ಡಿ.ಕೆ.ಶಿವಕುಮಾರ್ ಸಿಎಂ ಆದ್ರೆ ಬೆಂಗಳೂರಿಗೆ ನಂಬರ್ 1 ಸ್ಥಾನ: ಏನಿದು ಲೆಕ್ಕಾಚಾರ?
ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಮಾತುಗಳು ಕೇಳಿಬರುತ್ತಿವೆ. ಎಲ್ಲೆಡೆಯೂ ಮುಂದಿನ ಸಿಎಂ ಡಿ.ಕೆ.ಶಿವಕುಮಾರ್ ಎಂದು ಹೇಳಲಾಗುತ್ತಿದೆ. ಈ ವಿಚಾರವಾಗಿ ಬಿಜೆಪಿ ಕೂಡ ಕಾಂಗ್ರೆಸ್ ನಾಯಕರ ಕಾಲೆಳೆಯುವ ಕೆಲಸ ಮಾಡಿದೆ. ಇದಕ್ಕೆ ಬೆಂಗಳೂರಿನ ಟ್ರಾಫಿಕ್ ಜಾಮ್ ವಿಚಾರವನ್ನು ಎಳೆದು ತಂದಿದೆ. ಬೆಂಗಳೂರಿನ ಟ್ರಾಫಿಕ್ ಜಾಮ್ ಕುರಿತಾಗಿ ಇತ್ತೀಚೆಗೆ ಬಿಡುಗಡೆಯಾಗಿರುವ ವರದಿಯನ್ನು ಉಲ್ಲೇಖಿಸಿ ಟೀಕಿಸಿದೆ.
ಜಗತ್ತಿಗೆ ಬ್ರ್ಯಾಂಡ್ ಆಗಿದ್ದ ಸಿಲಿಕಾನ್ ಸಿಟಿಯನ್ನು ಬ್ರ್ಯಾಂಡ್ ಬೆಂಗಳೂರು ಎನ್ನುತ್ತಲೇ ಬ್ಯಾಡ್ ಬೆಂಗಳೂರನ್ನಾಗಿ ಮಾಡಿದ್ದು ಕಾಂಗ್ರೆಸ್ ಸರ್ಕಾರದ ಬಹುದೊಡ್ಡ ಸಾಧನೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೇ ಆ ದಿನಗಳ ಕೊತ್ವಾಲ್ ಶಿಷ್ಯಂದಿರು ಬೆಂಗಳೂರನ್ನು ಅಸುರಕ್ಷಿತ ನಗರವನ್ನಾಗಿ ಮಾಡಿದ್ದಾರೆ ಎಂದು ಲೇವಡಿ ಮಾಡಿದೆ.

ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ಕೊತ್ವಾಲ್ ಶಿಷ್ಯಂದಿರ ಜತೆ ಸೇರಿಕೊಂಡು ಟ್ರಾಫಿಕ್ ಜಾಮ್ನಲ್ಲಿ ಬೆಂಗಳೂರನ್ನು ವಿಶ್ವದ ಮೂರನೇ ಸ್ಥಾನಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಅವರನ್ನು ಸೈಡ್ಗಿಟ್ಟು ಒಂದು ವೇಳೆ ಮುಖ್ಯಮಂತ್ರಿ ಆದರೆ ಟ್ರಾಫಿಕ್ ಜಾಮ್ನಲ್ಲಿ ಬೆಂಗಳೂರು ನಂಬರ್ 1 ಸ್ಥಾನ ಪಡೆಯುವುದು ಖಚಿತ ನಿಶ್ಚಿತ ಎಂದು ಕಾಲೆಳೆದಿದೆ. ಟಾಮ್ ಟಾಮ್ ವರದಿ ಪ್ರಕಾರ ಬೆಂಗಳೂರು ವಿಶ್ವದ ಅತಿ ಹೆಚ್ಚು ಟ್ರಾಫಿಕ್ ಜಾಮ್ ಆಗುವ ಮೂರನೇ ನಗರ ಎಂದು ಹೇಳಿದೆ. ಇದೇ ವಿಚಾರವನ್ನು ಉಲ್ಲೇಖಿಸಿ ಬಿಜೆಪಿ ಕಾಂಗ್ರೆಸ್ಗೆ ತಿರುಗೇಟು ನೀಡಿದೆ.
ಬೆಂಗಳೂರು ಅತ್ಯಂತ ಯೋಜಿತ ನಗರ ಎಂಬ ಹೆಗ್ಗಳಿಕೆ ಪಡೆದಿದೆ, ಉದ್ಯಾನ ನಗರಿಯೆಂಬ ಹಣೆಪಟ್ಟಿಯೊಂದಿಗೆ ಹಲವು ವೈಶಿಷ್ಟ್ಯಗಳಿಂದ ಜಗತ್ತಿನಾದ್ಯಂತ ಇರುವ ಜನರನ್ನು ನಿರಂತರ ಆಕರ್ಷಿಸುತ್ತಿದೆ. ಆದರೆ ಈ ಬೃಹತ್ ನಗರದ ಟ್ರಾಫಿಕ್ ಸಮಸ್ಯೆಯನ್ನು ಸುಧಾರಿಸಿ ಪರಿಹರಿಸುವಲ್ಲಿ ಕಾಂಗ್ರೆಸ್ ಸರ್ಕಾರದ ವಿಫಲತೆಯಿಂದಾಗಿ ಈಗ ಬೆಂಗಳೂರು ದೇಶದಲ್ಲಷ್ಟೇ ಅಲ್ಲ ವಿಶ್ವದಲ್ಲೇ '3 ನೇ ವಾಹನ ದಟ್ಟಣೆಯ ನಗರ' ಎಂಬ ಅಪಖ್ಯಾತಿಯ ಹಣೆಪಟ್ಟಿ ಹೊರುವ ಸ್ಥಿತಿಗೆ ತಲುಪಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ವಾಗ್ದಾಳಿ ನಡೆಸಿದ್ದಾರೆ.
ನೆದರ್ಲೆಂಡ್ನ ಲೊಕೇಷನ್ ಟೆಕ್ನಾಲಜಿ ಸಂಸ್ಥೆ ಬಿಡುಗಡೆ ಮಾಡಿರುವ ವಿಶ್ವದ ಪ್ರಮುಖ ನಗರಗಳ ಸಂಚಾರ ದಟ್ಟಣೆ ಕುರಿತ ವರದಿಯಲ್ಲಿ ಬೆಂಗಳೂರು ವಿಶ್ವದಲ್ಲೇ 3ನೇ ವಾಹನ ದಟ್ಟಣೆಯ ನಗರ ಎಂದು ಬಹಿರಂಗವಾಗಿದೆ. ಬೆಂಗಳೂರೆಂದರೆ ಉದ್ಯಾನ ನಗರಿ ಎಂಬ ಸಿರಿಯ ಘನತೆ ಇತ್ತು. ಆದರೆ ಈಗ ವಾಹನ ದಟ್ಟಣೆಗೆ ಸಿಲುಕಿ ನರಳುವ ನಗರ ಎಂಬ ಅಪಖ್ಯಾತಿಗೆ ಈಡಾಗುತ್ತಿದೆ ಎಂದು ದೂರಿದ್ದಾರೆ.

ರಾಜ್ಯದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬೃಹತ್ ಬೆಂಗಳೂರಿನ ಅಭಿವೃದ್ಧಿಯಂತೂ ಸಂಪೂರ್ಣ ನೆನೆಗುದಿಗೆ ಬಿದ್ದಿದೆ. 'ಬ್ರ್ಯಾಂಡ್ ಬೆಂಗಳೂರು' ಎನ್ನುವುದು ಕೇವಲ ಬೊಗಳೆ ಘೋಷಣೆ ಎಂಬುದು ಬೆಂಗಳೂರಿಗರಿಗೆ ಈಗಾಗಲೇ ಅರ್ಥವಾಗಿದೆ. ಟ್ರಾಫಿಕ್ ನಿಯಂತ್ರಣ ನಿಭಾಯಿಸುವಲ್ಲಿ ಈ ಸರ್ಕಾರ ತನ್ನ ಉಡಾಫೆತನ ಮುಂದುವರಿಸಿದಲ್ಲಿ, ಇದರ ಪರಿಣಾಮದಿಂದ ಔದ್ಯೋಗಿಕ, ಕೈಗಾರಿಕಾ, ಶೈಕ್ಷಣಿಕ ಹಾಗೂ ಆರ್ಥಿಕ ಕ್ಷೇತ್ರಗಳಿಗೆ ಪೆಟ್ಟುಬಿಳುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದು ಹೇಳಿದ್ದಾರೆ.












Click it and Unblock the Notifications