ಯುವ ಜನತೆಗೆ ಕೇಂದ್ರ ಸರ್ಕಾರದ ದ್ರೋಹ ಮಾಡಿದೆ; ಸಿದ್ದರಾಮಯ್ಯ ಗುಡುಗು
ಬೆಂಗಳೂರು, ಜುಲೈ 22: ಬೆಂಗಳೂರಿನ ಅರಮನೆ ಮೈದಾನದಲ್ಲಿ ಯುವ ಕಾಂಗ್ರೆಸ್ ಆಯೋಜಿಸಿದ್ದ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರ ಯುವಜನತೆಗೆ ಎಸಗುತ್ತಿರೋ ದ್ರೋಹದ ಬಗ್ಗೆ ಎಳೆಎಳೆಯಾಗಿ ಮಾತನಾಡಿದರು.
"ದೇಶದ ಯುವಕರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಯುವ ಜನರು ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಬದಲಾವಣೆ ತರುವ ಶಕ್ತಿ ಹೊಂದಿದ್ದಾರೆ. ದೇಶದ ಜನಸಂಖ್ಯೆಯಲ್ಲಿ 35 ವಯಸಿನ ಒಳಗಿನ ಯುವಜನರ ಪ್ರಮಾಣ ಶೇ.65 ಇದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ 107 ಕೋಟಿ ಜನರು ದುಡಿಯುವ ಶಕ್ತಿ ಹೊಂದಿದ್ದಾರೆ, ಆದರೆ ಇವರಲ್ಲಿ ಉದ್ಯೋಗ ಹೊಂದಿರುವ ಜನರ ಪ್ರಮಾಣ ಕೇವಲ 37-38% ಇದೆ. ದೇಶದ ಯುವಕರ ಸರಾಸರಿ ವಯಸ್ಸು 28.3 ವರ್ಷ. ಜಗತ್ತಿನ ಬೇರೆ ಯಾವ ದೇಶದಲ್ಲಿ ಇಷ್ಟು ದೊಡ್ಡ ಪ್ರಮಾಣದ ಯುವಶಕ್ತಿ ಇಲ್ಲ. ಇದನ್ನು ಬಳಸಿಕೊಂಡು ದೇಶ ಕಟ್ಟುವ ಕೆಲಸ ಆಗಬೇಕಿದೆ" ಎಂದು ಸಿದ್ದರಾಮಯ್ಯ ಹೇಳಿದರು.
ಸೂರತ್ ಮಾದರಿಯ ನೈಸರ್ಗಿಕ ಕೃಷಿ ಇಡೀ ದೇಶಕ್ಕೆ ಮಾದರಿ: ಪಿಎಂ ಮೋದಿ
"ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಯುವಕರ ಶಕ್ತಿಯನ್ನು ಸದುಪಯೋಗ ಮಾಡಿಕೊಂಡು ದೇಶ ಕಟ್ಟುವ ಕೆಲಸ ಆಗಿಲ್ಲ. ದೇಶದ ಯುವಶಕ್ತಿ ದುರುಪಯೋಗ ಆಗುತ್ತಿದೆ. ನಿರುದ್ಯೋಗ ತಾಂಡವವಾಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗದ ಪ್ರಮಾಣ ಶೇ 7 ಮತ್ತು ನಗರ ಪ್ರದೇಶದಲ್ಲಿ ಶೇ9 ಆಗಿದೆ. ಒಟ್ಟು ನಿರುದ್ಯೋಗ ಶೇ 8 ಇದೆ. ಇಷ್ಟು ಪ್ರಮಾಣದ ನಿರುದ್ಯೋಗ ಹಿಂದೆಂದೂ ಇರಲಿಲ್ಲ, ಹಾಗಾಗಿ ನಾವೆಲ್ಲರೂ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತುವ ಕೆಲಸ ಮಾಡಬೇಕು" ಎಂದರು.
