ನಷ್ಟದಿಂದ ಪಾರಾಗಲು ಮಾರ್ಗಕ್ಕೆ ಕತ್ತರಿ ಹಾಕಲಿದೆ ಬಿಎಂಟಿಸಿ!
ಬೆಂಗಳೂರು, ಆಗಸ್ಟ್ 23 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಷ್ಟದಿಂದ ಹೊರಬರಲು ಸೂತ್ರವೊಂದನ್ನು ಸಿದ್ಧಪಡಿಸಿದೆ. 150 ರಿಂದ 200 ಮಾರ್ಗಗಳ ಸಂಚಾರವನ್ನು ಬದಲಿಸಲು ಯೋಜನೆ ರೂಪಿಸಿದೆ.
ನಮ್ಮ ಮೆಟ್ರೋ, ಖಾಸಗಿ ವಾಹನಗಳು, ಕಾರ್ ಪೂಲಿಂಗ್, ಕ್ಯಾಬ್ ಸೇವೆಗಳ ಬಳಕೆಯಿಂದಾಗಿ ಬಿಎಂಟಿಸಿ ನಷ್ಟದ ಹಾದಿಯಲ್ಲಿ ಸಾಗುತ್ತಿದೆ. ನಷ್ಟದಿಂದ ಹೊರಬರಲು ಸಂಸ್ಥೆ ದಾರಿಯನ್ನು ಹುಡುಕುತ್ತಿದೆ. ಇದರ ಭಾಗವಾಗಿ ಮಾರ್ಗಕ್ಕೆ ಕತ್ತರಿ ಹಾಕಲು ಮುಂದಾಗಿದೆ.
ವಿವಿಧ ಮಾರ್ಗಗಳಲ್ಲಿ ನಡೆಸಿದ ಸಮೀಕ್ಷೆಗಳ ಬಳಿಕ ಬಿಎಂಟಿಸಿ ಹಲವು ಮಾರ್ಗಗಳನ್ನು ಬದಲಾವಣೆ ಮಾಡಲು ನಿರ್ಧರಿಸಿದೆ. ನಷ್ಟ ಅನುಭವಿಸುತ್ತಿರುವ ಮಾರ್ಗವನ್ನು ಅಕ್ಕ-ಪಕ್ಕದ ಮಾರ್ಗದೊಂದಿಗೆ ವಿಲೀನ ಮಾಡಲಾಗುತ್ತದೆ.

ಬಿಎಂಟಿಸಿ 150 ರಿಂದ 200 ಮಾರ್ಗಗಳನ್ನು ಬದಲಾವಣೆ ಮಾಡಲಿದ್ದು, ಸೆಪ್ಟೆಂಬರ್ ಅಂತ್ಯದೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಯಾವುದೇ ಮಾರ್ಗದಲ್ಲಿ ಹೆಚ್ಚು ನಷ್ಟ ಆಗುತ್ತಿದ್ದರೆ, ಅದನ್ನು ರದ್ದು ಅಥವ ಬೇರೆ ಮಾರ್ಗದೊಂದಿಗೆ ವಿಲೀನ ಮಾಡಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
'ಹಲವು ಬಾರಿ ಜನರ ಬೇಡಿಕೆಯಂತೆ, ಕೆಲವು ಬಾರಿ ಜನಪ್ರತಿನಿಧಿಗಳ ಬೇಡಿಕೆಯಂತೆ ಕೆಲವು ಮಾರ್ಗಗಳಲ್ಲಿ ಬಸ್ ಓಡಿಸಲಾಗುತ್ತಿದೆ. ಈ ಮಾರ್ಗದಲ್ಲಿ ನಷ್ಟ ಆಗುತ್ತಿದ್ದರೆ ಸೇವೆಯನ್ನು ವಾಪಸ್ ಪಡೆಯುವುದು ಅನಿವಾರ್ಯವಾಗಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ವಾಯುವಜ್ರ ಬಸ್ ಸೇವೆ : ಬಿಎಂಟಿಸಿ ಆ.22ರಂದು ಹೊಸ ವಾಯುವಜ್ರ ಬಸ್ ಮಾರ್ಗವನ್ನು ಘೋಷಣೆ ಮಾಡಿದೆ. ಕೆಐಎಎಸ್-8ಇ, ಕೆಐಎಎಸ್-14 ಮಾರ್ಗದಲ್ಲಿ ವಾಯುವಜ್ರ ವೊಲ್ವೋ ಬಸ್ಸುಗಳು ಸಂಚಾರ ನಡೆಸಲಿವೆ.
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿಯ ವಿಪ್ರೋಗೇಟ್ ತನಕ ಈ ಬಸ್ಸುಗಳು ಸಂಚಾರ ನಡೆಸಲಿವೆ. ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲ ಈ ಬಸ್ಸುಗಳು ಸಂಚರಿಸಲಿವೆ.












Click it and Unblock the Notifications