ದೊಡ್ಡಬಳ್ಳಾಪುರದಲ್ಲಿ ಸೆ.10ಕ್ಕೆ 'ಜನಸ್ಪಂದನ': ಸೆ.11ರ ಕಂಟಕಕ್ಕೆ ಬೆದರಿತಾ ಬಿಜೆಪಿ?
ಬೆಂಗಳೂರು, ಸೆಪ್ಟೆಂಬರ್ 08: ಬಿಜೆಪಿಯ ಜನೋತ್ಸವಕ್ಕೆ ಮೂರನೇ ಸಲ ಮುಂದೂಡಿಕೆಯಾಗಿದೆ. ಜನೋತ್ಸವವನ್ನು ಮಾಡಬೇಕೆಂದು ದಿನಾಂಕ ನಿಗದಿ ಮಾಡಿದಾಗಲೆಲ್ಲಾ ಒಂದಲ್ಲ ಒಂದು ಕಂಟಕ ಬಿಜೆಪಿಗೆ ಎದುರಾಗುತ್ತಿದೆ. ಇದಕ್ಕಾಗಿ ಜನೋತ್ಸವದ ಹೆಸರನ್ನೇ ಬದಲಾಯಿಸಿ ಜನಸ್ಪಂದನ ಅನ್ನೋ ಹೆಸರಿನಲ್ಲಿ ಸೆ. 10ರಂದು ಕಾರ್ಯಕ್ರಮವನ್ನು ಮಾಡಲು ಬಿಜೆಪಿ ಸನ್ನದ್ದವಾಗುತ್ತಿದೆ.
ಬಿಜೆಪಿ ಕಾಂಗ್ರೆಸ್ಗೆ ಟಕ್ಕರ್ ಕೊಡಲು ಜನೋತ್ಸವ ಕಾರ್ಯಕ್ರಮವನ್ನು ಆಯೋಜನೆಯನ್ನು ಮಾಡಿಕೊಳ್ಳಲಾಗಿತ್ತು. ಸಿದ್ದರಾಮಯ್ಯರವವ ಹುಟ್ಟುಹಬ್ಬ ದಿನ ದಾವಣಗೆರೆಯಲ್ಲಿ ಕಾಂಗ್ರೆಸ್ ಭರ್ಜರಿ ಸಮಾವೇಶಕ್ಕೆ ಅಣಿಯಾಗಿತ್ತು. ಸಿದ್ದರಾಮೋತ್ಸವಕ್ಕೆ ಪರ್ಯಾಯವಾಗಿ ಬಿಜೆಪಿ ಜನೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಟಕ್ಕರ್ ಕೊಡಲು ಆಲೋಚನೆಯನ್ನು ಮಾಡಲಾಗಿತ್ತು.
ಸಿದ್ದರಾಮೋತ್ಸವ ಆಗಸ್ಟ್ 3 ರಂದು ದಾವಣಗೆರೆಯಲ್ಲಿ ಯಶಸ್ವಿಯಾಗಿ ಮಾಡಲಾಯಿತು. ಆದರೆ ಬಿಜೆಪಿ ಹೈಕಮಾಂಡ್ ನಾಯಕರು ಬಾರದ ಹಿನ್ನೆಲೆ ಸೇರಿದಂತೆ ಬೇರೆಬೇರೆ ಕಾರಣದಿಂದಾಗಿ ಬಿಜೆಪಿಯ ಜನೋತ್ಸವ ಕಾರ್ಯಕ್ರಮವನ್ನು ಮುಂದೂಡಲಾಗಿರುತ್ತದೆ. ಬಿಜೆಪಿ ನಾಯಕರು ರಾಜ್ಯದಲ್ಲಿ ತಮ್ಮ ಶಕ್ತಿ ಮತ್ತು ತಾವು ಮೂರು ವರ್ಷದಲ್ಲಿ ಮಾಡಿರುವ ಕಾರ್ಯಕ್ರಮವನ್ನು ಜನರಿಗೆ ತಿಳಿಸಲು ಜನೋತ್ಸವವನ್ನ ಮಾಡುಲು ತೀರ್ಮಾನಿಸಿದ್ದರು ಕಾರ್ಯಕ್ರಮಕ್ಕೆ ಅಡಚಣೆ ಉಂಟಾಗುತ್ತಲೇ ಇದೆ.
