ಬಾಡಿ ಬಿಲ್ಡರ್ ಹತ್ಯೆ: ಪತ್ನಿ, ಮಗಳ ರೇಪ್ ಮಾಡುತ್ತೇನೆ ಎಂದಿದ್ದ ಸೈಯದ್
ಬೆಂಗಳೂರು, ನವೆಂಬರ್ 29: ಶಿವಾಜಿನಗರ ಅಕ್ವೇರಿಯಂ ಅಂಗಡಿ ಮಾಲೀಕ ಸೈಯದ್ ಇರ್ಫಾನ್ ಕೊಲೆ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ.
ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಇರ್ಫಾನ್ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು ಆತನನ್ನು ಕೊಲೆ ಮಾಡಲಾಗಿದೆ. ಓಲ್ಡ್ ಸಿಮೆಟ್ರಿ ರಸ್ತೆಯಲ್ಲಿ ನವೆಂಬರ್ 19ರಂದು ನಡೆದಿದ್ದ ಸೈಯದ್ ಇರ್ಫಾನ್ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದ ಶಿವಾಜಿನಗರ ಠಾಣೆ ಪೊಲೀಸರು, ಪ್ರಕರಣದ ಸಂಬಂಧ ಐವರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಈ ಮಾಹಿತಿ ಬಾಯ್ಬಿಟ್ಟಿದ್ದಾರೆ.
ಇರ್ಫಾನ್ ಸಾಲ ಪಡೆದವರಿಂದ ಶೇ.30ರಷ್ಟು ಬಡ್ಡಿ ವಸೂಲಿ ಮಾಡುತ್ತಿದ್ದ. ಅದರಂತೆ ಮನೆ ನಿರ್ಮಾಣಕ್ಕೆಂದು ಗುತ್ತಿಗೆದಾರ ಇರ್ಫಾನ್ ಷರೀಫ್ ಗೆ ಮುಂಗಡವಾಗಿ 30 ಲಕ್ಷ ರೂ ನೀಡಿದ್ದ, ಜತೆಗೆ ಆತನಿಗೆ ಶೇ. 30ರಷ್ಟು ಬಡ್ಡಿಗೆ 10 ಲಕ್ಷ ರೂ ಸಾಲ ನೀಡಿದ್ದ.

ಆದರೆ ಷರೀಫ್ ಬಡ್ಡಿ ಕಟ್ಟಲು ವಿಫಲನಾಗಿದ್ದ, ಬಡ್ಡಿಗೆ ಬಡ್ಡಿ ಸೇರಿ ಸಾಲದ ಮೊತ್ತ 50 ಲಕ್ಷ ರೂ ಆಗಿತ್ತು. ಅದೇ ಹಣದಲ್ಲಿ ಮನೆ ನಿರ್ಮಾಣ ಪೂರ್ಣಗೊಳಿಸುವಂತೆ ಇರ್ಫಾನ್ ಕಿರುಕುಳ ನೀಡುತ್ತಿದ್ದ, ಜತೆಗೆ ಹಣ ವಾಪಸ್ ನೀಡದಿದ್ದರೆ ಪತ್ನಿ ಹಾಗೂ ಮಗಳನ್ನು ರೇಪ್ ಮಾಡಿ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಒಡ್ಡಿದ್ದ ಎಂದು ವಿಚಾರಣೆ ವೇಳೆ ಆರೋಪಿಗಳು ಈ ವಿಷಯ ಬಾಯ್ಬಿಟ್ಟಿದ್ದಾರೆ.
ಆರೋಪಿ ಇರ್ಫಾನ್ ಚರೀಫ್ ಹಾಗೂ ಬರ್ಖತ್ ಅಹ್ಮದ್ ಕೆಲ ದಿನಗಳ ಹಿಂದೆ ಜತೆಯಲ್ಲಿದ್ದಾಗಲೇ ಇರ್ಫಾನ್ ಫೋನ್ ಮಾಡಿ, ಹಣ ನೀಡುವಂತೆ ಅವಾಚ್ಯವಾಗಿ ನಿಂದಿಸಿದ್ದ, ಹೀಗಾಗಿ ಷರೀಫ್, ಮೀಟರ್ ಬಡ್ಡಿಗೆ ಇದುವರೆಗೂ ಹಲವು ಲಕ್ಷ ರೂ ಕಟ್ಟಿದ್ದೇನೆ, ದುಡಿದ ಹಣವೆಲ್ಲಾ ಆತನಿಗೆ ಕೊಡಬೇಕಾಗಿ ಬಂದಿದೆ, ಹೀಗಿದ್ದರೂ ಕಿರುಕುಳ ನಿಲ್ಲಿಸಿಲ್ಲ ಎಂದು ಬರ್ಖತ್ ಬಳಿ ಹೇಳಿಕೊಂಡಿದ್ದ.
ಈ ವೇಳೆ ಬರ್ಖತ್ , ಇರ್ಫಾನ್ನನ್ನು ಮುಗಿಸಲು ಹೇಳಿ, ಇತರ ಆರೋಪಿಗಳ ಜತೆ ಸೇರಿ ಒಳಸಂಚು ರೂಪಿಸಿದ್ದ, ಅದರಣತೆ ನವೆಂಬರ್ 19ರಂದು ರಾತ್ರಿ 11.55ರ ಸುಮಾರಿಗೆ ಓಲ್ಡ್ ಸಿಮೆಟ್ರಿ ರಸ್ತೆಯಲ್ಲಿ ಇರ್ಫಾನ್ ನಿಂತಿದ್ದಾಗ, ಹೆಲ್ಮೆಟ್ ಧರಿಸಿ ಬೈಕ್ ಗಳಲ್ಲಿ ಬಂದು ಮಾರಕಾಸ್ತ್ರಗಳಿಂದ ಇರಿದು ಆತನನ್ನು ಕೊಲೆ ಮಾಡಿದ್ದರು.












Click it and Unblock the Notifications