Get Updates
Get notified of breaking news, exclusive insights, and must-see stories!

1 ಟಿಕೆಟ್ ಪಡೆದು 2 ನಾಟಕ ನೋಡಿ, ರಂಗ ಮಂಥನ ಆಫರ್

ಬೆಂಗಳೂರು, ನವೆಂಬರ್ 15: ಕೊರೊನಾ ಸಾಂಕ್ರಾಮಿಕದಿಂದ ತೊಂದರೆಗೊಳಗಾಗಿದ್ದ ರಂಗ ಕ್ಷೇತ್ರ ಮತ್ತೆ ಸಹಜ ಸ್ಥಿತಿಗೆ ನಿಧಾನವಾಗಿ ಮರಳುತ್ತಿದೆ. ಪ್ರಮುಖ ಕಲಾಕ್ಷೇತ್ರಗಳು ನಾಟಕ ಉತ್ಸವಗಳನ್ನು ಆಯೋಜಿಸುತ್ತಿವೆ. ರಂಗ ಮಂಥನ ತಂಡ ಪ್ರೇಕ್ಷಕರನ್ನು ಸೆಳೆಯಲು ಹೊಸ ಆಫರ್ ನೀಡಿದೆ. 1 ಟಿಕೆಟ್ ಪಡೆದು 2 ನಾಟಕ ನೋಡುವ ಅವಕಾಶ ಒದಗಿಸುತ್ತಿದೆ.

ಸಮಾನ ಮನಸ್ಕ ರಂಗಾಸಕ್ತರಿಂದ ರೂಪಿಸಲ್ಪಟ್ಟ ಬೆಂಗಳೂರಿನ ರಂಗ ಮಂಥನ ತಂಡ ವೈವಿಧ್ಯಮಯ ರಂಗ ಪ್ರಯೋಗಗಳನ್ನು ನೀಡುತ್ತಾ ಬಂದಿದೆ. ಈಗ 90 ನಿಮಿಷಗಳ "ಟಿಕೆಟ್ 1- ನಾಟಕ 2" ರಂಗ ಶಂಕರದಲ್ಲಿ, ನವೆಂಬರ್ 17ರಂದು ಪ್ರಸ್ತುತಿಪಡಿಸಲಿದೆ.

ತಂಡದ ಪರಿಚಯ:

ರಂಗ ಮಂಥನ ತಂಡ, ಬೆಂಗಳೂರಿನ ವಿವಿಧ ರಂಗ ತಂಡಗಳಲ್ಲಿ ನಟನೆ, ನಿರ್ದೇಶನ ಹಾಗೂ ರಂಗಭೂಮಿಯ ವಿವಿಧ ಪ್ರಾಕಾರಗಳಲ್ಲಿ ಸಕ್ರಿಯರಾಗಿದ್ದ ಸಮಾನ ಮನಸ್ಕ ರಂಗ ಕರ್ಮಿಗಳಿಂದ 2019 ರಲ್ಲಿ ರೂಪುಗೊಂಡ ರಂಗ ತಂಡ.

ರಂಗ ಮಂಥನ ತಂಡ, ಸಮಾಜದ ವಿವಿಧ ಜನರ ಸುಖ, ದುಃಖ, ನಗು, ತುಮುಲ, ತೊಳಲಾಟಗಳನ್ನು, ಆಯಾ ಪಾತ್ರಗಳು ಮಂಥನಗೊಳಗಾಗುವ ಮೂಲಕ ರಂಗದ ಮೇಲೆ ತೆರೆದಿಡುವ ಪ್ರಯತ್ನ ಮಾಡಲಿದೆ.

