Bengaluru Rent: ಮನೆ ಬಾಡಿಗೆ ಕೊಡುವವರೇ ಎಚ್ಚರ! ಬಾಡಿಗೆ ಪಡೆದು ಭೋಗ್ಯಕ್ಕೆ ನೀಡಿ ವಂಚಿಸುವ ಜಾಲ ಪತ್ತೆ
ಬೆಂಗಳೂರು, ಫೆಬ್ರವರಿ 23: ಬೆಂಗಳೂರಿನಲ್ಲಿ ಉದ್ಯೋಗ ಅರಸಿ ಬರುವವರು ಕಡಿಮೆ ಬೆಲೆಗೆ ಬಾಡಿಗೆ ಮನೆ ಸಿಕ್ಕರೆ ಸಾಕಪ್ಪ ಎನ್ನುತ್ತಾರೆ. ಮನೆ ಮಾಲೀಕರು ಅಷ್ಟೆ ನಿಗದಿಪಡಿಸಿದ ಬಾಡಿಗೆಗೆ ಸೂಕ್ತ ವ್ಯಕ್ತಿ, ಕುಟುಂಬದವರು ಬಂದರೆ ಸಾಕಪ್ಪ ಎಂದುಕೊಂಡಿರುತ್ತಾರೆ. ಇಂತವರನ್ನೆ ಟಾರ್ಗೆಟ್ ಮಾಡಿ ಲಕ್ಷ ಲಕ್ಷ ಹಣ ಪಡೆದು ವಂಚಿಸುವ ಜಾಲವೊಂದು ಬೆಂಗಳೂರಿನಲ್ಲಿ ಪತ್ತೆ ಆಗಿದೆ.
ಬೆಂಗಳೂರಿನಂತಹ ಮಹಾನಗರಗಳಲ್ಲಿ ಒಂದು ಕಡೆ ಮನೆ ಬಾಡಿಗೆ ದರ ಏರಿಕೆ ಮಾಡಿದ್ದಾರೆ ಎಂಬ ಚಿಂತೆ ಇದೆ. ಕೇಳಿದಷ್ಟು ಹಣ ಕೊಡಲು ಆಗದೇ ಭೋಗ್ಯಕ್ಕೆ ಮನೆ ಪಡೆದರಾಯಿತು ಎನ್ನುವವರು ಹೆಚ್ಚಾಗಿದ್ದಾರೆ. ಇಂತವರನ್ನೆ ಆನ್ಲೈನ್ನಲ್ಲಿ ಬಲೆಗೆ ಬೀಳಿಸಿಕೊಂಡು ಕಡಿಮೆ ಬೆಲೆಗೆ ಉತ್ತಮ ಮನೆ ಕೊಡಿಸುವುದಾಗಿ ತಿಳಿಸಿ ಮೋಸ ಮಾಡುತ್ತಿದ್ದ ಗ್ಯಾಂಗ್ನ ಓರ್ವ ಸದಸ್ಯನನ್ನು ಸಿಸಿಬಿ ಬಂಧಿಸಿದೆ. ಮತ್ತೊಬ್ಬನಿಗಾಗಿ ಪೊಲೀಸ್ ತಲಾಷ್ ನಡೆದಿದೆ.

ಏನಿದು ಪ್ರಕರಣ, ವಂಚಕರ ಅಸಲಿಯತ್ತೇನು?
ಆರೋಪಿಗಳಾದ ಖಲೀಲ್ ಷರೀಫ್ ಮತ್ತು ಸೈಯದ್ ಅಹಮದ್ ಹುಸೇನ್ ಇಬ್ಬರು ಕೂಡಿಕೊಂಡು ಕಡಿಮೆ ಬೆಲೆಗೆ ಭೋಗ್ಯಕ್ಕೆ ಮನೆ ಕೊಡಿಸುವುದಾಗಿ ಓಎಲ್ಕ್ಸ್, ನೋ ಬ್ರೋಕರ್.ಕಾಮ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಿದ್ದರು. ಈ ಜಾಹೀರಾತು, ಮಾಹಿತಿ ನೋಡಿದ ಮನೆ ಅಗತ್ಯ ಇರುವವರು ಇವರನ್ನು ಸಂಪರ್ಕಿಸುತ್ತಿದ್ದರು. ಇದಕ್ಕಾಗಿಯೇ ಈ ಆರೋಪಿಗಳು ಸಣ್ಣ ಕಂಪನಿಯೊಂದನ್ನು ತೆರೆದಿದ್ದರು.
