ಮೀಟರ್ ಬಡ್ಡಿ ವ್ಯವಹಾರ; ಸಿಸಿಬಿ ಪೊಲೀಸರ ವಶಕ್ಕೆ ವೈಯಾಲಿಕಾವಲ್ ಫೈನಾನ್ಶಿಯರ್
ಬೆಂಗಳೂರು, ಡಿಸೆಂಬರ್ 06: ಮೀಟರ್ ಬಡ್ಡಿ ಲೆಕ್ಕದಲ್ಲಿ ಜನರಿಂದ ಅಧಿಕ ಬಡ್ಡಿ ವಸೂಲಿ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಡ್ಡಿಗಾಗಿ ಆರೋಪಿಯು ಕಿರುಕುಳ ನೀಡುತ್ತಿರುವ ಕುರಿತು ಸಿಸಿಬಿಗೆ ದೂರುಗಳು ಬಂದಿದ್ದವು. ಬಡ್ಡಿ ದಂಧೆಕೋರರ ವಿರುದ್ಧ ಸಿಸಿಬಿ ಕಾರ್ಯಾಚರಣೆ ನಡೆಸುತ್ತಿದ್ದು, ವೈಯಾಲಿಕಾವಲ್ ನ ನಾಗರಾಜ್ ಶೆಟ್ಟಿ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ.
ಮನೆಯಲ್ಲಿ 164 ಚೆಕ್, 84 ಪ್ರಾಮಿಸರಿ ನೋಟ್ ಗಳು, ಸಾಲ ಪಡೆದವರಿಂದ ಪಡೆದಿದ್ದ ಆಸ್ತಿ ದಾಖಲೆಗಳು ಹಾಗೂ 22 ಲಕ್ಷ ಹಣವನ್ನು ಜಪ್ತಿ ಮಾಡಿದ್ದಾರೆ. ಮೂಲತಃ ಶಿವಮೊಗ್ಗದವನಾಗಿರುವ ನಾಗರಾಜ್ ಶೆಟ್ಟಿ ವೈಯಾಲಿಕಾವಲ್ ನಲ್ಲಿ ಬಾಲಾಜಿ ಫೈನಾನ್ಸ್ ನಡೆಸುತ್ತಿದ್ದ. ಮೃತ ಕಪಾಲಿ ಮೋಹನ್ ಆಪ್ತನಾಗಿರುವ ಈತ ವೈಯಾಲಿಕಾವಲ್, ಮಲ್ಲೇಶ್ವರಂ ಸುತ್ತಮುತ್ತಲಿನ ಉದ್ಯಮಿಗಳು ಮತ್ತು ವ್ಯಾಪಾರಸ್ಥರಿಗೆ ಹೆಚ್ಚಿನ ಸಾಲ ನೀಡಿದ್ದ.

ಆದರೆ ಸಾಲಕ್ಕೆ ಅಧಿಕ ಬಡ್ಡಿಯನ್ನು ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ. ದಿನದ ಲೆಕ್ಕದಲ್ಲಿ ಅತಿ ಹೆಚ್ಚಿನ ಬಡ್ಡಿಯನ್ನು ವಸೂಲಿ ಮಾಡುತ್ತಿದ್ದ ನಾಗರಾಜ್ ಶೆಟ್ಟಿ ಬಡ್ಡಿ ಕಟ್ಟದೇ ಇದ್ದರೆ ಕಿರುಕುಳ ನೀಡುತ್ತಿದ್ದ ಎಂಬ ದೂರು ಬಂದಿತ್ತು. ಒಂದು ವರ್ಷಕ್ಕೆ ಪಡೆದ ಸಾಲಕ್ಕೆ ಸುಮಾರು 60% ಬಡ್ಡಿ ಪಡೆಯುತ್ತಿದ್ದ. ಈ ಕುರಿತು ಕೆಲವರು ಸಿಸಿಬಿಗೆ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಸಿಸಿಬಿ ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದಾರೆ.
Recommended Video
ನಾಗರಾಜ್ ಶೆಟ್ಟಿ ಕನ್ನಡದ ಕೆಲ ಸಿನಿಮಾಗಳಲ್ಲೂ ನಟನೆ ಮಾಡಿದ್ದ ಎಂದು ತಿಳಿದುಬಂದಿದೆ. ಸಿಸಿಬಿ ಪೊಲೀಸರಿಂದ ತನಿಖೆ ಮುಂದುವರೆದಿದೆ.












Click it and Unblock the Notifications