"ಜಗತ್ತಿನ ಒಟ್ಟು 193 ದೇಶಗಳಲ್ಲಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ದೇಶಗಳ ಪೈಕಿ ಭಾರತ 164 ಸ್ಥಾನದಲ್ಲಿ ಇದೆ ಎಂದು ಮೋದಿ ಹೇಳಿದ್ದಾರೆ. ಇದಕ್ಕೆ ಬಿಜೆಪಿ ಯ ಸುಬ್ರಮಣ್ಯಸ್ವಾಮಿ ಟ್ವೀಟ್ ಮಾಡಿ, 2011 ರಲ್ಲಿ ಆರ್ಥಿಕ ಅಭಿವೃದ್ಧಿಯಲ್ಲಿ ಜಾಗತಿಕವಾಗಿ ನಮ್ಮ ದೇಶ 3ನೇ ಸ್ಥಾನದಲ್ಲಿತ್ತು, ಮೋದಿ ಪ್ರಧಾನಿಯಾದ ಮೇಲೆ ಅದು 164ನೇ ಸ್ಥಾನಕ್ಕೆ ಕುಸಿದುಹೋಗಿದೆ ಎಂದಿದ್ದಾರೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಮೋದಿ ಅವರು ಹೇಳಿದ್ದರು. ಪ್ರಧಾನಿಯಾಗಿ 8 ವರ್ಷ ಆಗಿದೆ, ಈಗ 16 ಕೋಟಿ ಉದ್ಯೋಗ ಸೃಷ್ಟಿ ಆಗಬೇಕಿತ್ತು" ಎಂದು ಹೇಳಿದರು.
"ನೋಟು ರದ್ದತಿ, ಕೊರೊನಾ, ಜಿಎಸ್ಟಿ ಜಾರಿಗೆ ಮೊದಲು ದೇಶದ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳಲ್ಲಿ 10 ಕೋಟಿ ಉದ್ಯೋಗಗಳು ಇದ್ದವು, ಈಗದು 2.5 ಕೋಟಿಗೆ ಇಳಿದಿದೆ. ಇದಕ್ಕೆ ಹೊಣೆ ಯಾರು? ಯುವಕರಿಗೆ ದೊಡ್ಡ ಅನ್ಯಾಯ ಮಾಡಿದ್ದರೆ ಅದು ಮೋದಿ ಮತ್ತು ಕೇಂದ್ರದ ಬಿಜೆಪಿ ಸರ್ಕಾರ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ವಿದ್ಯಾವಂತ ಯುವಕರು ಪಕೋಡ ಮಾರೋಕೆ ಹೇಳ್ತಾರೆ
ಅಗ್ನಿಪಥ್ ಯೋಜನೆ ಜಾರಿಗೆ ತಂದು ಯುವಕರಿಗೆ ಕೇವಲ 4 ವರ್ಷ ಸೈನ್ಯದಲ್ಲಿ ಉದ್ಯೋಗ ನೀಡಲು ಹೊರಟಿದ್ದಾರೆ, ಈ ಅವಧಿ ಮುಗಿದ ಮೇಲೆ ಸೈನ್ಯದಲ್ಲಿ ಇದ್ದವರು ಏನು ಮಾಡಬೇಕು? 17 ವರ್ಷಕ್ಕೆ ಕೆಲಸಕ್ಕೆ ಸೇರಿದವರು 21 ವರ್ಷಕ್ಕೆ ನಿವೃತ್ತಿಯಾಗುತ್ತಾರೆ, ಆಮೇಲೆ ಆತ ಬದುಕಿರುವವರೆಗೆ ಏನು ಕೆಲಸ ಮಾಡಬೇಕು. ಶಿಕ್ಷಣವೂ ಪೂರೈಸಿರುವುದಿಲ್ಲ, ಇತ್ತ ಉದ್ಯೋಗವೂ ಸಿಗುವುದಿಲ್ಲ. ಕೊನೆಗೆ ಯಾವ ದಾರಿ ಸಿಗದೆ ಯುವಕರು ತಪ್ಪು ದಾರಿ ಹಿಡಿಯುತ್ತಾರೆ.