ಸೆ. 11ಕ್ಕೆ ಅಲ್ಲ ಸೆ. 10ಕ್ಕೆ ಜನ ಸ್ಪಂದನ
ಜನೋತ್ಸವದ ಬದಲು ಇದೀಗ ಜನಸ್ಪಂದನ ಎಂದು ಹೆಸರನ್ನು ಬದಲಾಯಿಸಲಾಗಿದೆ. ಬಿಜೆಪಿಯ ಜನೋತ್ಸವ ಕಾರ್ಯಕ್ರಮದ ಟೈಟಲ್ ನಿಂದಾಗಿಯೇ ಪದೇ ಪದೇ ಕಾರ್ಯಕ್ರಮಕ್ಕೆ ಅಡ್ಡಿಯಾಗ್ತಿದೆ ಎಂದು ಬೆದರಿದ ಬಿಜೆಪಿ ಕಾರ್ಯಕ್ರಮದ ಟೈಟಲೇ ಚೇಂಜ್ ಮಾಡಿದೆ. ಕೇಸರಿ ಬ್ರಿಗೇಡ್ ಜನೋತ್ಸವದ ಬದಲಾಗಿ ಜನಸ್ಪಂದನ ಎಂದು ಹೆಸರನ್ನ ಬದಲಾಯಿಸಿದೆ. 8 ನೇ ತಾರೀಖು ನಡೆಯಬೇಕಿದ್ದ ಕಾರ್ಯಕ್ರಮ 10 ಕ್ಕೆ ಬದಲಾವಣೆಯಾಗಿದೆ.
ಸೆಪ್ಟೆಂಬರ್ 11ಕ್ಕೆ ಕಂಟಕಕ್ಕೆ ಬೆದರಿದ ಬಿಜೆಪಿ
ಉಮೇಶ್ ಕತ್ತಿಯವರ ನಿಧನದಿಂದ ಕಾರ್ಯಕ್ರಮ ಮುಂದೂಡಿಕೆ ಮಾಡಲಾಗಿದೆ. ಸೆಪ್ಟೆಂಬರ್ 8ಕ್ಕೆ ನಡೆಯಬೇಕಿದ್ದ ದೊಡ್ಡಬಳ್ಳಾಪುರದ ಜನೋತ್ಸವ ಕಾರ್ಯಕ್ರಮ ಸೆಪ್ಟಂಬರ್ 6 ರಂದು ಉಮೇಶ್ ಕತ್ತಿ ನಿಧನದಿಂದ ಮುಂದೂಡಿಕೆ ಮಾಡಲಾಗಿದೆ. ಇದಕ್ಕಾಗಿ ಸಿಎಂ ಬಸವರಾಜ ಬೊಮ್ಮಾಯಿ ಸೆಪ್ಟೆಂಬರ್ 11ಕ್ಕೆ ಜನೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದರು. ರಾಜ್ಯಾಧ್ಯಕ್ಷ ಕಟೀಲು ಸಹ ಬಹಳ ಗೊಂದಲದಲ್ಲಿ ಕಾರ್ಯಕ್ರಮದ ದಿನಾಂಕವನ್ನು ಟ್ವೀಟ್ ಮಾಡಿದ್ದರು. ಇನ್ನು ಕಾರ್ಯಕ್ರಮದ ಉಸ್ತುವಾರಿ ಡಾ. ಕೆ ಸುಧಾಕರ್ ಸಹ ಬಹಳ ಗೊಂದಲದೊಂದಿಗೆ ಕಾರ್ಯಕ್ರಮದ ವಿವರವನ್ನು ಟ್ವಿಟರ್ನಲ್ಲಿ ಹಾಕಿದ್ದರು. ಇದೀಗ ಮತ್ತೆ ಟ್ವೀಟ್ ಡಿಲೀಟ್ ಮಾಡಿ ಮತ್ತೊಂದು ದಿನಾಂಕ ಹಾಕಿದ್ದಾರೆ. ಸದ್ಯ ಗೊಂದಲಮಯವಾದ ಬಿಜೆಪಿಯ ಜನೋತ್ಸವದಿಂದ ಬದಲಾದ ಜನಸ್ಪಂದನ ಕಾರ್ಯಕ್ರಮ ಇದೀಗ ಎಲ್ಲಾ ಅಡ್ಡಿ ಅತಂಕದ ನಡುವೆ ಶನಿವಾರಕ್ಕೆ ಜನಸ್ಪಂದನ ಕಾರ್ಯಕ್ರಮ ನಿಗದಿಯಾಗಿದೆ.
