ಸರಗಳ್ಳನನ್ನು ಹಿಡಿದ ಪೇದೆಗೆ ಒಂದು ತಿಂಗಳ ರಜೆ ಜೊತೆ ಹಲವು ಇನಾಮು
ಬೆಂಗಳೂರು, ಜೂನ್ 18: ಚಾಕುವಿನಿಂದ ಇರಿದಿದ್ದರೂ ಪಟ್ಟು ಬಿಡದೆ ಕುಖ್ಯಾತ ಸರಗಳ್ಳನನ್ನು ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ ನಗರದ ಪೊಲೀಸ್ ಪೇದೆಗೆ ಒಂದು ತಿಂಗಳ ರಜೆಯ ಇನಾಮು ನೀಡಿದ್ದಾರೆ ನಗರ ಪೊಲೀಸ್ ಕಮಿಷನರ್ ಟಿ.ಸುನಿಲ್ ಕುಮಾರ್.
ನಿನ್ನೆ ರಾತ್ರಿ ಕುಖ್ಯಾತ ಸರಗಳ್ಳ ಅಚ್ಯುತ್ ಕುಮಾರ್ನನ್ನು ಒಬ್ಬರೇ ಚೇಸ್ ಮಾಡಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು ಹೆಡ್ಕಾನ್ಸ್ಟೆಬಲ್ ಚಂದ್ರಕುಮಾರ್. ಇವರ ಈ ಸಾಹಸಕ್ಕೆ ಪೊಲೀಸ್ ಕಮಿಷನರ್ ಅವರು ಒಂದು ತಿಂಗಳ ರಜೆ, ಒಂದು ಲಕ್ಷ ಬಹುಮಾನ, ದಕ್ಷಿಣ ಭಾರತ ಪ್ರವಾಸ ಹಾಗೂ ಒಂದು ಪಲ್ಸರ್ ಬೈಕ್ ಬಹುಮಾನವಾಗಿ ಕೊಟ್ಟಿದ್ದಾರೆ.
ನಿನ್ನೆ ರಾತ್ರಿ ಜ್ಞಾನಭಾರತಿ ಬಳಿ ಗಸ್ತು ತಿರುಗುತ್ತಿದ್ದ ಚಂದ್ರಕುಮಾರ್ಗೆ ಪಲ್ಸರ್ ಚಲಾಯಿಸುತ್ತಿದ್ದ ವ್ಯಕ್ತಿಯ ಮೇಲೆ ಅನುಮಾನ ಬಂದು ಆತನನ್ನು ಹಿಂಬಾಲಿಸಿ ಆತನ ಬೈಕ್ಗೆ ತನ್ನ ಬೈಕ್ನಿಂದ ಗುದ್ದಿದ್ದಾರೆ. ಕೆಳಗೆ ಬಿದ್ದಾತ ಅಚ್ಯುತ್ಕುಮಾರ್ನನ್ನು ಹಿಡಿಯಲು ಹೋದಾಗ ಆತ ಚಂದ್ರಕುಮಾರ್ಗೆ ಚೂರಿ ಹಾಕಿದ್ದಾನೆ.

ಠಾಣೆಗೆ ಮಾಹಿತಿ
ಮುಖ್ಯ ಪೇದೆ ಚಂದ್ರಕುಮಾರ್ ಇತರೆ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸಹೋದ್ಯೋಗಿಗಳು ಬರುವವರೆಗೆ ಗಾಯಗೊಂಡಿದ್ದರೂ ಸಹಿತ ಆತನನ್ನು ಹಿಂಬಾಲಿಸಿಕೊಂಡು ಹೋಗಿ ಕಳ್ಳ ಸೆರೆಯಾಗುವಂತೆ ಮಾಡಿದ್ದಾರೆ.

ಮತ್ತೆ ತಪ್ಪಿಸಿಕೊಂಡ ಸರಗಳ್ಳ
ಬಂಧಿಸಿದ ನಂತರ ಮತ್ತೆ ರಾತ್ರಿ 2 ಗಂಟೆ ಸುಮಾರಿಗೆ ಮೂತ್ರ ವಿಸರ್ಜನೆಗೆ ತೆರಳುತ್ತೇನೆಂದು ಹೇಳಿ ಕಳ್ಳ ತಪ್ಪಿಸಿಕೊಂಡಿದ್ದಾನೆ. ನಂತರ ಪೊಲೀಸರು ವಿಶೇಷ ದಳ ರಚಿಸಿಕೊಂಡು ನಾಕಾ ಬಂಧಿ ಹಾಕಿ ಬೆಳಗಿನ ಜಾವ ಬನಶಂಕರಿ ಬಳಿ ಕಳ್ಳ ಅಚ್ಯುತ್ ಕುಮಾರ್ನನ್ನು ಪತ್ತೆ ಹಚ್ಚಿದ್ದಾರೆ.

ಬಲಗಾಲಿಗೆ ಗುಂಡು ಹೊಡೆದು ಬಂಧನ
ಆಗಲೂ ಪೊಲೀಸರ ಮೇಲೆ ಕಲ್ಲುಗಳನ್ನು ಎಸೆದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಅಚ್ಯುತ್ಕುಮಾರ್ನ ಕಾಲಿಗೆ ಪಿಎಸ್ಐ ಪಿಸ್ತೂಲಿನಿಂದ ಶೂಟ್ ಮಾಡಿ ನಂತರ ಬಂಧಿಸಿದ್ದಾರೆ. ಅಚ್ಯುತ್ಕುಮಾರ್ನಿಂದ ಚೂರಿ ಇರಿತಕ್ಕೆ ಒಳಗಾಗಿದ್ದ ಹೆಡ್ ಕಾನ್ಸ್ಟೇಬಲ್ ಚಂದ್ರಕುಮಾರ್ ಪೋರ್ಟೀಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
|
70ಕ್ಕೂ ಹೆಚ್ಚು ಸರಗಳ್ಳತನ ಮಾಡಿದ್ದ
ಸರಗಳ್ಳ ಅಚ್ಯುತ್ಕುಮಾರ್ ಒಂಟಿಯಾಗಿ ಸರಗಳ್ಳತನ ಮಾಡುತ್ತಿದ್ದ ಈತ ಈ ವರೆಗೆ 70ಕ್ಕೂ ಹೆಚ್ಚು ಸರಗಳ್ಳತನಗಳನ್ನು ಮಾಡಿದ್ದಾನೆ. ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಗುರಿ ಮಾಡಿಕೊಳ್ಳುತ್ತಿದ್ದ ಈತ ಬೈಕಿನಲ್ಲಿ ಬಂದು ಸರ ಕಿತ್ತು ಪರಾರಿಯಾಗುತ್ತಿದ್ದ. ಈತನ ಮೇಲೆ 50 ಕ್ಕೂ ಹೆಚ್ಚು ಪ್ರಕರಣಗಳಿದ್ದವು.












Click it and Unblock the Notifications