ರಮೇಶ್ ಜಾರಕಿಹೊಳಿ ದೃಶ್ಯವಲ್ಲ, ಮಾತೂ ಸಹ ಅಶ್ಲೀಲ: ಕಾಂಗ್ರೆಸ್
ಬೆಂಗಳೂರು, ಮಾರ್ಚ್ 27: ಸಿಡಿ ಪ್ರಕರಣದ ಮಹಾನಾಯಕನ ಬಗ್ಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಛಿ ಬೆನ್ನಲ್ಲೇ ಕಾಂಗ್ರೆಸ್ ಕೆಂಡಾಮಂಡಲವಾಗಿದೆ. ರಮೇಶ್ ಜಾರಕಿಹೊಳಿಯ ದೃಶ್ಯವಷ್ಟೇ ಅಶ್ಲೀಲವಲ್ಲ, ಮಾತೂ ಅಶ್ಲೀಲ ಎಂದು ಕಾಂಗ್ರೆಸ್ ಟೀಕಿಸಿದೆ.
"ಬಿಜೆಪಿ ಸಂಸ್ಕೃತಿ ಬಿಂಬಿಸುವ "ದೊಡ್ಡ ದೊಡ್ಡ" ಮಾತುಗಳನ್ನಾಡಿದ್ದಾರೆ, ಇದು ಹೊಲಸುತನದ ಪರಮಾವಧಿ. ಅಂತಹ ಪದಗಳು ಬಿಜೆಪಿಗರ ಬಾಯಲ್ಲಿ ಮಾತ್ರ ಬರಲು ಸಾಧ್ಯ. ಬಸವರಾಜ್ ಬೊಮ್ಮಾಯಿ ಅವರೇ, ಕೇಸ್ ದಾಖಲಾಗಿದ್ದರೂ ಬಂಧಿಸದೇ ಇಂತ ಕೀಳು ನಾಟಕ ಆಡಲು ಬಿಟ್ಟಿದ್ದೀರಾ?" ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

"ಯಾರೋ ಹೆಸರು ಹೇಳಿದ್ದಕ್ಕೆ ರಾಜೀನಾಮೆ ಕೇಳುವ ಕರ್ನಾಟಕದ ಬಿಜೆಪಿಯವರೇ, ಚಾಂದಿನಿ ನಾಯ್ಕ್ರಿಗೆ ಹಲ್ಲೆ ನಡೆಸಿದ ಶಾಸಕ ಸಿದ್ದು ಸವದಿಯನ್ನು ಉಚ್ಛಾಟಿಸಿ, ತಡೆಯಾಜ್ಞೆ ತಂದಿರುವ 6 ಸಚಿವರ ರಾಜೀನಾಮೆ ಪಡೆಯಿರಿ. ಸದನ ಸದಸ್ಯರ ಚಾರಿತ್ರ್ಯ ಪ್ರಶ್ನಿಸಿದ ಸುಧಾಕರ್ ರಾಜೀನಾಮೆ ಪಡೆಯಿರಿ. ಅತ್ಯಾಚಾರಿ ಮಾಜಿ ಸಚಿವನ ಪಕ್ಷದಿಂದ ಉಚ್ಛಾಟಿಸಿ. ನೈತಿಕತೆ ತೋರಿ" ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಡಿಕೆ ಶಿವಕುಮಾರ್ ರಾಜೀನಾಮೆಗೆ ಆಗ್ರಹಿಸಿದ್ದ ಬಿಜೆಪಿ:
"ಎಲ್ಲವನ್ನೂ ತಾನೇ ಮುಂದೆ ನಿಂತು ಮಾಡಿಸುತ್ತಾರೆ, ಸದನದಲ್ಲಿ ಬೊಬ್ಬಿರಿಯುತ್ತಾರೆ, ಸುಭಗನಂತೆ ನಟಿಸುತ್ತಾರೆ. ಮಹಾನಾಯಕ ಡಿ ಕೆ ಶಿವಕುಮಾರ್ ಅವರೇ, ನಿಮಗೆ ಸ್ವಲ್ಪವಾದರೂ ನೈತಿಕತೆ ಇದ್ದರೆ ದಯವಿಟ್ಟು ರಾಜೀನಾಮೆ ಕೊಟ್ಟುಬಿಡಿ. ಒತ್ತೆಯಲ್ಲಿಟ್ಟುಕೊಂಡಿರುವ ಸಂತ್ರಸ್ತೆಯನ್ನು ಬಿಟ್ಟುಬಿಡಿ, ತನಿಖೆಗೆ ಸಹಕರಿಸಿ" ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದೆ.
ರಾಜಕೀಯ ಲಾಭಕ್ಕಾಗಿ ಸಂತ್ರಸ್ಥೆಯನ್ನು ಬಳಸಿಕೊಂಡ ಆರೋಪ:
"ರಾಜೀನಾಮೆ ನೀಡಲು ಇನ್ನೆಷ್ಟು ಕಾಲ ಬೇಕು ಮಾನ್ಯ ಡಿ ಕೆ ಶಿವಕುಮಾರ್ ಅವರೇ!?. ನೇರವಾಗಿ ಆರೋಪ ಮಾಡಿದ್ದಾರೆ. ರಾಜಕೀಯ ಲಾಭಕ್ಕಾಗಿ ಸಂತ್ರಸ್ಥೆಯನ್ನು ಬಳಸಿಕೊಂಡ ಆರೋಪ ನಿಮ್ಮ ಮೇಲೆ ಇದೆ. ಇಷ್ಟೆಲ್ಲಾ ಮಾಡಿಯೂ ಸದನದಲ್ಲಿ ಹೇಗೆ ಮುಖ ಇಟ್ಟುಕೊಂಡು ಸಿಡಿ ವಿಚಾರವಾಗಿ ಮಾತನಾಡಿದ್ದೀರಿ? ತಕ್ಷಣವೇ ರಾಜೀನಾಮೆ ನೀಡಿ" ಎಂದು ಬಿಜೆಪಿ ಆಗ್ರಹಿಸಿತ್ತು.












Click it and Unblock the Notifications