Buruki Vrutha and Theregalu Kannada play by RangaManathana

ಕನ್ನಡ ಸಾಹಿತ್ಯ ಲೋಕದ ಅತ್ಯುತ್ತಮ ಕತೆ, ಕಾದಂಬರಿಗಳನ್ನು ರಂಗ ಪ್ರಯೋಗ ಮಾಡುವ ಕನಸು 'ರಂಗ ಮಂಥನ' ತಂಡದ್ದು. ಆ ನಿಟ್ಟಿನಲ್ಲಿ ಸಾಹಿತಿ, ರಂಗಕರ್ಮಿ ಎಸ್.ಎನ್.ಸೇತುರಾಮ್ ಅವರ 'ದಹನ' ಕಥಾ ಸಂಕಲನದ ಕತೆ 'ದಹನ' ವನ್ನು ರಂಗ ರೂಪಕ್ಕೆ ತಂದು ಅನೇಕ ಯಶಸ್ವಿ ಪ್ರಯೋಗಗಳನ್ನು ಮಾಡಿದೆ.

ಈ ಬಾರಿ ಇನ್ನಷ್ಟು ವಿಭಿನ್ನವಾಗಿ, ಪ್ರಯೋಗಾತ್ಮಕವಾಗಿ ರಂಗ ಪ್ರಯೋಗ ಮಾಡುವ ಚಿಂತನೆಯಲ್ಲಿ,
ಪರಸ್ಪರ ವಿರುದ್ಧ ಕಥಾಹಂದರದ ಈ ಎರಡು ನಾಟಕಗಳನ್ನು, ರಂಗ ಸಜ್ಜಿಕೆಯನ್ನು ಸ್ವಲ್ಪವೂ ಬದಲಾಯಿಸದೆ, ಕೇವಲ 5 ನಿಮಿಷಗಳ ಬಿಡುವಿನಲ್ಲಿ ಅದೇ ಪಾತ್ರಧಾರಿಗಳ ಮೂಲಕ ಎರಡೂ ನಾಟಕಗಳ ಪ್ರದರ್ಶಿಸುವ ಸಾಹಸದ ಕೆಲಸಕ್ಕೆ ಕೈ ಹಾಕಿದೆ. ಅದುವೇ, 90 ನಿಮಿಷಗಳ "ಟಿಕೆಟ್ 1- ನಾಟಕ 2" ರಂಗ ಶಂಕರದಲ್ಲಿ, ನವಂಬರ್ 17, ಬುಧವಾರ ಸಂಜೆ 7 ಗಂಟೆಗೆ ಪ್ರದರ್ಶನವಾಗಲಿದೆ.

ಮೊದಲಿಗೆ ಪರ್ವತ ವಾಣಿ ಅವರ, 'ಬುರುಕಿ ವ್ರತ' ಜೆ.ಪಿ. ರಾಜರತ್ನಂ ಅವರ 'ಕಂಬ್ಳಿ ಸೇವೆ' ನಾಟಕದಿಂದ ಸ್ಫೂರ್ತಿಗೊಂಡ 1970ರ ದಶಕದ ಕಥಾವಸ್ತುವುಳ್ಳ ನಾಟಕ. ಶ್ರೀಮಂತ ಚಪಲ ಚೆನ್ನಿಗರಾಯನೊಬ್ಬನು ತನ್ನ ಚಪಲ ತೀರಿಸಿಕೊಳ್ಳಲು ಹೆಂಡತಿಗೆ ಪ್ರತಿಬಾರಿ ಸುಳ್ಳಿನ ಸರಮಾಲೆ ಹೆಣೆದು ತಪ್ಪಿಸಿಕೊಳ್ಳುತ್ತಿರುತ್ತಾನೆ. ಈ ಬಾರಿ ಹೊರ ಹೋಗಿ ಬಂದ ಮೇಲೆ ಸುಳ್ಳು ಕತೆ ಕಟ್ಟುವ ಬದಲು ಮನೆಯಿಂದ ಹೊರಡುವಾಗಲೇ ಸುಳ್ಳು ಹೇಳಿ ನಿರಾತಂಕವಾಗಿ ಹೋಗಿ ಬರಲು ಪ್ರಯತ್ನಿಸಿ, ಹೆಂಡತಿಯ ಬಳಿ ಸಿಕ್ಕಿ ಹಾಕಿ ಕೊಳ್ಳುವ ಕಥಾವಸ್ತು ಇರುವ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ನಗೆ ನಾಟಕ 'ಬುರುಕಿ ವ್ರತ'.

