ಹೊಸಕೋಟೆ: ಮಗನಿಗೆ ಟಿಕೆಟ್ ಕೊಡಿಸಿದ ಬಚ್ಚೇಗೌಡ, ಜಿದ್ದಾಜಿದ್ದಿನ ಕಣ
Recommended Video
ಹೊಸಕೋಟೆ, ಏಪ್ರಿಲ್ 10: ತಮ್ಮ 30ನೇ ವಯಸ್ಸಿನಿಂದಲೇ ಸಕ್ರಿಯ ರಾಜಕೀಯಕ್ಕೆ ಧುಮುಕಿದ್ದ ಹೊಸಕೋಟೆಯ ಪಾಳೆಗಾರ ವಂಶದ ಬಿ.ಎನ್.ಬಚ್ಚೇಗೌಡ 40 ವರ್ಷ ಸತತವಾಗಿ ವಿಧಾನಸಭೆ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಲೇ ಬಂದಿದ್ದರು ಆದರೆ ಈ ಬಾರಿ ಅವರು ವಿಧಾನಸಭಾ ಕಣದಿಂದ ಹಿಂದೆ ಸರಿದು ತಮ್ಮ ಮಗನನ್ನು ವಿಧಾನಸೌಧದಲ್ಲಿ ಕೂರಿಸಲು ಶ್ರಮಿಸುತ್ತಿದ್ದಾರೆ.
ಕಾಂಗ್ರೆಸ್ ಮುಖಂಡನಿಂದ ಬಿಜೆಪಿ ಮುಖಂಡನ ಮೇಲೆ ಗನ್ ಫೈರ್
ಬಿಜೆಪಿಯ ಬಚ್ಚೇಗೌಡ ಅವರು ತಮ್ಮ ಪುತ್ರ ಶರತ್ ಬಚ್ಚೇಗೌಡ ಅವರಿಗೆ ಬಿಜೆಪಿ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದು, ಮೊದಲ ಬಾರಿಗೆ ಶರತ್ ಬಚ್ಚೇಗೌಡ ಅವರು ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ. ಅದೂ ಬಚ್ಚೇಗೌಡ ಅವರ ಬಹುಕಾಲದ ರಾಜಕೀಯ ವಿರೋಧಿ ಕಾಂಗ್ರೆಸ್ನ ಎಂಟಿಬಿ ನಾಗರಾಜು ವಿರುದ್ಧ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಈ ವರೆಗೆ ಯಾವ ಚುನಾವಣೆಯನ್ನೂ ಸ್ಪರ್ಧಿಸದಿದ್ದ ಶರತ್ ಅವರು ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದು, ಈಗಾಗಲೇ ಅವರು ಪ್ರಚಾರ ಪ್ರಾರಂಭಿಸಿದ್ದಾರೆ. ಯಡಿಯೂರಪ್ಪ ಅವರೂ ಕೂಡಾ ಎರಡು ಬಾರಿ ಹೊಸಕೋಟೆಗೆ ಪ್ರಚಾರಕ್ಕಾಗಿ ಆಗಮಿಸಿದ್ದಾರೆ.
ಬಚ್ಚೇಗೌಡರು ಆಳಿದ್ದ ಹೊಸಕೋಟೆ
ಹೊಸಕೋಟೆ ಕ್ಷೇತ್ರ ರಾಜ್ಯದ ಅತ್ಯಂತ ಸೂಕ್ಷ್ಮ ಕ್ಷೇತ್ರಗಳಲ್ಲಿ ಒಂದು. ಅಲ್ಲಿ ಇತ್ತೀಚಿನವರೆಗೆ ಬಚ್ಚೇಗೌಡರ ಮಾತೇ ವೇದವಾಕ್ಯ, ಭಯದಿಂದಲೋ, ಗೌರವದಿಂದಲೊ ಒಟ್ಟಿನಲ್ಲಿ ಬಚ್ಚೇಗೌಡ ಅವರು ಹೊಸಕೋಟೆಯ ಅನಭಿಶಿಕ್ತ ದೊರೆಯಾಗಿ ಮೆರೆದಿದ್ದರು. ಇತ್ತೀಚಿನ ವರ್ಷಗಳಲ್ಲಿ ಪರಿಸ್ಥಿತಿ ಅಲ್ಪವಷ್ಟೆ ಬದಲಾದಂತೆ ಕಾಣುತ್ತಿದೆ, ಕಾಂಗ್ರೆಸ್ನ ಎಂಟಿಬಿ ನಾಗರಾಜು ಬಚ್ಚೇಗೌಡ ಅವರ ಪ್ರಬಲ ಪ್ರತಿನಾಯಕನಾಗಿ ಬೆಳೆದರು.
