2003ರಲ್ಲಿ ಪತ್ನಿ ಕೊಲೆ ಪ್ರಕರಣ, ಬೆಂಗಳೂರಲ್ಲಿ ಸಿಸಿಬಿಯಿಂದ ಟೆಕ್ಕಿ ಬಂಧನ!
ಬೆಂಗಳೂರು, ಅಕ್ಟೋಬರ್ 25 : ಪತ್ನಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಸಾಫ್ಟ್ವೇರ್ ಕಂಪನಿಯ ಸೀನಿಯರ್ ಮ್ಯಾನೇಜರ್ನನ್ನು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಟೆಕ್ಕಿ 2003ರಲ್ಲಿ ಪತ್ನಿಯನ್ನು ಹತ್ಯೆ ಮಾಡಿದ್ದಾರೆ ಎಂಬ ಆರೋಪವಿದೆ.
ಗುಜರಾತ್ ಮೂಲದ ತರುಣ್ ಜಿನ್ರಾಜ್ ಬಂಧಿತ ಆರೋಪಿ. ಬೆಂಗಳೂರಿನ ಸಾಫ್ಟ್ವೇರ್ ಕಂಪನಿಯಲ್ಲಿ ಪ್ರವೀಣ್ ಭಾಟ್ಲೆ ಎಂಬ ಹೆಸರಿನ ಮೇಲೆ ಉದ್ಯೋಗ ಪಡೆದಿದ್ದರು. ಪತ್ನಿ ಸಜನಿ (26) ಕೊಲೆ ಪ್ರಕರಣದಲ್ಲಿ ಈತ ಆರೋಪಿ ಎಂದು ಶಂಕಿಸಲಾಗಿದೆ.
2003ರಲ್ಲಿ ಅಹಮದಾಬಾದ್ನಲ್ಲಿ ಸಜನಿ ಹತ್ಯೆ ನಡೆದಿತ್ತು. ಸಂಬಂಧಿಕರ ಸಹಾಯದಿಂದ ತರುಣ್ ಜಿನ್ರಾಜ್ ಪತ್ನಿಯನ್ನು ಹತ್ಯೆ ಮಾಡಿದ್ದಾರೆ ಎಂಬುದು ಆರೋಪ. ಆದರೆ, ದರೋಡೆಗೆ ಬಂಧವರು ಹತ್ಯೆ ಮಾಡಿದ್ದಾರೆ ಎಂದು ಹೇಳಿದ್ದರು.

ಗುಜರಾತ್ ಪೊಲೀಸರು ತರುಣ್ ಜಿನ್ರಾಜ್ ಮತ್ತು ಆತನ ಕೆಲವು ಸಂಬಂಧಿಕರನ್ನು ಬಂಧಿಸಿದ್ದರು. ಕೆಲವು ತಿಂಗಳುಗಳ ಕಾಲ ಜೈಲಿನಲ್ಲಿದ್ದ ತರುಣ್ ಹೊರಬಂದ ಬಳಿಕ ನಾಪತ್ತೆಯಾಗಿದ್ದ. ಗುಜರಾತ್ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದರು, ಸಂಬಂಧಿಕರ ದೂರವಾಣಿ ಕರೆ ಮಾಹಿತಿ ಕಲೆ ಹಾಕುತ್ತಿದ್ದರು.
ಎರಡು ವರ್ಷಗಳ ಹಿಂದೆ ತರುಣ್ ಜಿನ್ರಾಜ್ ಬೆಂಗಳೂರಿಗೆ ಬಂದಿದ್ದ. ಸಾಫ್ಟ್ವೇರ್ ಕಂಪನಿಯಲ್ಲಿ ಪ್ರವೀಣ್ ಭಾಟ್ಲೆ ಎಂಬ ಹೆಸರಿನ ಮೇಲೆ ಕೆಲಸಕ್ಕೆ ಸೇರಿದ್ದ. ಸೀನಿಯರ್ ಮ್ಯಾನೇಜರ್ ಆಗಿದ್ದ ಈತ ಸದಾ ರಾತ್ರಿ ಪಾಳಿಯಲ್ಲಿ ಮಾತ್ರ ಕೆಲಸ ಮಾಡುತ್ತಿದ್ದ.
ಅಹಮದಾಬಾದ್ ಪೊಲೀಸರು ಸಂಬಂಧಿಕರ ಕರೆ ದಾಖಲೆ ಪರಿಶೀಲಿಸಿದಾಗ ತರುಣ್ ಜಿನ್ರಾಜ್ ಬೆಂಗಳೂರಿನಲ್ಲಿ ಇರುವುದು ಗೊತ್ತಾಗಿತ್ತು. ಸಿಸಿಬಿ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದರು.
ಬುಧವಾರ ಸಿಸಿಬಿ ಪೊಲೀಸರು ತರುಣ್ ಜಿನ್ರಾಜ್ನನ್ನು ಬಂಧಿಸಿ, ಗುಜರಾಜ್ ಪೊಲೀಸರಿಗೆ ಒಪ್ಪಿಸಿದ್ದಾರೆ.











Click it and Unblock the Notifications