ಬೆಂಗಳೂರು; ಅಂಗಡಿ ಮಾಲೀಕನಿಗೆ ಕನ್ನ ಹಾಕಿದ್ದ ಬೆಳ್ಳಿ ಕಳ್ಳರ ಬೇಟೆ !
ಬೆಂಗಳೂರು, ಆ. 09: ವಿವಿಧ ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಿರುವ ಬೆಂಗಳುರು ಕೇಂದ್ರ ವಿಭಾಗದ ಪೊಲೀಸರು, ಮೂವತ್ತು ಪ್ರತ್ಯೇಕ ಕೇಸುಗಳಿಗೆ ಸಂಬಂಧಸಿದಂತೆ 24 ಆರೋಪಿಗಳನ್ನು ಬಂಧಿಸಿ 1.32 ಕೋಟಿ ರೂ. ಮೊತ್ತದ ಚಿನ್ನಾಭರಣ ಮತ್ತು ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಶೇಷಾದ್ರಿಪುರ, ವೈಯ್ಯಾಲಿಕಾವಲ್, ಎಸ್. ಜೆ. ಪಾರ್ಕ್, ಕಬ್ಬನ್ ಪಾರ್ಕ್, ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಬರಿ ಹಾಗೂ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಒಟ್ಟು 24 ಆರೋಪಿಗಳನ್ನು ಬಂಧಿಸಲಾಗಿದೆ.
ಬೆಂಗಳೂರು; ಮಗುವಿನ ಜತೆ ನೇಣು ಬಿಗಿದುಕೊಂಡು ದಂತ ವೈದ್ಯೆ ಆತ್ಮಹತ್ಯೆ
ಬಂಧಿತರಿಂದ 87 ಮೊಬೈಲ್ ಪೋನ್, 27 ದ್ವಿಚಕ್ರ ವಾಹನ, 340 ಗ್ರಾಂ ಚಿನ್ನ, 58 ಕೆಜಿ ಬೆಳ್ಳಿ, 7 ಕಾರು, 6.39 ಲಕ್ಷ ನಗದು ಹಾಗೂ ಆರೋಪಿಗಳ ಬ್ಯಾಂಕ್ ನಲ್ಲಿದ್ದ 7.50 ಲಕ್ಷ ನಗದು ಸೇರಿ ಒಟ್ಟು 1,32 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳುವಲ್ಲಿ ಕೇಂದ್ರ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಪ್ತಿಯಾದ 87 ಮೊಬೈಲ್ಗಳ ಪೈಕಿ 10 ಮೊಬೈಲ್ಗಳು ರಾಬರಿ ಪ್ರಕರಣಕ್ಕೆ ಸೇರಿದೆ. ಇನ್ನುಳಿದ ಮೊಬೈಲ್ಗಳ ಮಾಲೀಕರನ್ನು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ. ಕೇಂದ್ರ ವಿಭಾಗದ ಪೊಲೀಸರ ಕಾರ್ಯಚರಣೆಯ ವಿವರಗಳನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಮೊಬೈಲ್ ರಾಬರಿಕೋರರ ಸೆರೆ; ಕದ್ದ ಬೈಕಿನಲ್ಲಿ ಒಬ್ಬಂಟಿಯಾಗಿ ನಡೆದುಕೊಂಡು ಹೋಗುವವರನ್ನು ಟಾರ್ಗೆಟ್ ಮಾಡಿಕೊಂಡು ವಿವಿಧ ಠಾಣಾ ವ್ಯಾಪ್ತಿಯಲ್ಲಿ 74 ಮೊಬೈಲ್ ಕಳ್ಳತನ ಮಾಡಿದ್ದ ಐವರು ಆರೋಪಿಗಳನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ಉಸ್ಮಾನ್, ಮಹಮ್ಮದ್ ಹುಸೇನ್, ತಬ್ರೇಜ್ ಖಾನ್ ಹಾಗೂ ಜುನೈದ್ ಮತ್ತು ಇರ್ಫಾನ್ ಪಾಷ ಬಂಧಿತ ಅರೋಪಿಗಳು. ಕಬ್ಬನ್ ಪಾರ್ಕ್, ಅಶೋಕನಗರ, ಮಾಗಡಿ ರೋಡ್, ಸುದ್ದಗುಂಟೆ ಪಾಳ್ಯ, ಹೈಗ್ರೌಂಡ್ಸ್ ಹಾಗೂ ಶ್ರೀರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೇರಿ ನಗರದ ಹಲವು ಠಾಣಾ ವ್ಯಾಪ್ತಿಯಲ್ಲಿ ರಾಬರಿ ಮಾಡುತ್ತಿದ್ದರು.
