ಯಡಿಯೂರಪ್ಪಗೆ ಎಸ್ಸೆಂ ಕೃಷ್ಣ ನೀಡಿದ್ದು ನಂಜುಂಡೇಶ್ವರನ ಪ್ರಸಾದವಾ?
Recommended Video
ಬೆಂಗಳೂರು, ಜುಲೈ 26 : ರಾಜ್ಯದ ಇಪ್ಪತ್ತೈದನೇ ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ ಬಿ. ಎಸ್. ಯಡಿಯೂರಪ್ಪ ಅವರಿಗೆ ಮಾಜಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅವರು ಶುಕ್ರವಾರ ತಮ್ಮ ಜೇಬಿನಿಂದ ತೆಗೆದುಕೊಟ್ಟಿದ್ದೇನು ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ.
ರಾಜಭವನದ ಗಾಜಿನ ಮನೆಯಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಹಲವು ಗಣ್ಯರು ಆಗಮಿಸಿ, ಹಸ್ತಲಾಘವ ಮಾಡಿ, ಶುಭ ಹಾರೈಸಿ, ಕಾರ್ಯಕ್ರಮದಲ್ಲಿ ಆಸೀನರಾಗಿ ಪ್ರಮಾಣವಚನದ ಶುಭ ಗಳಿಗೆಗೆ ಸಾಕ್ಷಿಯಾದರು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ನ ಮುಖಂಡ ಕೆ.ಎನ್.ರಾಜಣ್ಣ, ಶಾಸಕ ರೋಷನ್ ಬೇಗ್ ಕಾಣಿಸಿಕೊಂಡಿದ್ದು ಅಚ್ಚರಿಯನ್ನುಂಟು ಮಾಡಿತ್ತು. ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು.
LIVE: ನೇಕಾರರಿಗೆ, ರೈತರಿಗೆ ಭರ್ಜರಿ ಗಿಫ್ಟ್ ಕೊಟ್ಟ ಸಿಎಂ ಯಡಿಯೂರಪ್ಪ
ಇದೆಲ್ಲದರ ನಡುವೆ ಎಸ್ಸೆಂ ಕೃಷ್ಣ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು. ಅಷ್ಟೇ ಅಲ್ಲ, ಯಡಿಯೂರಪ್ಪ ಅವರೊಂದಿಗೆ ಮಾತನಾಡಿ, ಹಸ್ತಲಾಘವ ಮಾಡಿದ ಅವರು, ತಾವು ತಂದಿದ್ದ ಪುಟ್ಟ ಕವರೊಂದನ್ನು ಜೇಬಿನಿಂದ ತೆಗೆದು ನೀಡಿದ್ದು ನೋಡುಗರ ಗಮನ ಸೆಳೆಯಿತು. ಅದೇ ವೇಳೆ ಕೊಟ್ಟಿದ್ದೇನು ಎಂಬ ಕುತೂಹಲವೂ ಎಲ್ಲರಲ್ಲಿ ಉಳಿದು ಹೋಯಿತು.
ಆದರೆ, ಅವರು ನೀಡಿದ್ದು ದೇವರ ಪ್ರಸಾದ ಎಂಬುದಂತೂ ಸತ್ಯ. ಏಕೆಂದರೆ ಅವರು ಸಂಜೆ ಮೈಸೂರಿನ ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ದೇಗುಲಕ್ಕೆ ತಮ್ಮ ಕುಟುಂಬ ಸಮೇತ ಆಗಮಿಸಿದ್ದರು. ಅಲ್ಲದೆ ದೇವರ ದರ್ಶನ ಪಡೆದು, ವಿಶೇಷ ಪೂಜೆಯನ್ನು ಸಲ್ಲಿಸಿದ್ದರು.
ಈ ಪೂಜಾ ಕಾರ್ಯಕ್ರಮದ ಬಳಿಕ ಬೆಂಗಳೂರಿಗೆ ತೆರಳಿ, ಯಡಿಯೂರಪ್ಪ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದರಿಂದ ನಂಜುಂಡೇಶ್ವರನ ಪ್ರಸಾದವನ್ನು ನೀಡಿರಬಹುದು ಎಂಬುದು ಸದ್ಯದ ಮಟ್ಟಿಗೆ ಚರ್ಚೆಯಲ್ಲಿದೆ.