ಪಿತೃಪಕ್ಷದಲ್ಲಿ ಶುಭಕಾರ್ಯ ಬೇಡ ಎಂದು ಪ್ರೀಪೋನ್
ಸಿದ್ದರಾಮೋತ್ಯವದ ವೇಳೆಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮ ಕಾರಣಾಂತರಗಳಿಂದ ಮುಂದೂಡಿಕೆಯಾಗಿತ್ತು. ಇನ್ನು ಬಿಜೆಪಿ ಕಟ್ಟರ್ ಬೆಂಬಲಿಗೆ ಪ್ರವೀಣ್ ನೆಟ್ಟಾರು ಕೊಲೆಯಿಂದಾಗಿ ಬಿಜೆಪಿಯ ಕಾರ್ಯಕರ್ತರು ನಿಗಿ ನಿಗಿ ಕೆಂಡವಾಗಿ ಹೋಗಿದ್ದರು. ಕಾರ್ಯಕರ್ತರ ಆಕ್ರೋಶಕ್ಕೆ ಬೆದರಿದ ಬಿಜೆಪಿ ರಾತ್ರೋರಾತ್ರಿ ಕಾರ್ಯಕ್ರಮವನ್ನು ರದ್ದು ಮಾಡಿ ಸೆಪ್ಟಂಬರ್ 8ಕ್ಕೆ ಕಾರ್ಯಕ್ರಮವನ್ನು ನಿಗದಿ ಮಾಡಿದ್ದರು. ಆದರೆ ಸಚಿವ ಉಮೇಶ್ ಕತ್ತಿ ಅಕಾಲಿಕ ನಿಧನದಿಂದ ಮತ್ತೊಮ್ಮೆ ಕಾರ್ಯಕ್ರಮವನ್ನು ಮುಂದೂಡಿಕೆ ಮಾಡಿದ್ದರು. ಸಿಎಂ ಸೆ. 11ಕ್ಕೆ ಜನೋತ್ಸವ ಕಾರ್ಯಕ್ರಮ ಎಂದು ಹೇಳಿದ್ದರು. ಆದರೆ, ಇದೀಗ ಸೆ.10ಕ್ಕೆ ಜನೋತ್ಸವ ಹೆಸರನ್ನು ಬದಲಾಯಿಸಿ ಜನಸ್ಪಂದನ ಹೆಸರಿನಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ. ಇದಕ್ಕೆ ಕಾರ್ಯಕ್ರಮವನ್ನು ಭಾನುವಾರದ ಬದಲು ಶನಿವಾರ ನಡೆಸಲು ಕಾರಣವಾಗಿದ್ದು ಸೆ. 11ರ ಕಂಟಕ. ಸೆ. 11ರಂದು ಪಿತೃಪಕ್ಷ ಆರಂಭವಾಗುವ ಕಾರಣ ಆ ದಿನದ ಬದಲು ಒಂದು ದಿನ ಮೊದಲೇ ಜನಸ್ಪಂದನ ಕಾರ್ಯಕ್ರಮಕ್ಕೆ ಬಿಜೆಪಿ ಸಿದ್ದತೆ ಮಾಡಿಕೊಳ್ಳುತ್ತಿದೆ.
ಸಿಎಂ ಜೋತಿಷಿಗಳ, ಅಥವಾ ಶಾನುಭೋಗರ?
"ಸೆ.11ಕ್ಕೆ ಭಾನುವಾರ ರಜೆ ಇರುತ್ತೆ ಅಂತ ಸಿಎಂ ಅಧ್ಯಕ್ಷರು ಚರ್ಚೆ ಮಾಡಿಕೊಂಡಿದ್ದರು. ಪಿತೃ ಪಕ್ಷ ಆರಂಭ ಆಗುತ್ತದೆ. ಅಶುಭ ದಿನ ಇದೆ ಎಂದು ಒಳ್ಳೆ ಕೆಲಸ ಮಾಡುವುದು ಬೇಡ ಅಂತ ಪ್ರೀ ಪೋನ್ ಮಾಡಿಕೊಂಡಿದ್ದೇವೆ. ನಮ್ಮ ಎಲ್ಲಾ ಸಚಿವರು ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ.
