ನಂದಿನಿ ಆಳ್ವ 'ತಮಿಳು' ಪ್ರೇಮ ಕನ್ನಡಿಗರ ಕಿಡಿ
ಬೆಂಗಳೂರು, ಏ.10: ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಜನತಾದಳ(ಸೆಕ್ಯುಲರ್) ಅಭ್ಯರ್ಥಿ ನಂದಿನಿ ಆಳ್ವಾ ಅವರು ಚುನಾವಣಾ ಪ್ರಚಾರದ ಭರಾಟೆಯಲ್ಲಿ ತಮಿಳು ಪ್ರೇಮ ಮೆರೆದು ಕನ್ನಡಿಗರ ಕೋಪಕ್ಕೆ ತುತ್ತಾಗಿದ್ದಾರೆ.
ಜನತಾ ಪರಿವಾರದ ಉತ್ತಮ ಸಂಘಟಕರಾಗಿದ್ದ ದಿವಂಗತ ಜೀವರಾಜ ಆಳ್ವ ಅವರ ಪತ್ನಿ ನಂದಿನಿ ಆಳ್ವ ಅವರಿಗೆ ಜೆಡಿಎಸ್ ಕೊನೆ ಗಳಿಗೆಯಲ್ಲಿ ಬಿ ಫಾರಂ ನೀಡಿ ಕಣಕ್ಕಿಳಿಸಿತ್ತು. ತಮ್ಮ ಅಳಿಯ ಬಾಲಿವುಡ್ ನಟ ವಿವೇಕ್ ಒಬೆರಾಯ್ ರನ್ನು ಕರೆಸಿಕೊಂಡು ಬಿರುಸಿನ ಪ್ರಚಾರ ನಡೆಸಿದ್ದರು. ಆದರೆ, ಬೆಂಗಳೂರಿನಲ್ಲಿ ಎಐಎಡಿಎಂಕೆ ಸೇರಿದಂತೆ ತಮಿಳು ಪಕ್ಷದ ಅಭ್ಯರ್ಥಿಗಳೇ ಕನ್ನಡದಲ್ಲಿ ಮಾತನಾಡಲು ಯತ್ನಿಸುವಾಗ ನಂದಿನಿ ಆಳ್ವ ಅವರು ತಮಿಳರ ಓಲೈಕೆಗೆ ತಮಿಳಿನಲ್ಲಿ ಕರಪತ್ರ ಹಂಚಿದ್ದು ಎಷ್ಟು ಸರಿ ಎಂದು ಕನ್ನಡಿಗರು ಪ್ರಶ್ನಿಸಿದ್ದಾರೆ. ಫೇಸ್ ಬುಕ್ ಪುಟದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ.

ಇದೊಂದು ಪ್ರಾದೇಶಿಕ ಪಕ್ಷ. ಕನ್ನಡ-ಕನ್ನಡಿಗ-ಕರ್ನಾಟಕ ಕೇಂದ್ರಿತ ಪ್ರಾದೇಶಿಕ ಪಕ್ಷ ಅಂತ ಇವರು ಹೇಳೋದು. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ರೀತಿಯಲ್ಲೇ ಭಾಷಾ ಅಲ್ಪಸಂಖ್ಯಾತರ ಓಲೈಕೆಯಲ್ಲಿ ಇವರೂ ಮುಂದಿದ್ದಾರೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಬ್ಯರ್ಥಿ ನಂದಿನಿ ಆಳ್ವಾ ಅವರ ಹೆಸರಿನಲ್ಲಿ ಹರಿದಾಡುತ್ತಿರುವ ಭಿತ್ತಿಪತ್ರ ಇದು.ಈ ಪಕ್ಷವನ್ನು ಕನ್ನಡಿಗರು ಹೇಗೆ ಕನ್ನಡಿಗರ ಪರ ಎಂದುಕೊಳ್ಳಲು ಸಾಧ್ಯ?
ಇವತ್ತು ಬೆಂಗಳೂರು ಕೇಂದ್ರದಿಂದ ಜಾತ್ಯಾತೀತ ಜನತಾದಳ ಅಭ್ಯರ್ಥಿ ಆಗಿರುವ ನಂದಿನಿ ಆಳ್ವ ಅವರೇ ಅಲ್ವಾ "ಬೆಂಗಳೂರು ಹಬ್ಬ" ದ ಮುಖ್ಯ ರುವಾರಿ? ಇಪ್ಪತ್ತು-ಮೂವತ್ತು ಕಾರ್ಯಕ್ರಮಗಳಲ್ಲಿ ಬೆರಳೆಣಿಕೆಯಷ್ಟು ಕನ್ನಡದ ಕಾರ್ಯಕ್ರಮ ಆಯೋಜಿಸೋದು ಈಕೆಯ ಮುಂದಾಳುತನದ "ಬೆಂಗಳೂರು ಹಬ್ಬ"ದ ಹಿರಿಮೆ. ಇಂತವರು ಕನ್ನಡ ನಾಡಿನ ಪ್ರಾದೇಶಿಕ ಪಕ್ಷದ ಅಭ್ಯರ್ಥಿ? ಒಂದಂತೂ ಸತ್ಯ. ಜೆಡಿಎಸ್ ಅಭ್ಯರ್ಥಿಗಳ ಆಯ್ಕೆಯಲ್ಲಿ ಕನ್ನಡತನವನ್ನು ಗಾಳಿಗೆ ತೂರಿದೆ. ಕನ್ನಡ ಪರವಾಗದವರೂ ಕನ್ನಡಿಗರ ಪರವೂ ಅಲ್ಲ,ಕರ್ನಾಟಕದ ಪರವೂ ಅಲ್ಲ.- ಅಮರನಾಥ್ ಶಿವಶಂಕರ್, ಬೆಂಗಳೂರು
ಈ ಹಿಂದೆ ಮಂಡ್ಯ ಹಾಲಿ ಸಂಸದೆ ರಮ್ಯಾ ಅವರು ರಾಜಕೀಯಕ್ಕೆ ಕಾಲಿಟ್ಟಾಗಲೂ ಇದೇ ರೀತಿ ಸಮಸ್ಯೆ ಎದುರಿಸಿದ್ದರು. ಅಸೆಂಬ್ಲಿ ಚುನಾವಣೆ ಪ್ರಚಾರದ ವೇಳೆ ತಮಿಳಿನಲ್ಲಿ ಮಾತನಾಡಿದ್ದ ರಮ್ಯಾ ಅವರು ಸುದ್ದಿಗೋಷ್ಠಿಯಲ್ಲಿ ಇಂಗ್ಲೀಷ್ ನಲ್ಲಿ ಭಾಷಣ ಮಾಡಿದ್ದು ಕನ್ನಡಿಗರನ್ನು ಕೆರಳಿಸಿತ್ತು[ಈ ಬಗ್ಗೆ ವಿವರ ಇಲ್ಲಿ ಓದಿ]












Click it and Unblock the Notifications