ಸಂಪುಟ ವಿಸ್ತರಣೆ : ಮೌನ ಮುರಿದ ರಾಮಲಿಂಗಾ ರೆಡ್ಡಿ!
ಬೆಂಗಳೂರು, ಡಿಸೆಂಬರ್ 07 : ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ಮೌನ ಮುರಿದಿದ್ದಾರೆ. ಡಿಸೆಂಬರ್ 22ರಂದು ಸಂಪುಟ ವಿಸ್ತರಣೆಯಾಗಲಿದೆ ಎಂದು ಸಿದ್ದರಾಮಯ್ಯ ಈಗಾಗಲೇ ಘೋಷಣೆ ಮಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿರುವ ರಾಮಲಿಂಗಾ ರೆಡ್ಡಿ ಅವರು, 'ಪಕ್ಷ ಹಿರಿಯ ನಾಯಕರನ್ನು ಕಡೆಗಣಿಸುವುದು ನಿಲ್ಲಬೇಕು' ಎಂದು ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.
'ಮೈತ್ರಿ ಸರ್ಕಾರದಲ್ಲಿ ಹೊಸಬರಿಗೆ ಅವಕಾಶ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಆರ್.ವಿ.ದೇಶಪಾಂಡೆ, ಕೆ.ಜೆ.ಜಾರ್ಜ್, ಡಿ.ಕೆ.ಶಿವಕುಮಾರ್ ಹಿಂದಿನ ಸರ್ಕಾರದಲ್ಲಿ ಸಚಿವರಾಗಿರಲಿಲ್ಲವೇ?' ಎಂದು ಹೇಳಿದ್ದಾರೆ.
ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ರಾಮಲಿಂಗಾ ರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಿರಲಿಲ್ಲ. ಜಯನಗರ ಚುನಾವಣೆಯಲ್ಲಿ ಪುತ್ರಿ ಸೌಮ್ಯಾ ರೆಡ್ಡಿ ಅವರನ್ನು ಗೆಲ್ಲಿಸಿದ ಮೇಲೂ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿರಲಿಲ್ಲ. ಆದ್ದರಿಂದ, ಅವರು ಅಸಮಾಧಾನಗೊಂಡಿದ್ದಾರೆ. ಸಂಪುಟ ವಿಸ್ತರಣೆಯಲ್ಲಿ ಯಾರಿಗೆ ಸಚಿವ ಸ್ಥಾನ ಸಿಗಲಿದೆ? ಎಂದು ಕಾದು ನೋಡಬೇಕು....

ಎಲ್ಲರಿಗೂ ಅವಕಾಶ ನೀಡಬೇಕು
'ಈಗ ಸಂಪುಟದಲ್ಲಿ ಇರುವವರು ಸಚಿವ ಸ್ಥಾನಕ್ಕೆ ಅರ್ಹರು. ಆದರೆ, ಪಿಕ್ ಅಂಡ್ ಚೂಸ್ ಎಂಬುದು ಆಗಬಾರದು. ಎಲ್ಲಾ ಹಿರಿಯರಿಗೂ ಅವಕಾಶ ಸಿಗಬೇಕು ಅಥವ ಯಾರಿಗೂ ಸಿಗಬಾರದು' ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಜಾತಿ ಆಧಾರದಲ್ಲಿ ಆಯ್ಕೆ ಬೇಡ
'ಸಂಪುಟಕ್ಕೆ ಸಚಿವರನ್ನು ಸೇರಿಸಿಕೊಳ್ಳುವಾಗ ಜಾತಿ ಆಧಾರದಲ್ಲಿ ಆಯ್ಕೆ ನಡೆಯಬಾರದು. ಹಿರಿಯರ ಆಧಾರದಲ್ಲಿ ನೇಮಕವಾಗಬೇಕು' ಎಂದು ಬಿ.ಟಿ.ಎಂ. ಕ್ಷೇತ್ರದ ಶಾಸಕ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಸಂಪುಟ ವಿಸ್ತರಣೆ ಆಗಲ್ಲ
'2019ರ ಲೋಕಸಭಾ ಚುನಾವಣೆ ತನಕ ಸಂಪುಟ ವಿಸ್ತರಣೆ ಆಗುವುದಿಲ್ಲ. ಡಿಸೆಂಬರ್ 22ರಂದು ಸಂಪುಟ ವಿಸ್ತರಣೆ ನಡೆಯುವುದಿಲ್ಲ. ಏಕೆಂದರೆ ಶೂನ್ಯ ಮಾಸವಿದೆ' ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಚುನಾವಣೆಯಲ್ಲಿ ಗೆಲುವು
ಮೈತ್ರಿ ಸರ್ಕಾರದಲ್ಲಿ ರಾಮಲಿಂಗಾ ರೆಡ್ಡಿ ಅವರಿಗೆ ಏಕೆ ಸಚಿವ ಸ್ಥಾನ ನೀಡಲಿಲ್ಲ? ಎಂಬ ಪ್ರಶ್ನೆಗೆ ಕಾಂಗ್ರೆಸ್ ಪಕ್ಷದ ಬಳಿ ಉತ್ತರವಿಲ್ಲ. ಜಯನಗರ ಚುನಾವಣೆಯಲ್ಲಿ ಪುತ್ರಿ ಸೌಮ್ಯಾ ರೆಡ್ಡಿ ಅವರನ್ನು ಗೆಲ್ಲಿಸಿದ ಬಳಿಕ ಸಚಿವ ಸ್ಥಾನ ನೀಡಬಹುದು ಎಂದು ಅಂದಾಜಿಸಲಾಗಿತ್ತು.












Click it and Unblock the Notifications