Buruki Vrutha and Theregalu Kannada play by RangaManathana

ನಂತರ 'ತೆರೆಗಳು', ಪಿ.ಲಂಕೇಶರ ತೀಕ್ಷ್ಣ ಸಂಭಾಷಣೆಯುಳ್ಳ ಅಸಂಗತ ನಾಟಕ. 1980 ರ ದಶಕದಲ್ಲಿ ಬರೆದಿದ್ದರೂ ಇಂದಿಗೂ ಪ್ರಸ್ತುತವೆನಿಸುವ ಪ್ರೇಕ್ಷಕರ ಯೋಚನೆಗೆ ಹಚ್ಚಿಸುವ ಕಥಾವಸ್ತುವನ್ನು ಈ ನಾಟಕ ಹೊಂದಿದೆ. ಮೂಲತಃ ಶಿಕ್ಷಕನಾಗಿದ್ದ ವ್ಯಕ್ತಿಯೊಬ್ಬ ಕೊನೆಯಿರದ ಆಸೆಯಗಳ ಹಿಂದೆ ಬಿದ್ದು ಅನೇಕ ಪಾಪ ಕೃತ್ಯಗಳನ್ನು ಮಾಡಿ ತಾನೇ ಯಜಮಾನನೆಂದು ಸ್ವಘೋಷಿತ ಪೊಳ್ಳು ಪ್ರತಿಷ್ಟೆಯಲ್ಲಿ ಮೆರೆಯುತ್ತಿರುವಾಗ 3 ಜನ ಆಗಂತುಕರ ಪ್ರಶ್ನಾವಳಿಗೆ ಆತನಾಗಿಯೇ ಪತನಗೊಳ್ಳುವ ಸಂಕೀರ್ಣ ಕತೆ.

Recommended Video

      ಒನ್ ಇಂಡಿಯಾ ಕನ್ನಡ ತಂಡದ ಜೊತೆ ಲಾವಣ್ಯ ಬಲ್ಲಾಳ್ ಮಾತು ಕಥೆ ! | Oneindia kannada

      ರಂಗಭೂಮಿಯೆಂಬ ಬಲು ದೊಡ್ಡ ಸಾಗರದಲ್ಲಿ, ತನ್ನ ಮೊದಲ ಮೊದಲ ಪುಟ್ಟ ಹೆಜ್ಜೆಗಳನ್ನು ಇಡುತ್ತಿರುವ 'ರಂಗ ಮಂಥನ' ಎಂಬ ಈ ಪುಟ್ಟ ಕಂದ ಬೆಳೆಯಲು ನಿಮ್ಮೆಲರ ಪ್ರೀತಿ, ಆರೈಕೆ, ಹಾರೈಕೆ ಸದಾ ಬೇಕು. ದಯಮಾಡಿ ಎಲ್ಲರೂ ಬನ್ನಿ, ನಮ್ಮೀ ಹೊಸ ರಂಗ ಪ್ರಯೋಗಕ್ಕೆ ಸಾಕ್ಷಿಯಾಗಿ ಹರಸಿ ಎಂದು ರಂಗ ಮಂಥನ ತಂಡ ಕೋರಿದೆ. ಗಮನಿಸಿ: ರಂಗಶಂಕರ ಸಮಯ ಬದಲಾಗಿದ್ದು, 7ಗಂಟೆಗೆ ಸರಿಯಾಗಿ ನಾಟಕ ಪ್ರದರ್ಶನ ಆರಂಭವಾಗಲಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+