ಮೂರು ವರ್ಷಗಳ ರಿಪೋರ್ಟ್ ಕಾರ್ಡ್ ಇಡುತ್ತೇವೆ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ, ಯಡಿಯೂರಪ್ಪ ಅವರ ನೇತೃತ್ವದಲ್ಲಿ ಹೇಗೆ ಕೆಲಸ ಮಾಡಿತ್ತು ಎಂದು ಇಡುತ್ತೇವೆ. ಸಿಎಂ 11 ತಾರೀಕು ದಿನಾಂಕ ಘೋಷಣೆ ಮಾಡಿದಾಗ ಅವರಿಗೆ ಪಿತೃಪಕ್ಷ ಅಂತ ಗೊತ್ತಿರಲಿಲ್ಲ.
ಅವರೇನು ಜೋತಿಷಿಗಳ, ಅಥವಾ ಶಾನುಭೋಗರ? ಅಮೇಲೆ ತಿಳುವಳಿಕೆ ಇರುವವರು ಹೇಳಿದರು ಒಳ್ಳೆ ದಿನ ಮಾಡೋಣ ಅಂತ ಸರ್ಕಾರಕ್ಕೆ ಒಳ್ಳೆದು ಆಗಬೇಕು ಜನರಿಗೆ ಒಳ್ಳೆದು ಆಗಬೇಕು. ಎಷ್ಟೋ ಸಂಧರ್ಭದಲ್ಲಿ ಮದುವೆಗೆ ಜೋತಿಷಿಗಳು ಒಂದು ದಿನಾಂಕ ಕೊಟ್ಟಿರುತ್ತಾರೆ. ಇನ್ನೊಂದು ಇಬ್ಬರು ಸೇರಿಕೊಂಡು ಇನ್ನೊಂದು ಒಳ್ಳೆ ಡೇಟ್ ಇದೆ ಅಂತ ಕೊಡುತ್ತಾರೆ. ಅವಾಗ ಬದಲಾವಣೆ ಮಾಡಿಕೊಳ್ಳಲ್ವಾ. ಜನೋತ್ಸವ ಎನ್ನುವುದು ಹಬ್ಬದ ವಾತಾವರಣ ಅತಿವೃಷ್ಟಿಯಲ್ಲಿ ಹಬ್ಬ ಎನ್ನುವ ಪದ ಬಳಸದೆ ಜನ ಸ್ಪಂದನ ಕಾರ್ಯಕ್ರಮ ಮಾಡಬೇಕು ಎಂದು ಮಾಡಿರುವುದು. ಕೋವಿಡ್ ಸಂದರ್ಭದಲ್ಲಿ, ಅಭಿವೃದ್ಧಿ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಸ್ಪಂದಿಸಿದೆ. ಹಾಗಾಗಿ ಸರ್ಕಾರ ಯಾವ ರೀತಿಯ ಸ್ಪಂದನ ನೀಡಿದೆ ಎನ್ನುವುದಕ್ಕೆ ಈ ಹೆಸರು ಬದಲಾವಣೆಗೆ ಕಾರಣ ಹೆಸರಿನಲ್ಲಿ ದೋಷ ಏನೂ ಇರಲಿಲ್ಲ. ಯಾವ ಹೆಸರು ಇದ್ದರೆ ಏನು? ಜನರ ಕಾರ್ಯಕ್ರಮ ಇದು ಅಷ್ಟೇ. ಸಿಎಂ 10 ನೇ ತಾರೀಖಿನಂದು ಏನು ಹೇಳುತ್ತಾರೆ ಎಂದು ನೋಡಬೇಕು ಅವರ ಬಾಯಿನಲ್ಲಿ ನೀವೇ ಕೇಳಿಸಿಕೊಳ್ಳಬೇಕು" ಎಂದು ಆರೋಗ್ಯ ಸಚಿವ ಮತ್ತು ಜನಸ್ಪಂದನ ಕಾರ್ಯಕ್ರಮದ ಉಸ್ತುವಾರಿ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.