ಮೋದಿ ಮೈಸೂರು, ಬೆಂಗಳೂರಿಗೆ ಬಂದಾಗ ನಿರುದ್ಯೋಗ, ಬೆಲೆ ಏರಿಕೆ, ರೈತರ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರ?. ಇದನ್ನು ಯುವಜನರು ಗಂಭೀರವಾಗಿ ಪರಿಗಣಿಸಬೇಕು. ವಿದ್ಯಾವಂತ ಯುವಕರು ಕೆಲಸ ಕೇಳಿದರೆ ಪಕೋಡ ಮಾರೋಕೆ ಹೋಗಿ ಎನ್ನುತ್ತಾರೆ, ಇದಕ್ಕಿಂತ ನೋವಿನ ಸಂಗತಿ ಬೇರೆ ಇಲ್ಲ. ಒಮ್ಮೆ ಬಾದಾಮಿಯ ರಥೋತ್ಸವ ಕಾರ್ಯಕ್ರಮಕ್ಕೆ ಹೋಗಿದ್ದೆ ಆಗ ಕಾಂಗ್ರೆಸ್ನ ಹುಡುಗರು ನನ್ನ ಪರ ಘೋಷಣೆ ಕೂಗಿದರು, ಆ ನಂತರ ಬಿಜೆಪಿಯವರು ಒಟ್ಟು ಸೇರಿ ಮೋದಿ, ಮೋದಿ ಎಂದು ಕೂಗಿದರು. ಅದಕ್ಕೆ ನಾನು ಮೋದಿ ನಿಮ್ಮ ಮನೆ ಹಾಳು ಮಾಡಿ, ನಿಮ್ಮ ಭವಿಷ್ಯಕ್ಕೆ ಕತ್ತರಿ ಹಾಕಿದ್ದಾರೆ. ಯಾಕಪ್ಪ ಅವರ ಹೆಸರು ಕೂಗ್ತೀರ ಎಂದೆ. ಈಗ ಈ ರೀತಿ ಕೂಗುವವರ ಸಂಖ್ಯೆ ಕಡಿಮೆಯಾಗಿದೆ.
ಮಾನವ ಸಂಪನ್ಮೂಲದ ಸದ್ಭಳಕೆಯಾಗುತ್ತಿಲ್ಲ
1988ರಲ್ಲಿ ಚೀನಾ 100 ಕೋಟಿ ಜನಸಂಖ್ಯೆ ದಾಟಿತು, ನಾವು 100 ಕೋಟಿ ಆಗಿದ್ದು 2000 ದಲ್ಲಿ. 1988ರಲ್ಲಿ ಚೀನಾದ ತಲಾ ಆದಾಯ 328 ಡಾಲರ್. ಆಗ ಭಾರತದ ತಲಾ ಆದಾಯ 355 ಡಾಲರ್ ಇತ್ತು. ಇಂದು ಚೀನಾದ ತಲಾ ಆದಾಯ 12,000 ಡಾಲರ್ ಆಗಿದೆ, ಭಾರತದ ತಲಾ ಆದಾಯ ಇಂದು 1877 ಡಾಲರ್ ಇದೆ. ಜನಸಂಖ್ಯೆ ನಮಗಿಂತ ಜಾಸ್ತಿ ಇರುವ ದೇಶದ ತಲಾ ಆದಾಯ ಹೆಚ್ಚಿದೆ. ಜನಸಂಖ್ಯೆ ಏರಿಕೆ ಆದಂತೆ ಚೀನಾದವರು ಅದನ್ನು ಬಳಸಿಕೊಂಡು ಅಭಿವೃದ್ಧಿ ಸಾಧಿಸಿದ್ದಾರೆ, ನಮ್ಮಲ್ಲಿ ಅಗಾಧವಾದ ಮಾನವ ಸಂಪತ್ತು ಇದ್ದರೂ ಕೂಡ ಅಭಿವೃದ್ಧಿ ಸಾಧ್ಯವಾಗಿಲ್ಲ. ಇದರಿಂದ ದೇಶದ ಆರ್ಥಿಕತೆ ಅಧೋಗತಿಗೆ ಇಳಿದಿದೆ.
