ಜನಾರ್ದನ ರೆಡ್ಡಿ ಪ್ರಕರಣ: ಬಿಜೆಪಿ ನಾಯಕರ ಬಾಯಿಗೆ ಹೈಕಮಾಂಡ್ ಬೀಗ
ಬೆಂಗಳೂರು, ನವೆಂಬರ್ 8: ಜನಾರ್ದನ ರೆಡ್ಡಿ ಕೋಟ್ಯಂತರ ರೂ ಮೋಸಮಾಡಿದ್ದಾರೆ ಹಾಗೂ ರದ್ದಾದ ನೋಟುಗಳನ್ನು ಬದಲಾಯಿಸಿಕೊಳ್ಳಲು ಪ್ರಯತ್ನ ಮಾಡಿದ್ದಲ್ಲದೆ ಇಡಿ ಅಧಿಕಾರಿಗೆ ಲಂಚ ನೀಡಿ ಡೀಲ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ವಿಚಾರ ಕುರಿತು ಯಾವುದೇ ಹೇಳಿಕೆ ನೀಡದಂತೆ ಬಿಜೆಪಿ ಹೈಕಮಾಂಡ್ ತನ್ನ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ಜನಾರ್ದನ ರೆಡ್ಡಿ ನಿವಾಸ ಹಾಗೂ ರೆಡ್ಡಿ ಆಪ್ತ ಅಲಿಖಾನ್ ಅವರ ಮನೆಯನ್ನು ಸಿಸಿಬಿ ಪೊಲೀಸರು ಜಪ್ತಿಮಾಡಿದ್ದಾರೆ, ಕೆಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ, ಲೈಸೆನ್ಸ್ ಇಲ್ಲದ ಗನ್ ಹಾಗೂ ಗುಂಡುಗಳು ಕೂಡ ಪತ್ತೆಯಾಗಿವೆ. ಜನಾರ್ದನ ರೆಡ್ಡಿ ಬಂಧನಕ್ಕೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಸಿಸಿಬಿ ಮಾಡಿಕೊಳ್ಳುತ್ತಿದೆ.
ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿಯೇ ರೆಡ್ಡಿಗೂ ಮತ್ತು ಬಿಜೆಪಿಗೆ ಯಾವುದೇ ಸಂಬಂಧವಿಲ್ಲ ಅಂತಾ ಹೇಳಲಾಗಿದೆ. ಇದೇ ನಿಲುವುವನ್ನು ರಾಜ್ಯ ಬಿಜೆಪಿ ನಾಯಕರು ಪ್ರದರ್ಶಿಸಬೇಕು ಎಂದು ಹೈಕಮಾಂಡ್ ಖಡಕ್ ಎಚ್ಚರಿಕೆಯನ್ನು ನೀಡಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹೈಕಮಾಂಡ್ ಎಲ್ಲಾ ರೀತಿಯ ಮಾಹಿತಿಯನ್ನು ಪಡೆದಿದ್ದು ರೆಡ್ಡಿಯ ಪರ ಅಥವಾ ವಿರೋಧ ಹೇಳಿಕೆ ನೀಡದಂತೆ ಸೂಚನೆ ನೀಡಿದ್ದಾರೆ. ಜನಾರ್ದನ ರೆಡ್ಡಿ ಜೊತೆಗಿನ ನಿಮ್ಮ ಸ್ನೇಹ ವೈಯಕ್ತಿಕವಾದದ್ದು, ನಿಮ್ಮ ಹೇಳಿಕೆ ಪಕ್ಷದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ ಹಾಗಾಗಿ ಯಾವುದೇ ಹೇಳಿಕೆಯನ್ನು ನೀಡಬೇಡಿ ಎಂದು ಸೂಚನೆ ನೀಡಿದ್ದಾರೆ ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ.












Click it and Unblock the Notifications