ದಂಡ ಕಟ್ಟಿ ಅಂದ್ರೆ, ಬಿಬಿಎಂಪಿಗೆ ಕ್ಯಾರೆ ಎನ್ನದ ಚಿನ್ನಸ್ವಾಮಿ ಕ್ರೀಡಾಂಗಣ!
ಬೆಂಗಳೂರು, ಜನವರಿ 24: ಪ್ಲಾಸ್ಟಿಕ್ ನಿಷೇಧಿಸುವಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸಾರ್ವಜನಿಕರ ಬೆಂಬಲವನ್ನು ಗಿಟ್ಟಿಸಿಕೊಳ್ಳುವುದು ಹರಸಾಹಸವೇ ಆಗಿರುವುದು ಗೊತ್ತಿರುವಂತದು.
ಆದರೆ, ಬಿಬಿಎಂಪಿಯ ಪ್ಲಾಸ್ಟಿಕ್ ನಿಷೇಧಕ್ಕೆ ಸಾರ್ವಜನಿಕ ಸಂಘ-ಸಂಸ್ಥೆಗಳಿಂದಲೇ ಸರಿಯಾದ ಸಹಕಾರ ಸಿಗುತ್ತಿಲ್ಲ ಎಂಬುದು ಬಹಿರಂಗವಾಗಿದೆ. ಜನವರಿ 19 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಭಾರತ ಹಾಗೂ ಆಸ್ಟ್ರೇಲಿಯ ನಡುವಿನ ಏಕದಿನ ಪಂದ್ಯದಲ್ಲಿ ಪ್ಲಾಸ್ಟಿಕ್ ಬಳಕೆಯಾಗಿದೆ ಎಂದು ಬಿಬಿಎಂಪಿ 50 ಸಾವಿರ ರುಪಾಯಿ ದಂಡ ವಿಧಿಸಿತ್ತು.
ಆದರೆ, ಇದಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದ ಆಡಳಿತ ಮಂಡಳಿ ಕ್ಯಾರೆ ಎಂದಿಲ್ಲ. ದಂಡ ಕಟ್ಟುವುದಿಲ್ಲ ಎನ್ನುತ್ತಿದ್ದಾರೆ ಎಂದು ಸ್ವತಃ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಅವರೇ ತಿಳಿಸಿದ್ದಾರೆ. ಪಂದ್ಯ ನಡೆದ ದಿನ ಪಂದ್ಯ ನೋಡಲು ಬಂದವರು ಪ್ಲಾಸ್ಟಿಕ್ ಬಳಸಿದರೆ ನಾವೇಕೆ ದಂಡ ಕಟ್ಟಬೇಕು ಎಂದು ಚಿನ್ನಸ್ವಾಮಿ ಕ್ರೀಡಾಂಗಣ ವಾದಿಸುತ್ತಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಯುಕ್ತರು ದಂಡವನ್ನು ಕಟ್ಟಿಸಿಕೊಳ್ಳದೇ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಸಾರ್ವಜನಿಕರೂ ನಮ್ಮ ಮಾತು ಕೇಳದಾಗಿದ್ದಾರೆ ಎಂಬ ಅಸಹಾಯಕತೆಯನ್ನು ಆಯುಕ್ತರು ವ್ಯಕ್ತಪಡಿಸಿದ್ದಾರೆ.

ಬಿಬಿಎಂಪಿ ಸ್ವಚ್ಚ ಸರ್ವೇಕ್ಷಣೆ 2020 ರಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆಯಬೇಕು ಎಂದು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸುತ್ತಿದೆ. ಆದರೆ, ಇದಕ್ಕೆ ಸಾರ್ವಜನಿಕರ ಬೆಂಬಲ ಸಿಗುತ್ತಿಲ್ಲ ಎಂಬುದು ಚಿನ್ನಸ್ವಾಮಿ ಕ್ರೀಡಾಂಗಣದಿಂದ ಗೊತ್ತಾಗಿದೆ.












Click it and Unblock the Notifications