ಇದಕ್ಕೂ ಮೊದಲೇ ಮನೆ, ಫ್ಲ್ಯಾಟ್ ಮಾಲೀಕರೊಂದಿಗೆ ಬಾಡಿಗೆ ರೂಪದಲ್ಲಿ ಮನೆ ಬಾಡಿಗೆ ಪಡೆದುಕೊಂಡು ಇಂತಿಷ್ಟು ವರ್ಷವೆಂದು ಒಪ್ಪಂದ ಮಾಡಿಕೊಂಡಿರುತ್ತಿದ್ದರು. ಅವರಿಗೆ ಭೋಗ್ಯಕ್ಕೆ ಎಂದು ಹೇಳುತ್ತಿರಲಿಲ್ಲ. ಇತ್ತ ತಮ್ಮ ಸಂಪರ್ಕಿಸಿ ಭೋಗ್ಯಕ್ಕೆ ಬರುವವರ ಬಳಿ ನಾಜೂಕಿನ ಮಾತು ಮಾತನಾಡಿ, ನಂಬಿಸಿ ಲಕ್ಷ ಲಕ್ಷ ಹಣ ಪಡೆದು ಮನೆ ಫೋಟೋ ತೋರಿಸುತ್ತಿದ್ದರು.
ಮನೆ ಮಾಲೀಕರಿಗೆ ಆರಂಭದಲ್ಲಿ ಮಾತಿನಂತೆ ಎರಡು ಮೂರು ತಿಂಗಳ ಬಾಡಿಗೆ ಕೊಡುತ್ತಿದ್ದರು. ನಂತರ ಮನೆ ಮಾಲೀಕರಿಗೆ ಮತ್ತು ಭೋಗ್ಯಕ್ಕೆ ಲಕ್ಷ ಲಕ್ಷ ಹಣ ನೀಡಿದವರಿಗೆ ಸಂಪರ್ಕ ಸಿಗದೇ ಮೋಸ ಮಾಡುತ್ತಿದ್ದರು. ಯಾರದ್ದೋ ಮನೆ, ಯಾರದ್ದೋ ದುಡ್ಡ ಯಲ್ಲಮ್ಮನ ಜಾತ್ರೆ ಎಂಬಂತಾಗಿತ್ತು. ಈ ಸಂಬಂಧ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು.
ಪ್ರಕರಣ ಬೇಧಿಸಿದ್ದು ಹೇಗೆ?
ಪ್ರಕರಣ ಸಂಬಂಧ ಕೊತ್ತನೂರು, ರಾಮಮೂರ್ತಿನಗರ, ರಾಜಾನುಕುಂಟೆ ಸೇರಿದಂತೆ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಮನೆ ಬಾಡಿಗೆ ವಂಚನೆಯ ಕೇಸು ದಾಖಲಾಗಿವೆ. ಈ ಸಂಬಂಧ ಅಲರ್ಟ್ ಆದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು, ನಗರ ಅಪರಾಧ ವಿಭಾಗಕ್ಕೆ (ಸಿಸಿಬಿ) ನಿರ್ದೇಶಿಸಿದ್ದರು. ಅದರಂತೆ ಸಿಸಿಬಿ ತಂಡ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದೆ. ಖಲೀಲ್ ಆರೀಫ್ ಎಂಬಾತನನ್ನು ಬಂಧಿಸಿದ್ದಾರೆ. ಸೈಯದ್ ಎಂಬಾತನಿಗೆ ಹುಡುಕಾಟ ನಡೆದಿದೆ.
ಮನೆ ಮಾಲೀಕರೇ ಎಚ್ಚರ!
ಕೊತ್ತನೂರಿನಲ್ಲಿ ಅಪಾರ್ಟ್ಮೆಂಟ್ ಒಂದರಲ್ಲಿ ಫ್ಲ್ಯಾಟ್ ಭೋಗ್ಯಕ್ಕೆ ನೀಡುವುದಾಗಿ 12 ಲಕ್ಷ ರೂ., ನೋ ಬ್ರೋಕರ್.ಕಾಮ್ನಲ್ಲಿ 2 ಮನೆಗಳಿಂದ ಬರೊಬ್ಬರಿ ರೂ. 25 ಲಕ್ಷಕ್ಕೂ ಅಧಿಕ ಹಣ ಪಡೆದಿದ್ದಾರೆ. ಹೀಗೆ ನಗರದ ವಿವಿಧಡೆ ಅನೇಕ ಕಡೆಗಳಲ್ಲಿ ಮನೆ ಮಾಲೀಕರಿಗೆ ಬಾಡಿಗೆ ಎಂದು ಹೇಳಿ, ಇತರರಿಗೆ ಭೋಗ್ಯಕ್ಕೆ ನೀಡಿ ಹಣ ಲಪಟಾಯಿಸಿದ್ದಾರೆ. ಮನೆ ಬಾಡಿಗೆ ನೀಡುವವು ಹಿಂದೆ ಮುಂದೆ ನೋಡಿ, ವಿಚಾರಿಸಿ ಕೊಡುವುದು ಉತ್ತಮ. ಇಲ್ಲವಾದರೆ ನೀವು ಇಂತಹ ನಯ ವಂಚನೆಗೆ ಬಲಿಯಾಗಬಹುದು..












Click it and Unblock the Notifications