ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಗಳು ವಾಸಕ್ಕೆ ಯೋಗ್ಯವಾಗಿಲ್ಲ: ವರದಿ
ಬೆಂಗಳೂರು, ಮಾರ್ಚ್ 10: ರಾಜ್ಯದ ಪರಿಶಿಷ್ಟ ಜಾತಿ ಮತ್ತು ಜನಾಂಗದ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ನಡೆಸುತ್ತಿರುವ ಹಾಸ್ಟೆಲ್ ಗಳು ವಾಸಕ್ಕೆ ಯೋಗ್ಯವಾಗಿಲ್ಲ ಎಂಬ ಕರಾಳ ಸತ್ಯವನ್ನು ಬಿಜೆಪಿ ಎಸ್ ಸಿ ಹಾಗೂ ಎಸ್ಟಿ ಮೋರ್ಚಾ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಎಲ್ಲ ಜಿಲ್ಲೆಗಳ 1080 ಪರಿಶಿಷ್ಟ ವಿದ್ಯಾರ್ಥಿಗಳ ಹಾಸ್ಟೆಲ್ ಹಾಗೂ 1,510 ಹಿಂದುಳಿದ ವರ್ಗದ ಮಕ್ಕಳ ಹಾಸ್ಟೆಲ್ ಗಳಲ್ಲಿ ಬಿಜೆಪಿ ಕಾರ್ಯಕರ್ತರ ಖುದ್ದು ಪರಿಶೀಲನೆ ನಡೆಸಿ ಸರ್ಕಾರಿ ಹಾಸ್ಟೆಲ್ ಸಮೀಕ್ಷಾ ವರದಿಯನ್ನು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಶುಕ್ರವಾರ ಬಿಡುಗಡೆ ಮಾಡಿದರು.
ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿ ನಡೆಯುತ್ತಿರುವ ಪರಿಶಿಷ್ಟ, ಹಿಂದುಳಿದ ವರ್ಗದ ವಿದ್ಯಾರ್ಥಿ ನಿಲಯಗಳು, ಮಹಿಳಾ ಹಾಸ್ಟೆಲ್ ಗಳು ಹಾಗೂ ವಸತಿ ಶಾಲೆಗಳ ಈ ನರಕ ಸದೃಶ ಸ್ಥಿತಿಯನ್ನು ರಾಜ್ಯ ಬಿಜೆಪಿ ಸಮೀಕ್ಷಾ ವರದಿ ಬಯಲು ಮಾಡಿದೆ.

ದೀನ ದಲಿತ, ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಗಳು ನರಕವಾಗಿದ್ದರೆ, ಅಧಿಕಾರಿಗಳು ಮತ್ತು ಮಂತ್ರಿಗಳ ಲೂಟಿಗೆ ಸ್ವರ್ಗವಾಗಿವೆ ಎಂದು ಸಮೀಕ್ಷಾ ವರದಿ ದೂರಿದೆ. ಸಮಾಜ ಕಲ್ಯಾಣ ಇಲಾಖೆ ನಿರ್ವಹಣೆಯಲ್ಲಿರುವ ಹಾಸ್ಟೆಲ್ ಸ್ಥಿತಿ ನರಕ ಸದೃಶವಾಗಿದ್ದು, ದಲಿತರ ಉದ್ಧಾರದ ಹೆಸರಿನಲ್ಲಿ ಸಾವಿರಾರು ಕೋಟಿ ಲೂಟಿಮಾಡಲಾಗಿದೆ ಎಂದು ಸಚಿವ ಡಿ.ವಿ. ಸದಾನಂದ ಗೌಡ ಕಟುವಾಗ್ದಾಳಿ ನಡೆಸಿದರು.
ಸಣ್ಣ ಮಕ್ಕಳಿಗೆ ನೀಡಬೇಕಾದ ಬೆಡ್ಶೀಟ್, ದಿಂಬು ಖರೀದಿ ಸಂಬಂಧ 25 ಕೋಟಿ ರೂ. ವ್ಯವಹಾರದಲ್ಲಿ 8 ಕೋಟಿ ರೂ. ಲೂಟಿಯಾಗಿದೆ. ಕಂಪ್ಯೂಟರ್ ಖರೀದಿ, ಸಮವಸ್ತ್ರ, ಶೂ-ಸಾಕ್ಸ್, ಟೈ, ಬೆಲ್ಟ್ , ಪಾತ್ರೆ -ಪರಿಕರ, ಆಹಾರ ಪದಾರ್ಥಗಳ ಖರೀದಿ ಸೇರಿದಂತೆ ಎಲ್ಲದರಲ್ಲೂ ಅಕ್ರಮ ನಡೆದಿದೆ.

ಟೆಂಡರ್ ಕರೆಯದೇ ಕಾಮಗಾರಿ ಗುತ್ತಿಗೆಗಳನ್ನು ನೀಡಲಾಗಿದೆ. ಈ ಬಗ್ಗೆ ವಿಧಾನಮಂಡಲ ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿಯೇ ವರದಿ ನೀಡಿದ್ದರೂ ಈವರೆಗೆ ತನಿಖೆ ನಡೆಸಿಲ್ಲ. ನಮ್ಮದು ಭ್ರಷ್ಟಾಚಾರ ರಹಿತ ಸರಕಾರ ಎಂದು ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯ ಅವರು ತಾಕತ್ತಿದ್ದರೆ ತನಿಖೆ ನಡೆಸಲಿ ಎಂದು ಸವಾಲು ಹಾಕಿದರು.
ಶಾಸಕ ಡಾ.ಅಶ್ವತ್ಥನಾರಾಯಣ, ಮೇಲ್ಮನೆ ಸದಸ್ಯ ಬಿ.ಜೆ.ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿ ರವಿಕುಮಾರ್ , ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ ಹಾಗೂ ನಟಿ ತಾರಾ ಅನುರಾಧ, ಶ್ರುತಿ, ಬೆಂಗಳೂರು ನಗರ ಬಿಜೆಪಿ ಎಸ್ಸಿ ಮೋರ್ಚ ಅಧ್ಯಕ್ಷ ಎಚ್. ಕೋದಂಡರಾಮ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.












Click it and Unblock the Notifications