ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಮನೆ ಮೇಲೆ ಸಿಬಿಐ ದಾಳಿ
Recommended Video
ಬೆಂಗಳೂರು, ಸೆಪ್ಟೆಂಬರ್ 26: ಐಪಿಎಸ್ ಅಧಿಕಾರಿ, ಮಾಜಿ ಬೆಂಗಳೂರು ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದ್ದು, ಶೋಧ ಕಾರ್ಯ ನಡೆಸಿದೆ.
ಫೊನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದ್ದು, ಪೆನ್ಡ್ರೈವ್, ಹಾರ್ಡ್ಡ್ರೈವ್ ಇನ್ನಿತರೆ ಮಾಹಿತಿಗಳಿಗಾಗಿ ಸಿಬಿಐ ಅಧಿಕಾರಿಗಳು ಶೋಧ ನಡೆಸಿದ್ದಾರೆ ಎನ್ನಲಾಗಿದೆ.
ಕುಮಾರಸ್ವಾಮಿ ಆಡಳಿತ ಅವಧಿಯಲ್ಲಿ ಫೊನ್ ಕದ್ದಾಲಿಕೆ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪ್ರಕರಣವನ್ನು ರಾಜ್ಯ ಸರ್ಕಾರವು ಸಿಬಿಐಗೆ ವಹಿಸಿತ್ತು.

ಈಗಾಗಲೇ ಹಲವು ಪೊಲೀಸ್ ಅಧಿಕಾರಿಗಳನ್ನು ವಿಚಾರಣೆ ನಡೆಸಿರುವ ಸಿಬಿಐ ಇಂದು ಅಲೋಕ್ ಕುಮಾರ್ ಅವರ ನಿವಾಸದ ಮೇಲೆ ದಾಳಿ ಮಾಡಿದ್ದು, ಅವರನ್ನೂ ಮನೆಯಲ್ಲಿಯೇ ವಿಚಾರಣೆ ನಡೆಸಲಾಗುತ್ತಿದೆ.
ಪ್ರಸ್ತುತ ಬೆಂಗಳೂರು ಕಮೀಷನರ್ ಆಗಿರುವ ಭಾಸ್ಕರ ರಾವ್ ಅವರ ಫೋನ್ ಸಹ ಕದ್ದಾಲಿಕೆ ಆಗಿತ್ತು. ಭಾಸ್ಕರ್ ರಾವ್ ಮತ್ತು ಕಾಂಗ್ರೆಸ್ ಪ್ರಮುಖರೊಬ್ಬರ ನಡುವೆ ನಡೆದ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಹಿಂದೆ ಅಲೋಕ್ ಕುಮಾರ್ ಕೈವಾಡವಿದೆ ಎನ್ನಲಾಗಿತ್ತು.
ಈ ಬಗ್ಗೆ ಆಂತರಿಕ ತನಿಖೆ ಈಗಾಗಲೇ ನಡೆದಿದ್ದು, ಆಡುಗೊಡಿಯ ಟೆಕ್ನಿಕಲ್ ಸೆಲ್ನಿಂದ ಭಾಸ್ಕರ್ ರಾವ್ ಅವರ ಫೋನ್ ಕದ್ದಾಲಿಕೆ ಆಗಿತ್ತು, ಆ ಮಾಹಿತಿಯನ್ನು ಪೆನ್ಡ್ರೈವ್ ಮೂಲಕ ಬೆಂಗಳೂರು ನಗರ ಕಮೀಷನರ್ ಕಚೇರಿಯಲ್ಲಿಯೇ ಅದನ್ನು ಹಸ್ತಾಂತರ ಮಾಡಲಾಗಿತ್ತು ಎನ್ನುವುದು ಬೆಳಕಿಗೆ ಬಂದಿತ್ತು.
ಮೈತ್ರಿ ಸರ್ಕಾರ ಅವಧಿಯಲ್ಲಿ ಅಲೋಕ್ ಕುಮಾರ್ ಅವರನ್ನು ಬೆಂಗಳೂರು ಆಯುಕ್ತರನ್ನಾಗಿ ನೇಮಕ ಮಾಡಲಾಗಿತ್ತು. ಅದಾದ ಕೆಲವೇ ದಿನಗಳಲ್ಲಿ ಸರ್ಕಾರ ಬದಲಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಅಲೋಕ್ ಕುಮಾರ್ ಅವರನ್ನು ಕೆ.ಎಸ್.ಆರ್.ಪಿ ಎಡಿಜಿಪಿ ಎತ್ತಂಗಡಿ ಮಾಡಿ ಬೆಂಗಳೂರು ಆಯುಕ್ತ ಸ್ಥಾನಕ್ಕೆ ಭಾಸ್ಕರ್ ರಾವ್ ಅವರನ್ನು ನೇಮಕ ಮಾಡಲಾಯಿತು.












Click it and Unblock the Notifications