ಮದುವೆಗೆ ನಿರಾಕರಿಸಿದ ಯುವತಿಗೆ ಚಾಕುವಿನಿಂದ ಇರಿದ ಪಾಗಲ್ ಪ್ರೇಮಿ!
ಬೆಂಗಳೂರು, ಫೆ. 11: ಮದುವೆ ನಿರಾಕರಿಸಿದ ಪ್ರಿಯತಮೆಗೆ ಪಾಗಲ್ ಪ್ರೇಮಿ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ಪ್ರಭಾವತಿ ಚಾಕು ಇರಿತಕ್ಕೆ ಒಳಗಾದ ಯುವತಿ. ಗಿರೀಶ್ ಚಾಕು ಇರಿದು ಪರಾರಿಯಾಗಿರುವ ಯುವಕ. ದೊಡ್ಡಬಳ್ಳಾಪುರ ಪಟ್ಟಣದ ಯೋಗಿ ನಾರಾಯಣ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಆಗಿದ್ದ ಪ್ರಭಾವತಿಯನ್ನು ಅದೇ ಆಸ್ಪತ್ರೆಯಲ್ಲಿ ಅಕೌಂಟೆಂಟ್ ಆಗಿದ್ದ ಗಿರೀಶ್ ಪ್ರೀತಿ ಮಾಡುತ್ತಿದ್ದ. ಇಬ್ಬರೂ ಪರಸ್ಪರ ಒಪ್ಪಿ ಮದುವೆ ತೀರ್ಮಾನಕ್ಕೆ ಬಂದಿದ್ದರು. ಎರಡೂ ಕುಟುಂಬ ಮದುವೆ ಮಾತುಕತೆ ನಡೆಸಿತ್ತು. ಕೆಲ ದಿನಗಳ ಹಿಂದೆ ಪ್ರಭಾವತಿ ಕುಟುಂಬ ಮದುವೆ ಮಾಡಲು ನಿರಾಕರಿಸಿದೆ.
ಇದರಿಂದ ಮನನೊಂದ ಗಿರೀಶ್ ಏಕಾಏಕಿ ಪ್ರಭಾವತಿ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಬೆನ್ನು, ಕುತ್ತಿಗೆ ಎದೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದು, ಪ್ರಭಾವತಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದೊಡ್ಡಬಳ್ಳಾಪುರ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

ಒಂದು ಪ್ರಕರಣ ಬೆನ್ನಟ್ಟಿದ ಪೊಲೀಸರಿಗೆ ಸಿಕ್ಕಿದ್ದು 30 ಕೇಸ್ !:
ಸರಗಳ್ಳತನಕ್ಕೆ ಸಂಬಂಧಿಸಿದಂತೆ ಕಳ್ಳನನ್ನು ಬೆನ್ನಟ್ಟಿದ ಬಾಗಲಗುಂಟೆ ಪೊಲೀಸರು ಬೆಂಗಳೂರಿನ ಸರಗಳ್ಳ ಜಾಲವನ್ನೇ ಪತ್ತೆ ಮಾಡಿದ್ದಾರೆ. ಏಳು ಆರೋಪಿಗಳನ್ನು ಬಂಧಿಸಿ 30 ಸರಗಳ್ಳತನ ಪ್ರಕರಣ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಾಗಲಗುಂಟೆ ಪೊಲೀಸರ ಈ ಕಾರ್ಯವನ್ನು ಉತ್ತರ ವಿಭಾಗದ ಡಿಸಿಪಿ ಪ್ರಶಂಸೆ ಮಾಡಿದ್ದಾರೆ.
ಕಳೆದ ಜನವರಿಯಲ್ಲಿ ಶಾಲೆ ಶಿಕ್ಷಕಿ ಸರಗಳ್ಳತನವಾಗಿತ್ತು. ಸಿಸಿಟಿವಿ ಆಧರಿಸಿ ಬೆನ್ನಟ್ಟಿದ ಪೊಲೀಸರು ಮಂಜು, ದೀಪಕ್ ಮನು, ಮುನಿಸ್ವಾಮಿ ಸೇರಿ ಏಳು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ನಾಲ್ಕು ವಾಹನ, 45 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಏಳು ಮಂದಿ ಬಂಧನದಿಂದ ಏಳು ಸುಲಿಗೆ ಪ್ರಕರಣ, 22 ಸರಗಳ್ಳತನ ಪ್ರಕರಣ ಪತ್ತೆಯಾದಂತಾಗಿದೆ.
ಕದ್ದ ಬೈಕ್ನಲ್ಲಿ 65 ಮೊಬೈಲ್ ಕಸಿದಿದ್ದ ಭೂಪ ಸೆರೆ: ಬೆಂಗಳೂರಿನಲ್ಲಿ ಕದ್ದ ಬೈಕ್ ಬಳಿಸಿ ಸಾರ್ವಜನಿಕರಿಂದ 65 ಮೊಬೈಲ್ ಕದ್ದಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಸಯ್ಯದ್ ಫಯಾಜ್ ಬಂಧಿತ ಆರೋಪಿ. ಈತ ಜಯನಗರದ ಸುತ್ತ ಮುತ್ತ ಪ್ರದೇಶದಲ್ಲಿ ಓಡಾಡುವವರನ್ನು ಟಾರ್ಗೆಟ್ ಮಾಡಿ ಮೊಬೈಲ್ ಕದಿಯುತ್ತಿದ್ದ. ಕದ್ದ ಬೈಕಿನಲ್ಲಿ ಬರೋಬ್ಬರಿ 65 ಮೊಬೈಲ್ ಕಸಿದು ಎಸ್ಕೇಪ್ ಆಗಿದ್ದ. ಆರೋಪಿಯ ಸಿಸಿಟಿವಿ ದೃಶ್ಯ ಆಧರಿಸಿ ಜಯನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 15 ಲಕ್ಷ ರೂ. ಮೌಲ್ಯದ 65 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.












Click it and Unblock the Notifications