'ಬಸ್ ಭಾಗ್ಯ ಬೇಕು' ಅಭಿಯಾನಕ್ಕೆ ನೂರಾರು ಜನರ ಸಾಥ್
ನೂರಾರು ಬೆಂಗಳೂರಿಗರು ಶನಿವಾರ ಬಸ್ ಹತ್ತಿದರು. 'ಬಸ್ ಭಾಗ್ಯ ಬೇಕು' ಅಭಿಯಾನದ ಅಂಗವಾಗಿ ನಗರದ ಎಲ್ಲಾ ಜನರಿಗೂ ಕೈಗೆಟುಕುವ ದರದಲ್ಲಿ ಬಿಎಂಟಿಸಿ ಬಸ್ ಸೇವೆ ನೀಡಿ ಅಂತ ಇವರೆಲ್ಲಾ ಬಸ್ ಏರಿ, ಭಿತ್ತಿ ಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.
ಬೆಂಗಳೂರು, ಮಾರ್ಚ್ 5: ನೂರಾರು ಬೆಂಗಳೂರಿಗರು ಶನಿವಾರ ಬಸ್ ಹತ್ತಿದರು. 'ಬಸ್ ಭಾಗ್ಯ ಬೇಕು' ಅಭಿಯಾನದ ಅಂಗವಾಗಿ ನಗರದ ಎಲ್ಲಾ ಜನರಿಗೂ ಕೈಗೆಟುಕುವ ದರದಲ್ಲಿ ಬಿಎಂಟಿಸಿ ಬಸ್ ಸೇವೆ ನೀಡಿ ಅಂತ ಇವರೆಲ್ಲಾ ಬಸ್ ಏರಿ, ಭಿತ್ತಿ ಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.
'ಸಿಟಿಜನ್ಸ್ ಫಾರ್ ಬೆಂಗಳೂರು' ಹಾಗೂ 'ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ' ಜಂಟಿಯಾಗಿ ಈ ಅಭಿಯಾನವನ್ನು ಹಮ್ಮಿಕೊಂಡಿತ್ತು. ನಗರದ ಮೆಜೆಸ್ಟಿಕ್, ಕೋರಮಂಗಲ, ಜಯನಗರ, ಶಿವಾಜಿ ನಗರ ಹಾಗೂ ಬನಶಂಕರಿಯಲ್ಲಿ ಪ್ರಯಾಣಿಕರು ಪ್ರತಿಭಟನೆ ನಡೆಸಿದರು.[ಮಾರ್ಚ್ 4ಕ್ಕೆ ಬೆಂಗಳೂರಿನಲ್ಲಿ 'ಬಸ್ ಭಾಗ್ಯ ಬೇಕು' ಅಭಿಯಾನ]
'ಬಸ್ ಭಾಗ್ಯ ಬೇಕು, ಟಿಕೆಟ್ ಅರ್ಧ ಮಾಡಿ, ಬಸ್ ಡಬಲ್' ಮಾಡಿ ಘೋಷಣೆಗಳನ್ನು ಪ್ರತಿಭಟನಾಕಾರರು ಕೂಗಿದರು. ಇನ್ನು ಶಾಂತಿನಗರದಲ್ಲಿ ಪ್ರಯಾಣಿಕರು ಬಿಎಂಟಿಸಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಿಗೆ ಈ ಸಂಬಂಧ ಮನವಿ ಪತ್ರವನ್ನೂ ನೀಡಿದರು.
ಸ್ಟೀಲ್ ಫ್ಲೈ ಓವರ್ ರದ್ದು ಮಾಡಿದ ನಂತರ ಸರಕಾರ ಬಿಎಂಟಿಸಿಗೆ ಹೆಚ್ಚಿನ ನಿಧಿ ನೀಡಬೇಕು. ಸಾರ್ವಜನಿಕ ಸಾರಿಗೆಗೆ ಉತ್ತೇಜನ ಕೊಡಬೇಕು. ಬಜೆಟ್ ನಲ್ಲಿ ಬಸ್ಸುಗಳ ಸಂಖ್ಯೆ ಹೆಚ್ಚು ಮಾಡಿ ದರವನ್ನು ಕಡಿಮೆ ಮಾಡಬೇಕು ಎಂದು ಅಭಿಯಾನದಲ್ಲಿ ಪಾಲ್ಗೊಂಡವರು ಹೇಳಿದ್ದಾರೆ.
ಬಸ್ಸುಗಳ ಸಂಖ್ಯೆ ಹೆಚ್ಚು ಮಾಡಿದರೆ ಟ್ರಾಫಿಕ್ ಸಮಸ್ಯೆಗೂ ಮುಕ್ತಿ ಸಿಗುತ್ತದೆ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟಿದ್ದಾರೆ.