ಬಚ್ಚೇಗೌಡರ ಚುನಾವಣಾ ಇತಿಹಾಸ
1978ರಲ್ಲಿ ಮೊದಲ ಬಾರಿಗೆ ಜನತಾ ಪಕ್ಷದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದ ಬಚ್ಚೇಗೌಡ ಅವರು 15000 ಕ್ಕೂ ಹೆಚ್ಚು ಮತ ಪಡೆದು ವಿಜಯ ಸಾಧಿಸಿದ್ದರು. ಆದರೆ ಕಾರಣಾಂತರದಿಂದ 1983ರ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ಮತ್ತೆ 1985ರಲ್ಲಿ ಸ್ಪರ್ಧಿಸಿ ಗೆದ್ದರು, ಆ ನಂತರ ಮತ್ತೆ 1989ರಲ್ಲಿ ಕಾಂಗ್ರೆಸ್ನ ಚಿಕ್ಕೇಗೌಡ ಅವರ ವಿರುದ್ಧ ಸೋಲು ಕಂಡರು. ಆ ನಂತರ ಸತತ ಎರಡು ಬಾರಿ ಗೆಲುವು (1994,1999) ಸಾಧಿಸಿ ಹೊಸಕೋಟೆಯನ್ನು ತಮ್ಮ ಹಿಡಿತಕ್ಕೆ ಪಡೆದುಕೊಂಡರು. 2004ರ ಚುನಾವಣೆಯಲ್ಲಿ ಮೊದಲ ಬಾರಿಗೆ ಬಚ್ಚೇಗೌಡ ಅವರ ಕೋಟೆಯನ್ನು ಭೇಧಿಸಿ ಕಾಂಗ್ರೆಸ್ನ ಎಂಟಿಬಿ ನಾಗರಾಜು ವಿಜಯ ಸಾಧಿಸಿದರು.
ಕಳೆದ ಚುನಾವಣೆಯಲ್ಲಿ ಸೋಲು
ಆ ಚುನಾವಣೆ ನಂತರ ಜೆಡಿಎಸ್ ತೊರೆದು ಬಿಜೆಪಿ ಸೇರಿದ ಬಚ್ಚೇಗೌಡ ಅವರು 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ವಿಜಯ ಸಾಧಿಸಿದರು. ಅಲ್ಲಿ ಕಾರ್ಮಿಕ ಸಚಿವರೂ ಆದರು. ಆದರೆ ಮತ್ತೆ ಕಳೆದ ಚುನಾವಣೆಯಲ್ಲಿ ಮತ್ತೆ ಎಂಟಿಬಿ ನಾಗರಾಜು ಎದುರು ಸೋಲನುಭವಿಸಿದರು. ಆದರೆ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯಲಿಲ್ಲ.
ಲೋಕಸಭೆಯಲ್ಲೂ ಸೋಲು
ಕಳೆದ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಚ್ಚೇಗೌಡ ಅವರು ವೀರಪ್ಪ ಮೊಯ್ಲಿ ವಿರುದ್ಧ ಸೋಲು ಕಂಡಿದ್ದರು. ಈಗಲೂ ಮತ್ತೆ ಲೋಕಸಭೆಯಿಂದಲೇ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿರುವ ಕಾರಣ ಹಾಗೂ ಮಗನನ್ನು ರಾಜಕೀಯದಲ್ಲಿ ಭದ್ರ ಪಡಿಸುವ ಹಿನ್ನೆಲೆಯಲ್ಲಿ 40 ವರ್ಷದಲ್ಲಿ ಎರಡನೇ ಬಾರಿಗೆ ವಿಧಾನಸಭೆ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ ಬಚ್ಚೇಗೌಡ.
