ಸರಕ್ಕಾಗಿ ವೃದ್ಧೆಯನ್ನು ಉಸಿರುಗಟ್ಟಿಸಿ ಕೊಂದವರ ಬಂಧನ
ಬೆಂಗಳೂರು, ಮಾರ್ಚ್ 7: ದೇವಾಲಯ ದರ್ಶನ ಮಾಡಿಸುವುದಾಗಿ ನಂಬಿಸಿ ವೃದ್ಧೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಕತ್ತಿನಲ್ಲಿರುವ ಸರ ದೋಚಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಶಿರಡಿ ಸಾಯಿಬಾಬಾ ದೇವಾಲಯಕ್ಕೆ ಕರೆದುಕೊಂಡು ಹೋಗುವ ನೆಪದಲ್ಲಿ ವೃದ್ಧೆಯ ಕತ್ತು ಬಿಗಿದು ಕೊಲೆ ಮಾಡಿ ಚಿನ್ನದ ಸರ ದೋಚಿದ ಆರೋಪಿಗಳನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.
ಸುಕೇಶ್, ಪ್ರಸನ್ನ, ತಿಪ್ಪೇಶ್, ಮಧುಸೂದನ್ ಬಂಧಿತರು. ಮಡಿವಾಳದಲ್ಲಿರುವ ಬಾಡಿಗೆ ಮನೆಯಲ್ಲಿ ಹೇಮಾವತಿ ಒಬ್ಬರೇ ವಾಸಿಸುತ್ತಿದ್ದರು. ಇವರ ಮಗಳು ವಾರಕ್ಕೊಮ್ಮೆ ತಾಯಿಯನ್ನು ನೋಡಲು ಬರುತ್ತಿದ್ದರು. ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ಆರೋಪಿಗಳು ವೃದ್ಧೆಗೆ ಆತ್ಮೀಯರಾಗಿದ್ದರು.

ಹೇಮಾವತಿ ಮನೆ ಬಳಿ ಇರುವ ಸಾಯಿಬಾಬಾ ದೇವಾಲಯಕ್ಕೆ ನಿತ್ಯವೂ ಹೋಗಿ ದರ್ಶನ ಪಡೆದು ಬರುತ್ತೀರಿ ಆದರೆ ಶಿರಡಿಗೆ ನಾವು ಹೊರಟಿದ್ದೇವೆ ನಮ್ಮ ಜೊತೆ ನೀವೂ ಕೂಡ ಬನ್ನಿ ಎಂದು ಕರೆದಿದ್ದರು. ಸ್ವಲ್ಪ ಸೂರ ಹೋಗುತ್ತಿದ್ದಂತೆ ಪಾನೀಯದಲ್ಲಿ ನಿದ್ರೆ ಮಾತ್ರೆ ಬೆರೆಸಿ ಕುಡಿಯಲು ನೀಡಿದ್ದಾರೆ. ನಿದ್ದೆಗೆ ಜಾರಿದ ಹೇಮಾವತಿಯರನ್ನು ಕಾರಿನ ಸೀಟ್ಬೆಲ್ಟ್ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾರೆ.
30 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ನಾಗಮಂಗಲದ ನಾಲೆಯಲ್ಲಿ ಶವ ಎಸೆದು ಪರಾರಿಯಾಗಿದ್ದರು.
ಇತ್ತ ಅವರ ಮಗಳು ಮನೆಗೆ ಬಂದು ನೋಡಿದಾಗ ತಾಯ ಇರಲಿಲ್ಲ. ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಹೇಮಾವತಿ ಶವ ನಾಲೆಯಲ್ಲಿ ದೊರೆತಿತ್ತು. ಸರ ದೋಚಲು ಈ ಕೃತ್ಯ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.












Click it and Unblock the Notifications