ಪ್ರತಾಪ್ ಸಿಂಹರಿಂದ ಮತ್ತೆ ಕಾನೂನು ಉಲ್ಲಂಘನೆಯಾದರೆ ಕಠಿಣ ಕ್ರಮ: ರಾಮಲಿಂಗಾರೆಡ್ಡಿ
ಬೆಂಗಳೂರು, ಡಿಸೆಂಬರ್ 04 : ಪದೇ ಪದೇ ಸಂಸದ ಪ್ರತಾಪ್ ಸಿಂಹ ಅವರು ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ಮುಂದುವರೆಸಿದರೆ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಮಾತನಾಡಿದ ಅವರು ಬಿಜೆಪಿಗೆ ಕಾನೂನಿನ ತಿಳಿವಳಿಕೆ ಇಲ್ಲ. ಆದರೆ ಪ್ರತಾಪ್ ಸಿಂಹ ಅವರಿಗೆ ಕಾನೂನಿನ ಬಗ್ಗೆ ಅರಿವಿದೆ. ಆದರೂ ಪದೇ ಪದೇ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದರು.
ಘಟನೆಗೆ ಜಿಲ್ಲಾಡಳಿತವೇ ಕಾರಣ : ಪ್ರತಾಪ್ ಸಿಂಹ
ನಿನ್ನೆ ಹುಣಸೂರಿನಲ್ಲಿ ಹನುಮ ಜಯಂತಿ ಮೆರವಣಿಗೆಗೆ ಅನುಮತಿ ನೀಡಿದ ಮಾರ್ಗದಲ್ಲಿ ಹೋಗಬೇಕಾಗಿತ್ತು. ಮಾರ್ಗ ಬದಲಾವಣೆ ಮಾಡಿದಾಗ ಪೊಲೀಸರು ತಡೆದಿದ್ದಾರೆ. ಪೊಲೀಸರ ಮೇಲೆ ಅಡ್ಡಾದಿಡ್ಡಿ ಕಾರು ಚಲಾಯಿಸಲು ಪ್ರತಾಪ್ಸಿಂಹ ಯತ್ನಿಸಿದ್ದಾರೆ. ಯಾರಿಗೂ ಅಂತಹ ಅಪಾಯಗಳಾಗಿಲ್ಲ ಎಂದರು.
ರಾಮಜಯಂತಿ, ಹನುಮಜಯಂತಿ, ದತ್ತಪೀಠ ಜಯಂತಿ ವಿಷಯದಲ್ಲಿ ಬಿಜೆಪಿಯವರಿಗಿಂತಲೂ ಕಾಂಗ್ರೆಸ್ನವರಿಗೆ ಹೆಚ್ಚಿನ ಭಕ್ತಿ ಇದೆ. ಬಿಜೆಪಿಯವರು ಕೇವಲ ರಾಜಕೀಯ ಕಾರಣಕ್ಕಾಗಿ ಇಂತಹ ಜಯಂತಿಗಳನ್ನು ಮಾಡಿ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಚುನಾವಣೆ ವರ್ಷದಲ್ಲಿ ಇದ್ದಕ್ಕಿದ್ದ ಹಾಗೆ ಬಿಜೆಪಿಯವರಿಗೆ ದೇವರ ಬಗ್ಗೆ ಭಕ್ತಿ ಹೆಚ್ಚಾಗುತ್ತದೆ ಎಂದು ರಾಮಲಿಂಗಾರೆಡ್ಡಿ ಲೇವಡಿ ಮಾಡಿದರು.
ತುಮಕೂರಿನಲ್ಲಿ ಪತ್ರಕರ್ತರ ಮೇಲೆ ಹಲ್ಲೆ ಮಾಡಿರುವ ಬಿಜೆಪಿ ನಾಯಕರನ್ನು ಕೂಡಲೇ ಬಂಧಿಸುವಂತೆ ಸೂಚನೆ ನೀಡಿದ್ದೇನೆ. ಹಲ್ಲೆ ಮಾಡಿದವರು ತಲೆ ಮರೆಸಿಕೊಂಡಿದ್ದಾರೆ. ಎಲ್ಲೇ ಇದ್ದರೂ ಹಿಡಿದು ಒಳಗೆ ಹಾಕುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರನ್ನು ಪ್ರತಾಪ್ ಸಿಂಹ ಗೂಂಡಾ ಎಂದು ಕರೆದಿದ್ದಾರೆ.
ಮೈಸೂರು ಎಸ್ಪಿ ರವಿ ಡಿ.ಚನ್ನಣ್ಣನವರ್ ಸಂದರ್ಶನ
ಬಿಜೆಪಿ ನಾಯಕರ ಇತಿಹಾಸಗಳನ್ನು ಕೆಣಕಿದರೆ ಯಾರು ಗೂಂಡಾಗಳು, ಯಾರು ಅಲ್ಲ ಎಂಬುದು ಗೊತ್ತಾಗಲಿದೆ. ಶೀಘ್ರವೇ ಈ ಬಗ್ಗೆ ಮಾಹಿತಿಯೊಂದಿಗೆ ಮಾತನಾಡುತ್ತೇನೆ ಎಂದರು. ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ಈಗಿರುವ ಪೊಲೀಸ್ ಠಾಣೆಗಳಲ್ಲೇ ಕಚೇರಿ ಆರಂಭಿಸುವುದಾಗಿ ಗೃಹ ಸಚಿವರು ತಿಳಿಸಿದರು. ಪೊಲೀಸ್ ಸಿಬ್ಬಂದಿಗಳ ಕೊರತೆ ನೀಗಿಸಲು 2 ಸಾವಿರ ಹುದ್ದೆಗಳ ನೇಮಕಾತಿ ನಡೆದಿದೆ ಎಂದು ಅವರು ಹೇಳಿದರು.