ಆಮ್ ಆದ್ಮಿ ಕೇಜ್ರಿವಾಲಾಗೆ ಅನಂತಕುಮಾರ್ ಕಾನೂನು ಗುದ್ದು
ಬೆಂಗಳೂರು, ಫೆ.19: ಆಮ್ ಆದ್ಮಿ ಪಕ್ಷದ 'ರಾಜಕೀಯವನ್ನು' ಛೇಡಿಸುತ್ತಾ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ನಿನ್ನೆ ಶಿವಮೊಗ್ಗದಲ್ಲಿ ಅರವಿಂದ ಕೇಜ್ರಿವಾಲಾಗೆ ಗುದ್ದು ನೀಡಿದ್ದರು. ಆದರೆ ತಮ್ಮ ವಿರುದ್ಧ ಕೇಜ್ರಿವಾಲ್ ಮಾಡಿದ್ದ ಭಾರಿ ಪ್ರಮಾಣದ ಭ್ರಷ್ಟಾಚಾರ ಆರೋಪಕ್ಕೆ ಕುಮಾರಸ್ವಾಮಿ ಯಾವುದೇ ತಿರುಗೇಟು ನೀಡಿರಲಿಲ್ಲ. ದಾಖಲೆಯಿದ್ದರೆ ತೋರಿಸಿ ನೋಡೋಣ ಎಂದಿದ್ದರು.
ಆದರೆ ಇದೀಗ ಈ ವಿಷಯದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಅವರು ಲೋಕಸಭೆ ಚುನಾವಣೆ ಎದುರಿಗಿರುವಾಗ ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿರುವ ಅರವಿಂದ ಕೇಜ್ರಿವಾಲಾರನ್ನು ಕಾನೂನು ಮೂಲಕ ವಿಚಾರಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಅದಕ್ಕಾಗಿ ಕೇಜ್ರಿವಾಲ್ ವಿರುದ್ಧ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಅನಂತ ಕುಮಾರ್ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಅನಂತ ಕುಮಾರ್ ಅವರ ವಿರುದ್ಧ ಅರವಿಂದ ಕೇಜ್ರಿವಾಲ್ ಮಾನಹಾನಕಾರಿ ಹೇಳಿಕೆಗಳನ್ನು ನೀಡಬಾರದು ಎಂದು ಆದೇಶ ನೀಡಿ ವಿಚಾರಣೆಯನ್ನು ಮುಂದೂಡಿದೆ.
ಜನವರಿ 31ರಂದು ಆಮ್ ಆದ್ಮಿ ಪಕ್ಷದ ಸಭೆಯಲ್ಲಿ ಅಂದಿನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲಾ ದೇಶದ ಹಲವು ರಾಜಕೀಯ ಮುಖಂಡರನ್ನು ಭ್ರಷ್ಟರೆಂದು ಆರೋಪಿಸಿ ಪಟ್ಟಿ ಬಿಡುಗಡೆ ಮಾಡಿದ್ದರು. ಅದರಲ್ಲಿ ಸಂಸದ ಅನಂತ ಕುಮಾರ್ ಅವರ ಹೆಸರನ್ನು ಸೇರಿಸಿದ್ದರು. ಅರವಿಂದ ಕೇಜ್ರಿವಾಲಾ ತಮ್ಮ ವಿರುದ್ಧ ಆಧಾರ ರಹಿತ ಆರೋಪ ಮಾಡುವ ಮೂಲಕ ಪ್ರಚಾರ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಅನಂತ ಕುಮಾರ್ ನ್ಯಾಯಾಲಯದ ಮೊರೆ ಹೋಗಿದ್ದಾರೆ.












Click it and Unblock the Notifications