ಲಿ ಇಂದು ವಾಯುವಿಹಾರಿಗಳ ಸಂಖ್ಯೆ ಕಡಿಮೆಯಾಗಿದೆ. ಬೈಕ್ ಸವಾರರು ಬೇಕರಿ ಕಂಡಲ್ಲಿ ಬೈಕ್ ನಿಲ್ಲಿಸಿ ಕಾಫಿ/ಟೀ ಕುಡಿದು ಚಳಿ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕಚೇರಿಗೆ ಹೊರಡುವವರು ಬೈಕ್ ಬಿಟ್ಟು ಕಾರಲ್ಲಿ ಹೋದರೆ ಉತ್ತಮ ಎಂದು ಚಿಂತಿಸುತ್ತಿದ್ದಾರೆ.
ನಿಧಾನ ಗತಿ ಸಂಚಾರ
* ದೇವೇಗೌಡ ಪೆಟ್ರೋಲ್ ಬಂಕ್ನಿಂದ ನಾಯಂಡಹಳ್ಳಿ ಕಡೆಗೆ ಸಾಗುವ ಮಾರ್ಗ
* ಎಚ್ಎಸ್ಆರ್ ಲೇಔಟ್ ಬ್ರಿಡ್ಜ್ನಿಂದ ಇಬ್ಬಲೂರು ಮಾರ್ಗ
* ರಾಮಮೂರ್ತಿ ನಗರದಿಂದ ಕೆ.ಆರ್.ಪುರಂ.ಮಾರ್ಗ

ಕಸ ವಿಲೇವಾರಿಗೆ ಅಡ್ಡಿ : ಮುಂಜಾನೆಯಿಂದಲೇ ಮಳೆ ಸುರಿಯುತ್ತಿರುವುದರಿಂದ ನಗರದ ಕಸ ವಿಲೇವಾರಿಗೆ ಅಡ್ಡಿ ಉಂಟಾಗಿದೆ. ಕಸದ ರಾಶಿಗಳಿಗೆ ನೀರು ನುಗ್ಗಿದ್ದು, ಅದನ್ನು ಸಾಗಣೆ ಮಾಡಲು ಪೌರ ಕಾರ್ಮಿಕರು ಹರ ಸಾಹಸ ಪಡಬೇಕಾಗಿದೆ.












Click it and Unblock the Notifications