ಎಂಜಿನಿಯರಿಂಗ್ ಪದವೀಧರ ಶರತ್
ಎಂಜಿನಿಯರಿಂಗ್ ಪದವೀಧರ ಶರತ್ ಬಚ್ಚೇಗೌಡ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿದಿದ್ದು, ಕಳೆದ ಒಂದು ವರ್ಷದಿಂದ ಪಕ್ಷ ಸಭೆಗಳಲ್ಲಿ ಭಾಗವಹಿಸಿ ಕಾರ್ಯಕರ್ತರೊಂದಿಗೆ ಒಡನಾಡುತ್ತಿದ್ದಾರೆ. ಸಕ್ರಿಯ ರಾಜಕೀಯಕ್ಕೆ ಹೊಸಬರಾಗಿರುವ ಶರತ್ ಅವರು ಸಂಪೂರ್ಣ ತಮ್ಮ ತಂದೆಯ ಪ್ರಭಾವಳಿ ಬಳಸಿಯೇ ಚುನಾವಣೆ ಗೆಲ್ಲಲು ಶ್ರಮಿಸುತ್ತಿದ್ದಾರೆ.
ಒಕ್ಕಲಿಗ, ಕುರುಬ ಬಹುಸಂಖ್ಯಾತರು
ಹೊಸಕೋಟೆ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರವೂ ಪ್ರಮುಖವಾಗಿದ್ದು, ಪ್ರಮುಖವಾಗಿ ಒಕ್ಕಲಿಗ ಮತ್ತು ಕುರುಬ ಮತಗಳು ಬಹುತೇಕ ಸಮಾನ ಸಂಖ್ಯೆಯಲ್ಲಿವೆ. ಹಾಗಾಗಿ ಇಲ್ಲಿ ಅಲ್ಪಸಂಖ್ಯಾತ ಮತ್ತು ದಲಿತ ಮತಗಳು ನಿರ್ಣಾಯಕ ಆಗುವ ಸಾಧ್ಯತೆ ಹೆಚ್ಚಿವೆ.
ಬಚ್ಚೇಗೌಡರ ಕೋಟೆ ಒಡೆದ ನಾಗರಾಜು
ಎಂಟಿಬಿ ನಾಗರಾಜು ವರ್ಷದಿಂದ ವರ್ಷಕ್ಕೆ ಬೆಂಬಲಿಗರನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಏಕಮೇವಾಧಿಪತ್ಯ ಸಾಧಿಸಿದ್ದ ಬಚ್ಚೇಗೌಡರ ವಿರುದ್ಧ ದೊಡ್ಡದಾಗಿಯೇ ಬೆಳೆದಿದ್ದಾರೆ ಹಾಗಾಗಿ ಅವರನ್ನು ಸೋಲಿಸುವುದು ಸುಲಭವಲ್ಲ. ಹೊಸಕೋಟೆಯ ಬಹುಸಂಖ್ಯಾತ ಸಮುದಾಯ ಕುರುಬ ಜನಾಂಗವನ್ನು ಪ್ರತಿನಿಧಿಸುವ ನಾಗರಾಜು ಅವರನ್ನು ಸೋಲಿಸಲು ದಲಿತ ಹಾಗೂ ಅಲ್ಪಸಂಖ್ಯಾತ ಮತಗಳ ಮೊರೆ ಹೋಗಬೇಕಿದೆ. ಆದರೆ ಕಾಂಗ್ರೆಸ್ ಪಕ್ಷ ಅವರೆಡೂ ಸಮುದಾಯದ ಮತದ ಮೇಲೆ ಹಿಡಿತ ಸಾಧಿಸಿರುವುದರಿಂದ ಬಿಜೆಪಿಗೆ ಗೆಲುವು ಸುಲಭವಲ್ಲ.
ಬಚ್ಚೇಗೌಡರಿಗೆ ಮಾತ್ರ ಸತತ ಎರಡು ಗೆಲವು
ಹೊಸಕೋಟೆ ಕ್ಷೇತ್ರದಲ್ಲಿ ಪ್ರತಿ 5 ವರ್ಷಕ್ಕೆ ಹೊಸ ಪಕ್ಷವನ್ನು ಗೆಲ್ಲಿಸುವ ಪರಿಪಾಠ ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ (ಬಚ್ಚೇಗೌಡರು ಸತತ ಎರಡು ಗೆಲುವು ಸಾಧಿಸಿದ್ದರು), ಈ ಬಾರಿಯೂ ಇದೇ ಪುನರಾವರ್ತನೆ ಆಗುತ್ತದೆಯೋ ಅಥವಾ ಪ್ರಮುಖ ಕುರುಬ ನಾಯಕ ಎಂಟಿಬಿ ಅವರೇ ವಿಜಯಿಯಾಗುತ್ತಾರೊ ಕಾದು ನೋಡಬೇಕಿದೆ.