ಪ್ರತಿ ಬಾರಿ ಕಳ್ಳತನ ಮಾಡುವಾಗ ಇಬ್ಬರು ಹೊಸ ಹುಡುಗರನ್ನು ಸೇರಿಸಿಕೊಳ್ಳುತ್ತಿದ್ದರು. ಒಂದು ಮೊಬೈಲ್ ಕಳ್ಳತನ ಮಾಡಿದರೆ 500 ರೂಪಾಯಿ ಕಮೀಷನ್ ನೀಡುತ್ತಿದ್ದರು. ಕದ್ದ ಮೊಬೈಲ್ಗಳನ್ನು ಜೆಜೆನಗರಕ್ಕೆ ಸಾಗಿಸಿ ಅಲ್ಲಿಂದ ಹೊರ ರಾಜ್ಯಗಳಿಗೆ ಬಿಡಿ-ಬಿಡಿಯಾಗಿ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಾಹನ ಕಳ್ಳರ ಸೆರೆ; ಶೇಷಾದ್ರಿಪುರಂ ಪೊಲೀಸರು ಬೈಕ್ ಕಳ್ಳತನ ಜಾಡು ಹಿಡಿದು ತನಿಖೆ ನಡೆಸಿ ರಾಮನಗರ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿ 14 ದ್ವಿಚಕ್ರ ವಾಹನ, ಹತ್ತು ಮೊಬೈಲ್ ಹಾಗೂ ಒಂದು ಲ್ಯಾಪ್ಟಾಪ್ ವಶಪಡಿಸಿಕೊಂಡಿದ್ದಾರೆ. 6.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಪತ್ತೆ ಮಾಡಲಾಗಿದೆ. ದ್ವಿಚಕ್ರ ವಾಹನ ಸೈಡ್ ಲಾಕ್ ಮುರಿದು ಕಳುವು ಮಾಡುತ್ತಿದ್ದ ಸಂಗತಿ ತನಿಖೆ ವೇಳೆ ಬೆಳಕಿಗೆ ಬಂದಿದೆ.
ದ್ವಿಚಕ್ರ ವಾಹನ ಕಳುವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ವಯ್ಯಾಲಿಕಾವಲ್ ಪೊಲೀಸರು ಬಂಧಿಸಿದ್ದು, ಆತನಿಂದ ಮೂರು ಲಕ್ಷ ರೂ. ಮೌಲ್ಯದ ಐದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿನ್ನಾಭರಣ ದೋಚಿದ್ದವರ ಸೆರೆ : ಅನ್ನ ಹಾಕಿದ ದಣಿಯ ಅಂಗಡಿಯಲ್ಲಿ ಕೆಜಿಗಟ್ಟಲೇ ಬೆಳ್ಳಿ ದೋಚಿ ಪರಾರಿಯಾಗಿದ್ದ ಮೂವರು ಅರೋಪಿಗಳನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 14 ಕೆಜಿ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರಲ್ಲಿ ಓರ್ವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ತನ್ನ ಇಬ್ಬರು ಸಹಚರರ ಜತೆ ಸೇರಿ ಯಾರೂ ಇಲ್ಲದ ವೇಳೆ ಅಂಗಡಿ ಬಾಗಿಲು ಮುರಿದು ಬೆಳ್ಳಿ ದೋಚಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ನಾಗರಾಜ, ಮಹದೇವಸ್ವಾಮಿ ಮತ್ತು ರವಿ ಬಂಧಿತ ಆರೋಪಿಗಳು.