1ಕೋಟಿ 26 ಲಕ್ಷ ಜನ ಅರ್ಜಿ ಹಾಕಿದ್ದರು
2019ರಲ್ಲಿ ರೈಲ್ವೇ ಇಲಾಖೆಯ 'ಸಿ' ಮತ್ತು 'ಡಿ' ದರ್ಜೆಯ 35,000 ಹುದ್ದೆಗಳಿಗೆ ಅರ್ಜಿ ಕರೆದಿದ್ದರು. ಇದಕ್ಕೆ ಅರ್ಜಿ ಹಾಕಿದವರು 1 ಕೋಟಿ 26 ಲಕ್ಷ ಜನ. ಎಸ್ಎಸ್ಎಲ್ಸಿ, ಪಿಯುಸಿ, ಡಿಗ್ರಿ, ಮಾಸ್ಟರ್ ಡಿಗ್ರಿ, ಪಿಹೆಚ್ಡಿ ಆದವರು ಹೀಗೆ ಎಲ್ಲರೂ ಅರ್ಜಿ ಹಾಕಿದ್ದರು. ಒಂದು ಹುದ್ದೆಗೆ ಸರಾಸರಿ 350 ಜನ ಅರ್ಜಿ ಹಾಕಿದ್ದರು. ಇದರಿಂದ ನಿರುದ್ಯೋಗ ಸಮಸ್ಯೆ ಯಾವ ಪ್ರಮಾಣದಲ್ಲಿದೆ ಎಂಬುದು ಅರ್ಥವಾಗುತ್ತದೆ.
ಶಾಸಕರ ಖರೀದಿಗೆ ಕಪ್ಪು ಹಣ ಬಳಕೆ
ಸ್ವಾತಂತ್ರ್ಯ ಬಂದ ನಂತರದಿಂದ ಮನಮೋಹನ್ ಸಿಂಗ್ ಪ್ರಧಾನಿ ಸ್ಥಾನದಿಂದ ಇಳಿಯುವವರೆಗೆ ಇದ್ದ ದೇಶದ ಒಟ್ಟು ಸಾಲ 53 ಲಕ್ಷದ 11 ಸಾವಿರ ಕೋಟಿ. ಇದು ಈ ವರ್ಷದ ಮಾರ್ಚ್ ಕೊನೆಗೆ 155 ಲಕ್ಷ ಕೋಟಿ ಆಗಿದೆ. ಕೇವಲ ಎಂಟು ವರ್ಷಗಳಲ್ಲಿ ಮೋದಿ ಸರ್ಕಾರ ಮಾಡಿರುವ ಒಟ್ಟು ಸಾಲ 102 ಲಕ್ಷ ಕೋಟಿ. ಇದರಿಂದ ದೇಶ ಆರ್ಥಿಕವಾಗಿ ದಿವಾಳಿಯಾಗಲ್ವಾ? ಇದನ್ನು ಸಹಿಸಿಕೊಂಡು ಇರ್ತೀರಾ? ನರೇಂದ್ರ ಮೋದಿ ನೋಟು ರದ್ದತಿ ಘೋಷಿಸಿ, ರಾತ್ರಿ 12 ಗಂಟೆಗೆ ಮಾಡಿದ ಭಾಷಣದಲ್ಲಿ ಇನ್ನು ಮುಂದೆ ಕಪ್ಪು ಹಣ ಇರಲ್ಲ ಎಂದಿದ್ದರು. ಈಗ ಗೋವಾದಲ್ಲಿ 50 ಕೋಟಿ ಕೊಟ್ಟು ಶಾಸಕರ ಖರೀದಿ ಮಾಡುತ್ತಿದ್ದಾರಲ್ಲ ಅದು ಯಾರಪ್ಪನ ಮನೆ ಹಣ? ಇಲ್ಲಿ ಯಡಿಯೂರಪ್ಪ 30-40 ಕೋಟಿ ಕೊಟ್ಟು ಶಾಸಕರನ್ನು ಕೊಂಡುಕೊಂಡಿದ್ದು ಯಾವ ಹಣದಲ್ಲಿ? ಮಹಾರಾಷ್ಟ್ರದಲ್ಲಿ ಶಾಸಕರಿಗೆ ತಲಾ 50 ಕೋಟಿ ಕೊಟ್ಟಿದ್ದು ಯಾರಪ್ಪನ ಮನೆ ದುಡ್ಡು? ಕಪ್ಪು ಹಣ ಇರಲ್ಲ ಎಂದಿದ್ದರು, ಇದಕ್ಕೇನಂತಾರೆ? ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.