ಫುಟ್ಪಾತ್ ವಿಚಾರ, ಬಿಬಿಎಂಪಿ ಆಯುಕ್ತರಿಗೆ ಕೋರ್ಟ್ ಕ್ಲಾಸ್
ಬೆಂಗಳೂರು, ನ.6 : ಬೆಂಗಳೂರಿನಲ್ಲಿ ಫುಟ್ಪಾತ್ ತೊರವುಗೊಳಿಸಿದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದ ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾಯಣ ಅವರನ್ನು ತರಾಟೆಗೆ ತೆಗೆದುಕೊಂಡ ಕೋರ್ಟ್, ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳನ್ನು ಮನೆಗೆ ಕಳುಹಿಸಿ, ನಿಮ್ಮ ಕೈಯಲ್ಲಿ ಸಾಧ್ಯವಾಗದಿದ್ದರೆ ಹೇಳಿ, ನ್ಯಾಯಾಲಯವೇ ಈ ಕೆಲಸ ಮಾಡಲಿದೆ ಎಂದು ಹೇಳಿದೆ.
ಪಾದಚಾರಿಗಳ ಹಕ್ಕು ರಕ್ಷಣೆ ಕುರಿತು ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್.ವಘೇಲಾ ಹಾಗೂ ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಅವರಿದ್ದ ವಿಭಾಗೀಯ ಪೀಠ, ಸುಮಾರು ಎರಡು ಗಂಟೆಗಳ ಕಾಲ ಬುಧವಾರ ವಿಚಾರಣೆ ನಡೆಸಿತು.

ಜನರು ಪಾವತಿ ಮಾಡುವ ತೆರಿಗೆ ಹಣದಿಂದ ಅಧಿಕಾರಿಗಳಿಗೆ ವೇತನ ನೀಡಲಾಗುತ್ತಿದೆ. ಆದರೆ, ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನಿಸುತ್ತಿದೆ. ಇದು ನಿಮ್ಮ ಗಮನಕ್ಕೆ ಬಂದಿಲ್ಲವೇ? ಎಂದು ಕೋರ್ಟ್ ಆಯುಕ್ತರಿಗೆ ಪ್ರಶ್ನೆ ಮಾಡಿದೆ. [ಮೂರು ತಿಂಗಳಲ್ಲಿ ಅತಿಕ್ರಮಣ ತೆರವುಗೊಳಿಸಿ]
ಬೆಂಗಳೂರು ಫುಟ್ಪಾತ್ ವ್ಯಾಪಾರಿಗಳ ಸ್ವರ್ಗ ಎಂಬಂತಾಗಿದೆ. ಫುಟ್ಪಾತ್ ಅತಿಕ್ರಮಣ ಮಾಡಿಕೊಂಡವರ ಜೊತೆ ಅಧಿಕಾರಿಗಳು ಶಾಮೀಲಾಗಿದ್ದರೆ, ಅವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಿ, ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದಿದ್ದರೆ, ಅವರನ್ನು ಮನೆಗೆ ಕಳುಹಿಸಿ, ನೀವು ಮಾಡದಿದ್ದೆ ಕೋರ್ಟ್ ಈ ಕೆಲಸ ಮಾಡುತ್ತದೆ ಎಂದು ವಿಚಾರಣೆ ವೇಳೆ ಅಸಮಾಧಾನ ವ್ಯಕ್ತಪಡಿಸಿತು. [ಮೇಯರ್ ಶಾಂತಕುಮಾರಿ ಸಂದರ್ಶನ ಓದಿ]
ಫುಟ್ಪಾತ್ ತೆರವಿಗೆ ಪಾಲಿಕೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಆದರೆ, ಕೆಲವು ಕಡೆ ದೇವಾಲಯಗಳು ಮತ್ತು ಬೀದಿ ವ್ಯಾಪಾರಸ್ಥರು ಇರುವುದರಿಂದ ತೆರವುಗೊಳಿಸುವುದು ಕಷ್ಟವಾಗುತ್ತಿದೆ ಎಂದು ಆಯುಕ್ತರು ಕೋರ್ಟ್ಗೆ ವಿವರಣೆ ನೀಡಿದರು.
ವಿಶೇಷಾಧಿಕಾರಿ ನೇಮಕ : ಫುಟ್ಪಾತ್ ತೆರವು, ಹೊಸ ಫುಟ್ಪಾತ್ ನಿರ್ಮಾಣ, ಪಾದಚಾರಿ ಮಾರ್ಗಗಳ ನಿರ್ವಹಣೆ ಮಾಡಲು ವಿಶೇಷಾಧಿಕಾರಿಯನ್ನು ನೇಮಕ ಮಾಡಲಾಗುವುದು, ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದಿದ್ದರೆ ಶೋಕಾಸ್ ನೋಟೀಸ್ ನೀಡಿ ಅಮಾನತುಗೊಳಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತರು ಕೋರ್ಟ್ಗೆ ಹೇಳಿಕೆ ನೀಡಿದರು.
ತೆರವುಗೊಳಿಸಲು ಆದೇಶ : ಬೆಂಗಳೂರು ಮಹಾನಗರದಲ್ಲಿ ಅತಿಕ್ರಮಣವಾಗಿರುವ ಪಾದಚಾರಿ ಮಾರ್ಗಗಳನ್ನು ಮೂರು ತಿಂಗಳಲ್ಲಿ ತೆರವುಗೊಳಿಸುವಂತೆ ಮತ್ತು ಅವೈಜ್ಞಾನಿಕ ಹಾಗೂ ಸುಸ್ಥತಿಯಲ್ಲಿರದ ಪಾದಚಾರಿ ಮಾರ್ಗಗಳನ್ನು ಆರು ತಿಂಗಳಲ್ಲಿ ದುರಸ್ತಿ ಮಾಡಬೇಕು ಎಂದು ಜುಲೈನಲ್ಲಿ ಹೈಕೋರ್ಟ್ ಬಿಬಿಎಂಪಿಗೆ ಸೂಚನೆ ನೀಡಿತ್ತು.












Click it and Unblock the Notifications